ಏಫ್ ಸಿ, ಉದ್ಯಮಿ‌ ಒಕ್ಕಲಿಗದ ವತಿಯಿಂದ ಪ್ರತಿನಿಧಿಗಳ ಮತ್ತು ಹೂಡಿಕೆದಾರರ ಎರಡನೇ ವಾರ್ಷಿಕ ಸಮಾವೇಶ

0

ಕೋಲಾರ: ಫಸ್ಟ್ ಸರ್ಕಲ್ (ಎಫ್ ಸಿ) ಮತ್ತು ಉದ್ಯಮಿ ಒಕ್ಕಲಿಗದ ಪ್ರತಿನಿಧಿಗಳ ಮತ್ತು ಹೂಡಿಕೆದಾರರ ಎರಡನೇ ವಾರ್ಷಿಕ ಸಮಾವೇಶ 2025 ಕೋಲಾರದ ನಂದಿನಿ ಪ್ಯಾಲೇಸ್ ನಲ್ಲಿ ಇತ್ತೀಚೆಗೆ ನಡೆಯಿತು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ‌ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಪದ್ಮಶ್ರೀ ಪುರಸ್ಕೃತ ಆಕ್ಸೇಲ್ ಪಾರ್ಟನರ್ಸ್ ನ ಸಹ ಸಂಸ್ಥಾಪಕ ಮತ್ತು ಪಾಲುದಾರ ಪ್ರಶಾಂತ್ ಪ್ರಕಾಶ್ ಅವರು ಸಮಾವೇಶವನ್ನು ಉದ್ಘಾಟಿಸಿದರು.


ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಇದೊಂದು ವಿಶೇಷವಾದ ಕಾರ್ಯಕ್ರಮ. ಉದ್ಯಮಿ ಒಕ್ಕಲಿಗ ಅಸ್ಥಿತ್ವಕ್ಕೆ ಬಂದ ನಂತರ ಒಕ್ಕಲಿಗರು ಪರಸ್ಪರ ಸಂಪರ್ಕಿಸುವಂತಾಗಿದೆ. ಉದ್ಯಮಿ ಒಕ್ಕಲಿಗ ಕೇವಲ ಆರ್ಥಿಕತೆ ಮತ್ತು ಬದುಕಿಗೆ ಸಂಬಂಧಪಟ್ಟ ಕೆಲಸವನ್ನಷ್ಟೇ ಮಾಡುತ್ತಿಲ್ಲ. ಹೃದಯಗಳನ್ನು ಬೆಸೆಯುವಂತಹ ಕಾರ್ಯವನ್ನೂ ಮಾಡುತ್ತಿದೆ. ಅಕ್ಷರಸ್ಥ ವ್ಯಕ್ತಿ ಉದ್ಯೋಗ ಮಾಡದೆ ಮನೆಯಲ್ಲೇ ಕುಳಿತುಕೊಂಡರೆ ಅವನು ಕುಟುಂಬ ಹಾಗೂ ಸಮಾಜದ ಮೊದಲ ಶತ್ರುವಾಗುತ್ತಾನೆ. ಇಂತಹ ವ್ಯಕ್ತಿಗೆ ಉದ್ಯೋಗ ಕೊಡಬೇಕು ಅಥವಾ ಇನ್ನೊಬ್ಬರಿಗೆ ಉದ್ಯೋಗ ಕೊಡಿಸುವಂತವನನ್ನಾಗಿ ಮಾಡಲು ಜ್ಞಾನ ನೀಡಬೇಕು ಎಂದರು.


ಸಮ್ಮಿತ್ ಎಂಬ ವಿಶೇಷ ಶಾಲೆ ಪ್ರಾರಂಭಿಸುತ್ತಿದ್ದೇವೆ. ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ತಪ್ಪಲಿನಲ್ಲಿ ಸಂಸ್ಥೆ ತೆರೆಯುತ್ತಿದ್ದು, ಈ ಕಟ್ಟಡ‌ ಮಾಡಿಸಿಕೊಡುವ ಪುಣ್ಯದ ಕಾರ್ಯವನ್ನು ಪ್ರಶಾಂತ್ ಪ್ರಕಾಶ್ ಅವರು ಮಾಡುತ್ತಿದ್ದಾರೆ. ಈ ಶಾಲೆಗೆ ಸೇರುವ ಅತ್ಯಂತ ಕಡುಬಡವರಾಗಿರಬೇಕು ಮತ್ತು ಬುದ್ಧಿಶಾಲಿಯಾಗಿರಬೇಕು. ಒಕ್ಕಲಿಗ ಸಮುದಾಯದ ಶೇ. 85 ರಷ್ಟು ಮಕ್ಕಳನ್ನು ಪ್ರತಿ ವರ್ಷ ದಾಖಲಾತಿ ಮಾಡಲಾಗುವುದು. ಉಳಿದ ಸೀಟುಗಳನ್ನು ಇತರೆ ಸಮುದಾಯದ ಮಕ್ಕಳಿಗೆ ನೀಡಲಾಗುವುದು ಎಂದರು.


ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ಜಯರಾಮ್ ರಾಯಪುರ ಅವರು ಉತ್ತಮವಾದ ವೇದಿಕೆ ಸೃಷ್ಟಿಸಿದ್ದಾರೆ. ವ್ಯವಸಾಯವೇ ಒಕ್ಕಲಿಗರ ವೃತ್ತಿ. ಬದಲಾದ ಕಾಲಘಟ್ಟದಲ್ಲಿ ಇಂದು ಉದ್ಯಮಿಗಳಾಗಿ ಹೊರಹೊಮ್ಮುತ್ತಿದ್ದಾರೆ. ಕೋಲಾರದಲ್ಲಿ ಈ ಹಿಂದೆ ಕೆಲವು ಕಡೆಗಳಲ್ಲಿ ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಿದ್ದವು. ಇಂದು ಜಿಲ್ಲೆಯ ಅನೇಕ ಕಡೆಗಳಲ್ಲಿ ಸ್ಥಾಪನೆಗಳಾಗಿವೆ. ರೇಷ್ಮೆ ಬೆಳೆ, ಹೈನುಗಾರಿಕೆಯೂ ಕೈಹಿಡಿದಿದೆ. ಚಿಂತಾಮಣಿಯಲ್ಲಿ ಎರಡೂವರೆ ಸಾವಿರ ಎಕರೆಗಿಂತ ಹೆಚ್ಚಿನ ಭೂಮಿಯಲ್ಲಿ ಕೈಗಾರಿಗಳನ್ನು ಸ್ಥಾಪಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ. ರೈತರಿಗೆ ಉತ್ತಮ‌ ಬಲೆ ನೀಡುವ ಪ್ರಯತ್ನವನ್ನೂ ಮಾಡಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ 20 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಹೂವಿನ ಮಾರುಕಟ್ಟೆ ಸ್ಥಾಪಿಸುವ ಕೆಲಸ ಮಾಡುತ್ತಿದ್ದೇವೆ. 141 ಕೋಟಿ ರೂಪಾಯಿಯ ವಿಸ್ತೃತ ಯೋಜನಾ ವರದಿ ತಯಾರಿಸಿ ಮುಖ್ಯಮಂತ್ರಿ ಅವರಿಗೆ ಒಪ್ಪಿಸಿದ್ದೇವೆ. ಸದ್ಯದಲ್ಲೇ ಸಿಹಿ ಸುದ್ದಿ ಸಿಗಲಿದೆ ಎಂದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಪ್ರಶಾಂತ್ ಪ್ರಕಾಶ್, ದೇವನಹಳ್ಳಿ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳು ಕರ್ನಾಟಕ ಹಾಗೂ ಭಾರತ ಆರ್ಥಿಕ ಕೇಂದ್ರಗಳಾಗಲಿವೆ. ನಾವು ಸರಿಯಾದ ಸ್ಥಳದಲ್ಲಿದ್ದೇವೆ. ಹೊಸ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಉತ್ಪಾದನೆಯಲ್ಲಿ ಉತ್ತಮ ಆರ್ಥಿಕತೆಯನ್ನು ಸಾಧಿಸಬಹುದಾಗಿದೆ ಎಂದರು.


ಐಆರ್ ಎಸ್ ಅಧಿಕಾರಿ ಹಾಗೂ ಎಫ್ ಸಿ ಚೀಫ್ ಮೆಂಟರ್ ಜಯರಾಮ್ ರಾಯಪುರ ಮಾತನಾಡಿ, ಫಸ್ಟ್ ಸರ್ಕಲ್ ಕೆಲವೊಂದು ತಾಲೂಕುಗಳಲ್ಲಿ ಸ್ಥಾಪನೆಯಾಗಿದ್ದು, ಇನ್ನೂ ಹಲವೆಡೆ ವಿಸ್ತರಣೆ ಮಾಡಲಾಗುವುದು. ಇಸ್ರೇಲ್ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಹಂತದಲ್ಲಿದ್ದೇವೆ. ಸದ್ಯ ಯುದ್ಧದ ಕಾರಣದಿಂದಾಗಿ ತಡವಾಗುತ್ತದೆ. ಇಸ್ರೇಲ್ ತಂತ್ರಜ್ಞಾನವನ್ನು ಬಳಸಿಕೊಂಡು ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶ ಹೊಂದಿದ್ದೇವೆ. ಮೂರು ನಾಲ್ಕು ತಿಂಗಳಿನಿಂದ ಮಾತಕತೆ ನಡೆಯುತ್ತಿದೆ. ಮೊದಲು ಕೋಲಾರ ಭಾಗದಿಂದಲೇ ಇಸ್ರೇಲ್ ತಂತ್ರಜ್ಞಾನ ಅಳವಡಿಸಲಾಗುವುದು ಎಂದರು.


ಒಕ್ಕಲಿಗರ ಅಸ್ಮಿತೆಯನ್ನು ಗುರುತಿಸಲು ಬಂಡಿ ದೇವರ ಉತ್ಸವವನ್ನು ದೊಡ್ಡಮಟ್ಟದಲ್ಲಿ ನಡೆಸುವ ಉದ್ದೇವನ್ನು ಹೊಂದಿದ್ದೇವೆ. ಮೂರು ದಿನಗಳ ಕಾಲ ಈ ಉತ್ಸವ ನಡೆಯಲಿದೆ. ಅಲ್ಲದೆ ಕೆಂಪೇಗೌಡ ಅವರ ಜಯಂತಿ ಪ್ರಯುಕ್ತ ನಾಡಿನೆಲ್ಲೆಡೆ ದಾಸೋಹ ನಡೆಸಲಾಗುವುದು ಎಂದರು.


ಸಮಾವೇಶದಲ್ಲಿ ಫಸ್ಟ್ ಸರ್ಕಲ್ ನ ಫಸ್ಟ್ ಬುಕ್ ಅನ್ನು ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಬಿಡುಗಡೆಗೊಳಿಸಿದರು‌. ಯೋಗ ದಿನಾಚರಣೆ ಹಿನ್ನೆಲೆ ಮೂರು ಬಾರಿ ರಾಷ್ಟ್ರೀಯ ಚಿನ್ನದ ಪದಕಗಳನ್ನು ಗೆದ್ದ ಚಾಂಪಿಯನ್ ಚೈತನ್ಯ ಅವರಿಂದ ಯೋಗ ಪ್ರದರ್ಶನ ನಡೆಯಿತು. ಯೋಗ ತರಬೇತುದಾರ ಶ್ರೀನಿವಾಸ್ ರೆಡ್ಡಿ ಅವರು ಸಭಿಕರಿಗೆ ಯೋಗಾಭ್ಯಾಸ ಮಾಡಿಸಿದರು.


ಎಂಎಲ್ ಸಿ ಗೋವಿಂದ ರಾಜು, ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಂಗಳನಾಥ ಸ್ವಾಮೀಜಿ, ಶ್ರೀ ಸ್ಪಟಿಕಾಪುರಿ ಮಹಾಸಂಸ್ಥಾನ‌ ಮಠದ ಡಾ.ನಂಜಾವಧೂತ ಸ್ವಾಮೀಜಿ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಡಾ.ಆನಂದ ರಮೇಶ್, ಎಲುವಳ್ಳಿ ಎನ್ ರಮೇಶ್, ಡೈಕನ್ ಹೈಡ್ರಾಲೊಕ್ಸ್ ಮಾಲಕ ಬಿ ಜಿ ರಾಮಕೃಷ್ಣಪ್ಪ, ಶಿಲ್ಪಾ ಗೌಡ, ಬೆಂಗಳೂರು ಇಂಟರ್ನ್ಯಾಷನಲ್ ಅಕಾಡೆಮಿಯ ಡಿ ಮುನಿರಾಜು, ಯುನೈಟೆಡ್ ಡೆವಲಪರ್ಸ್ ನ ವ್ಯವಸ್ಥಾಪಕ ಪಾಲುದಾರ ನಯನಕುಮಾರ್ ಗೌಡ, ಕೋಲಾರ ಎಫ್ ಸಿ ಮುಖ್ಯಸ್ಥೆ ಚೌಡೇಶ್ವರಿ, ರಾಜ್ಯ ಎಫ್ ಸಿ ಸಂಯೋಜಕ ಎಂ ಅಮರೇಶ್, ಎಫ್ ಸಿ ಕೆಜಿಫ್ ನ ಅಮುಲಕ್ಷಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಕೋಲಾರ ಎಫ್ ಸಿ ಮುಖ್ಯಸ್ಥ, ಉದ್ಯಮಿ ಸಿ ಎಂ ಆರ್ ಶ್ರೀನಾಥ್ ಸ್ವಾಗತಿಸಿ, ಚಿಕ್ಕಬಳ್ಳಾಪುರ ಎಫ್ ಸಿ ಮುಖ್ಯಸ್ಥ ಆಂಜನೇಯ ರೆಡ್ಡಿ ವಂದಿಸಿದರು. ಸ್ಮತಾ ಮತ್ತು ಧನಂಜಯ್ ನಿರೂಪಿಸಿದರು.

LEAVE A REPLY

Please enter your comment!
Please enter your name here