ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಕಲಾ ಮಂದಿರದಲ್ಲಿ ಜೂ. 30ರಿಂದ ಯಕ್ಷಗಾನ ತಾಳಮದ್ದಳೆ ಸಪ್ತಾಹ, ‘ಕುರಿಯ ಪ್ರಶಸ್ತಿ’ ಪ್ರದಾನ

0

ಪುತ್ತೂರು: ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಜಿರೆ ಇವರ ಜಂಟಿ ಆಶ್ರಯದಲ್ಲಿ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ಜೂ.30ರಿಂದ ಜು.6ರ ತನಕ ‘ಶ್ರೀ ಸುಕೃತೀಂದ್ರ ಕಲಾ ಮಂದಿರ’ದಲ್ಲಿ ಸಂಜೆ 4 ರಿಂದ 8 ರ ತನಕ ಪ್ರಸಿದ್ಧ ಕಲಾವಿದರಿಂದ ವಿವಿಧ ಆಖ್ಯಾನಗಳ ತಾಳಮದ್ದಳೆಗಳು ನಡೆಯಲಿವೆ.


ಜೂ.30 ಸಂಜೆ ಸಪ್ತಾಹದ ಉದ್ಘಾಟನೆಯನ್ನು ಯಕ್ಷಗಾನ ದಶಾವತಾರಿ ಕೆ.ಗೋವಿಂದ ಭಟ್ ನೆರವೇರಿಸಲಿದ್ಧಾರೆ. ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನ ಮಾಲಕ ಬಲರಾಮ ಆಚಾರ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಅಶೋಕ ನಾಮದೇವ ಪ್ರಭು ಹಾಗೂ ಕಲ್ಲಾರೆ ಶ್ರೀ ರಾಘವೇಂದ್ರ ಮಠದ ಕಾರ್ಯದರ್ಶಿ ಯು ಪೂವಪ್ಪ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಜು.6ಕ್ಕೆ ಸಂಜೆ ಗಂಟೆ 4ಕ್ಕೆ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಇವರ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಹೊನ್ನಾವರದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ,) ಕೆರೆಮನೆ-ಗುಣವಂತೆ ಹಾಗೂ ಹಿರಿಯ ಸ್ತ್ರೀವೇಷಧಾರಿ ಕೊಕ್ಕಡ ಈಶ್ವರ ಭಟ್ಟರಿಗೆ ‘ಕುರಿಯ ಪ್ರಶಸ್ತಿ’ ಪ್ರದಾನಿಸಲಾಗುವುದು.

ಈ ಸಂದರ್ಭದಲ್ಲಿ ಬೆಂಗಳೂರಿನ ಉದ್ಯಮಿ, ಕಲಾಪೋಷಕ ಆರ್.ಕೆ.ಭಟ್ಟರಿಗೆ ‘ಕುರಿಯ ಸ್ಮೃತಿ ಗೌರವ’ ನೀಡಿ ಸಂಮಾನಿಸಲಾಗುವುದು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರಿನ ದ್ವಾರಕಾ ಕಾರ್ಪೋರೇಶನ್ ಪ್ರೈ ಲಿ., ಇದರ ವ್ಯವಸ್ಥಾಪನಾ ನಿರ್ದೇಶಕ ಗೋಪಾಲಕೃಷ್ಣ ಭಟ್ ಮುಖ್ಯ ಅಭ್ಯಾಗತರಾಗಿ ಉಪಸ್ಥಿತಿಯಲ್ಲಿರುತ್ತಾರೆ. ದಿ. ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟರ ಸಂಸ್ಮರಣೆಯನ್ನು ಹಿರಿಯ ಆರ್ಥದಾರಿ ವೆಂಕಟರಾಮ ಭಟ್ ಸುಳ್ಯ ಮಾಡಲಿದ್ದಾರೆ. ಜೂ.30ರಿಂದ ಜುಲೈ 6ರತನಕ ಅನುಕ್ರಮವಾಗಿ “ತರಣಿಸೇನ ಕಾಳಗ, ಶಲ್ಯ ಸಾರಥ್ಯ, ದಕ್ಷಾಧ್ವರ, ದಮಯಂತಿ ಪುನಃ ಸ್ವಯಂವರ, ಕೃಷ್ಣಾರ್ಜುನ ಕಾಳಗ, ವಾಲಿ ವಧೆ, ಗುರುದಕ್ಷಿಣೆ” ಪ್ರಸಂಗಗಳ ತಾಳಮದ್ದಳೆ ಜರುಗಲಿದೆ. ಎಲ್ಲಾ ಕಲಾಭಿಮಾನಿಗಳಿಗೆ ಮುಕ್ತ ಪ್ರವೇಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here