ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಮಾರ್ಗದ ನಿರ್ವಹಣೆಯ ಕೊರತೆಯಿಂದಾಗಿ ತೊಂದರೆಯಾಗುತ್ತಿರುವುದಾಗಿ ಸಾರ್ವಜನಿಕರ ಆರೋಪವಾಗಿದೆ. ವಾರದಲ್ಲಿ ಒಂದು, ಎರಡು ದಿನ ವಿದ್ಯುತ್ ನಿರ್ವಹಣೆ ಹಿನ್ನಲೆ ವಿದ್ಯುತ್ ಕಡಿತಗೊಳಿಸುತ್ತಿದ್ದು, ಈ ಕಾಮಗಾರಿಯ ಫಲಿತಾಂಶ ಗೋಚರವಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

“ನಿರ್ವಹಣೆ” ಎಂಬ ನೆಪದಲ್ಲಿ ಬೆಳಗ್ಗೆ 10 ರಿಂದ ಸಂಜೆ 5, ಕೆಲವೊಮ್ಮೆ 7 ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಮಳೆಗಾಲದಲ್ಲಿ ತುರ್ತು ಸಂದರ್ಭಗಳಲ್ಲಿ ಸಮಸ್ಯೆ ಎದುರಾಗುವುದು ಸಹಜವಾದರೂ, ಇತರ ಕಾಲದಲ್ಲಿ ನಿರ್ವಹಣೆಯ ಕೊರತೆ ಕಂಡುಬರುತ್ತಿದೆ. ರಸ್ತೆ ಬದಿಯ ವಿದ್ಯುತ್ ಕಂಬಗಳ ಮೇಲೆ ಬಳ್ಳಿಗಳು ಮತ್ತು ಮರದ ಕೊಂಬೆಗಳು ತಾಕಿಕೊಂಡಿರುವುದು ಸಾಮಾನ್ಯವಾಗಿ ಕಾಣಸಿಗುತ್ತವೆ. ಉದಾಹರಣೆ ಎಂಬಂತೆ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ರಸ್ತೆ ಬದಿಯ ಕಂಬಗಳಲ್ಲಿ ಬಳ್ಳಿಗಳು ಚಪ್ಪರದಂತೆ ಹರಡಿಕೊಂಡಿದೆ.

ಜನಸಂಪರ್ಕ ಸಭೆಗಳಲ್ಲಿ ಈ ವಿಷಯವನ್ನು ಗಮನಕ್ಕೆ ತಂದರೂ, ಮೆಸ್ಕಾಂ ಸಿಬ್ಬಂದಿ ಮತ್ತು ಕೆಳಹಂತದ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲವೆಂಬುದು ಸಾರ್ವಜನಿಕರ ಆರೋಪವಾಗಿದೆ. ವಿದ್ಯುತ್ ಬಳಕೆದಾರರಾಗಿ, ಮೆಸ್ಕಾಂ ಮತ್ತು ಸಂಬಂಧಿತ ಇಲಾಖೆಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ವಿದ್ಯುತ್ ಕಂಬಗಳಿಂದ ಬಳ್ಳಿಗಳು ಮತ್ತು ಮರದ ಕೊಂಬೆಗಳನ್ನು ತೆರವುಗೊಳಿಸಿ, ನಿಯಮಿತ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.






