ಮುಂಡೂರು ಶಾಲೆಯಲ್ಲಿ ಪೋಷಕರ ಸಭೆ, ಉಚಿತ ನೋಟ್ ಬುಕ್ ವಿತರಣೆ

0

ಪುತ್ತೂರು: ಪೋಷಕರು ಮಗುವಿನ ಮೊದಲ ಶಿಕ್ಷಕರಾದರೆ ಶಿಕ್ಷಕರು ಮಗುವಿನ ದ್ವಿತೀಯ ಪೋಷಕರು ಈ ನಿಟ್ಟಿನಲ್ಲಿ ಮಗುವಿನ ಮನಸ್ಸನ್ನು ಅರ್ಥೈಸಿಕೊಂಡು ಮುನ್ನಡೆಸುವುದಕ್ಕಾಗಿ ಪೋಷಕರ ಸಭೆ ಅನಿವಾರ್ಯ ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಹೇಳಿದರು. ಮುಂಡೂರು ಸ.ಉ.ಹಿ.ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಮಂಗಳೂರು ಪ್ರಥಮ ದರ್ಜೆ ಕಾಲೇಜಿನ ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಶಾಂತಿ ಮಹೇಶ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಕ್ಕಳ ಪಾಲನೆಯಲ್ಲಿ ಪೋಷಕರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿ ಸಂವಾದ ನಡೆಸಿದರು.


ಶಾಲೆಯ ಕೊಡುಗೈ ದಾನಿಗಳಾಗಿದ್ದ ಅಕಾಲಿಕವಾಗಿ ಮರಣ ಹೊಂದಿದ ಸಾರ್ಯ ಬೀಡು ಗುಲಾಬಿ ಎನ್ ಶೆಟ್ಟಿ ಇವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲು ಮೌನ ಪ್ರಾರ್ಥನೆಯನ್ನು ಮಾಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ಸುಂದರ ಭಾರತ ಪ್ರತಿಷ್ಠಾನ ಬೆಂಗಳೂರು ಇವರ ವತಿಯಿಂದ ಕೊಡ ಮಾಡಿದ ಉಚಿತ ನೋಟು ಪುಸ್ತಕಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಶಾಲಾ ಎಸ್‌ಡಿಎಂಸಿಯ ತೆರವಾದ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಹಿರಿಯ ಶಿಕ್ಷಕ ರಾಮಚಂದ್ರ ಬಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಮುಂಡೂರು ಗ್ರಾ.ಪಂ ಸದಸ್ಯ ಉಮೇಶ್ ಅಂಬಟ, ಎಸ್‌ಡಿಎಂಸಿ ಉಪಾಧ್ಯಕ್ಷೆ ಜ್ಯೋತಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಗುರು ವಿಜಯ ಪಿ ಸ್ವಾಗತಿಸಿದರು. ಶಿಕ್ಷಕಿ ಮೂಕಾಂಬಿಕಾ ವಂದಿಸಿದರು. ಶಿಕ್ಷಕ ಅಬ್ದುಲ್ ಬಶೀರ್ ಕೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here