ಜೈನ ಧರ್ಮದ ಸ್ವಾಮೀಜಿ, ಪ್ರಧಾನಿ ಗೌರವಕ್ಕೆ ಧಕ್ಕೆಯಾಗುವ ಪೋಸ್ಟ್-ಪ್ರಕರಣ ದಾಖಲು

0

ಪುತ್ತೂರು: ಜೈನ ಧರ್ಮದ ಸ್ವಾಮೀಜಿಗೆ ಮತ್ತು ಭಾರತದ ಪ್ರಧಾನಿಯವರ ಗೌರವಕ್ಕೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನಗರಸಭೆ ಸದಸ್ಯ ಕೆ.ಜೀವಂಧರ್ ಜೈನ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಜೈನ ಧರ್ಮದ ಆಧ್ಯಾತ್ಮಿಕ ನಾಯಕ ಅಚಾರ್ಯ ವಿದ್ಯಾನಂದ ಮಹಾರಾಜ್ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ’ಧರ್ಮ ಚಕ್ರವರ್ತಿ’ ಬಿರುದು ನೀಡಿ ಗೌರವಿಸಲಾಯಿತು. ಈ ಬಿರುದು ನೀತಿವಂತ ಆಡಳಿತಗಾರ ಮತ್ತು ಧರ್ಮವನ್ನು ಎತ್ತಿ ಹಿಡಿಯುವುದನ್ನು ಸಂಕೇತಿಸುತ್ತದೆ ಎಂದು ತಿಳಿಸಲಾಗಿತ್ತು. ಆದರೆ ಈ ಕುರಿತು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ’ಕರುನಾಡಿನ ಮಿನುಗುವ ನಕ್ಷತ್ರ’ ಎಂಬ ಫೇಸ್ ಬುಕ್ ಪೇಜ್ ಹೊಂದಿರುವ ವ್ಯಕ್ತಿಯು ಫೇಸ್ ಬುಕ್ ನಲ್ಲಿನ ಪೋಸ್ಟ್‌ವೊಂದಕ್ಕೆ ಕಮೆಂಟ್ ಮಾಡುವ ವೇಳೆ ಜೈನ ಧರ್ಮದ ಸ್ವಾಮೀಜಿಗೆ ಮತ್ತು ಭಾರತದ ಪ್ರಧಾನ ಮಂತ್ರಿಗಳ ಗೌರವಕ್ಕೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಹಾಗೂ ಸಾರ್ವಜನಿಕ ಶಾಂತಿ ನೆಮ್ಮದಿಗೆ ದಕ್ಕೆಯುಂಟು ಮಾಡುವ ರೀತಿಯಲ್ಲಿ ಕಮೆಂಟ್ ಮಾಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರು ಸ್ವೀಕರಿಸಿದ ಪೊಲೀಸರು ಸೆಕ್ಷನ್ 196(1)(ಎ),353(2) ಬಿಎನ್‌ಎಸ್ 2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here