6 ತಿಂಗಳಲ್ಲಿ ರೂ.25 ಕೋಟಿಗಿಂತಲೂ ಮೌಲ್ಯದ ಜಾಸ್ತಿ ಮೊತ್ತದ ಜಾಗ ದೇವಸ್ಥಾನದ ಸ್ವಾಧೀನಕ್ಕೆ – ಈಶ್ವರ ಭಟ್ ಪಂಜಿಗುಡ್ಡೆ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಒತ್ತುವಾರಿಯಾಗಿರುವ ಜಾಗವನ್ನು ಮತ್ತೆ ದೇವಸ್ಥಾನಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಕಾರ್ಯ ಪುನರಾಂಭಗೊಂಡಿದ್ದು, ಇದೀಗ ತೆಂಕಿಲದ 3 ಕಡೆಯಲ್ಲಿ ಒಟ್ಟು ಸುಮಾರು 1 ಎಕ್ರೆಗೂ ಮಿಕ್ಕಿ ಜಾಗವನ್ನು ದೇವಸ್ಥಾನದ ಸುಪರ್ದಿಗೆ ಪಡೆದುಕೊಳ್ಳಲಾಗಿದೆ.

ಜು.17ರಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯ ವಿನಯ ಸುವರ್ಣ ಮತ್ತು ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಮದಾಸ್ ಗೌಡ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಡಿ, ಕುಂಜಾರು ಮದಗ ಶ್ರೀ ಜರ್ನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರೋಹನ್ ರಾಜ್, ಲೋಕೇಶ್ ಗೌಡ ಪಡ್ಡಾಯೂರು ಮತ್ತಿತರರು ಉಪಸ್ಥಿತಿಯಲ್ಲಿ ಜಾಗಕ್ಕೆ ಬೇಲಿ ಹಾಕಿ ದೇವಳದ ನಿವೇಶನವೆಂದು ನಾಮ ಫಲಕ ಅಳವಡಿಸಲಾಯಿತು.
6 ತಿಂಗಳಲ್ಲಿ ರೂ.25 ಕೋಟಿಗಿಂತಲೂ ಜಾಸ್ತಿ ಮೊತ್ತದ ಜಾಗ ದೇವಸ್ಥಾನದ ಸ್ವಾಧೀನಕ್ಕೆ
ಈಶ್ವರ ಭಟ್ ಪಂಜಿಗುಡ್ಡೆಯವರು ಮಾದ್ಯಮದ ಜೊತೆ ಮಾತನಾಡಿ ಶಾಸಕ ಅಶೋಕ್ ರೈ ಅವರ ಸೂಚನೆಯಂತೆ ದೇವಳದ ವಿವಿಧ ಅಭಿವೃದ್ದಿ ಕಾರ್ಯ ಮತ್ತು ಜಾಗ ಸ್ವಾಧೀನ ಕಾರ್ಯ ಮಾಡುತ್ತಿದ್ದೇವೆ. ನಮ್ಮ ವ್ಯವಸ್ಥಾಪನಾ ಸಮಿತಿ ಬಂದು ಆರೇಳು ತಿಂಗಳಾಯಿತು. ಈ ನಡುವೆ ನಾವು ದೇವಳಕ್ಕೆ ಸಂಬಂಧಿಸಿದ ಜಾಗ ಒತ್ತುವರಿ ಮಾಡಿ ಸುಮಾರು ರೂ.25 ಕೋಟಿಯಷ್ಟು ಮೌಲ್ಯದ ಜಾಗವನ್ನು ದೇವಳಕ್ಕೆ ಮಾಡಿಕೊಟ್ಡಿದ್ದೇವೆ. ಕಳೆದ ಕೆಲವು ಸಮಯ ನಾವು ಜಾಗ ಒತ್ತುವರಿಗೆ ತಡ ಮಾಡಿದ್ದೆವು. ಯಾಕೆಂದರೆ ಒತ್ತುವರಿ ಮಾಡಿಕೊಂಡವರಿಂದ ಸೌಹಾರ್ದತೆಯಲ್ಲಿ ಜಾಗ ದೇವಳಕ್ಕೆ ಪಡೆಯುವಲ್ಲಿ ಶಾಸಕರ ಮುಂದಾಳತ್ವದಲ್ಲಿ ಮಾಡಿದ್ದೇವೆ. ಒಟ್ಟಿನಲ್ಲಿ ಮುಂದೆ ನೆಲ್ಲಿಕಟ್ಟೆಯಲ್ಲೂ ಜಾಗ ಸ್ವಾಧೀನ ನಡೆಯಲಿದೆ ಎಂದರು.