ಉಪ್ಪಿನಂಗಡಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕಾರಣದಿಂದ ಕುಮಾರಾಧಾರಾ ಸೇತುವೆಯ ಬಳಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ಇದ್ದ ರಸ್ತೆಯು ಈಗ ಮುಚ್ಚಲ್ಪಟ್ಟಿದೆ. ಇದರ ಅರಿವಿಲ್ಲದೆ ಸೇತುವೆಯ ಬಳಿ ಬಸ್ಸಿನಿಂದ ಇಳಿಯುವ ಪರ ಊರಿನ ಭಕ್ತಾದಿಗಳು ಅಪಾಯಕಾರಿ ಸ್ಥಳದಿಂದ ದೇವಾಲಯಕ್ಕೆ ಹೋಗುವ ಯತ್ನ ಮಾಡುತ್ತಿದ್ದು, ಅನಾಹುತ ಸಂಭವಿಸುವ ಮೊದಲು ಸಂಬಂಧಿಸಿದವರು ಇಲ್ಲಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯವಾಗಿದೆ.

ಈ ಹಿಂದೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯಕ್ಕೆ ಬರುವ ಭಕ್ತಾದಿಗಳು ಉಪ್ಪಿನಂಗಡಿಯ ಕುಮಾರಧಾರಾ ಸೇತುವೆ ದಾಟಿದ ತಕ್ಷಣ ಬಸ್ಸಿನಿಂದ ಇಳಿದು ಹೆದ್ದಾರಿಗಿದ್ದ ಸಂಪರ್ಕ ರಸ್ತೆಯ ಮೂಲಕ ದೇವಾಲಯದತ್ತ ಸಾಗುತ್ತಿದ್ದರು. ಇದೀಗ ಹೆದ್ದಾರಿ ವಿಸ್ತರಣೆಯ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮೊದಲಿದ್ದ ಸಂಪರ್ಕ ರಸ್ತೆಯು ಮುಚ್ಚಲ್ಪಟ್ಟಿದೆ. ಹಾಗೂ ಹೆದ್ದಾರಿಯು ಮೊದಲಿಗಿಂತ ಹೆಚ್ಚು ಎತ್ತರಿಸಲ್ಪಟ್ಟಿದೆ. ಈ ಬೆಳವಣಿಗೆಯ ಅರಿವಿಲ್ಲದ ಭಕ್ತಾದಿಗಳು, ಮುಖ್ಯವಾಗಿ ದೇವಾಲಯದಲ್ಲಿ ನಡೆಯುವ ಉತ್ತರಕ್ರಿಯಾ ಕಾರ್ಯಕ್ರಮಕ್ಕೆಂದು ಆಗಮಿಸುವ ಹೊರ ಊರುಗಳ ಜನತೆ ಎಂದಿನಂತೆ ಬಸ್ಸಿನಲ್ಲಿ ಬಂದು ಸೇತುವೆ ದಾಟಿದಾಕ್ಷಣ ಬಸ್ಸಿನಿಂದ ಇಳಿಯುತ್ತಾರೆ. ಹೀಗೆ ಇಳಿದ ಮಂದಿಗೆ ದೇವಾಲಯಕ್ಕೆ ಹೋಗುವ ದಾರಿ ಕಾಣಿಸದಾಗಿ ಕಂಡ ಕಂಡಲ್ಲಿ ಇಳಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ನೋಡುವಾಗಲೇ ಎದೆಯಲ್ಲಿ ನಡುಕ ಮೂಡಿಸುವಂತಿದೆ:
ವೃದ್ಧರಾದಿಯಾಗಿ ದೇವಾಲಯಕ್ಕೆಂದು ಬಂದವರು ಸೇತುವೆ ದಾಟಿ ಬಸ್ಸಿನಿಂದ ಇಳಿದ ಬಳಿಕ ದೇವಾಲಯಕ್ಕೆ ಹೋಗುವ ದಾರಿ ಕಾಣದೆ ಹತ್ತಿಪ್ಪತ್ತು ಅಡಿ ಎತ್ತರದ ತಡೆಗೋಡೆಯ ಸನಿಹದಲ್ಲೇ ಇಳಿಯಲು ಯತ್ನಿಸುತ್ತಿರುವ ದೃಶ್ಯ ಭಯಾನಕವಾಗಿದ್ದು, ನೋಡುಗರ ಎದೆಯಲ್ಲಿ ನಡುಕ ಮೂಡಿಸುವಂತಿದೆ. ಒಂದು ಚೂರು ಕಾಲು ಜಾರಿದರೂ ಪ್ರಾಣಕ್ಕೆ ಅಪಾಯವುಂಟಾಗುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟವರು ಈ ಬಗ್ಗೆ ಅಗತ್ಯ ಕ್ರಮ ಜರಗಿಸಬೇಕು ಎಂಬ ಒತ್ತಾಯ ಸಾರ್ವಜನಿಕರದ್ದಾಗಿದೆ.
ಶಾರ್ಟ್ ಕಟ್ ದಾರಿಗೆ ಯತ್ನಿಸಿ ಹೂತು ಹೋಗಿದ್ದ ಮಹಿಳೆಯರು:
ಕಳೆದ ತಿಂಗಳು ಇಲ್ಲಿನ ಮೊದಲಿದ್ದ ಸಂಪರ್ಕ ರಸ್ತೆಯನ್ನು ಬಳಸುವ ಸಲುವಾಗಿ ಬಸ್ಸಿನಿಂದ ಇಳಿದಿದ್ದ ಮಹಿಳೆಯರು ಕಾಮಗಾರಿ ನಿರತ ಸ್ಥಳದಿಂದ ದಾಟಲು ಯತ್ನಿಸಿ ಅಲ್ಲಿ ರಸ್ತೆ ವಿಭಾಜಕ್ಕೆಂದು ಹಾಕಿದ ಮಣ್ಣಿನಲ್ಲಿ ಹೂತು ಹೋಗಿ ಜೆಸಿಬಿ ಯಂತ್ರದ ಸಹಾಯದಿಂದ ಅವರನ್ನು ಮೇಲೆತ್ತಿದ್ದ ಘಟನೆ ನಡೆದಿತ್ತು. ಆ ಬಳಿಕ ಮಣ್ಣು ಮೃದುವಾಗಿದ್ದ ಸ್ಥಳದಲ್ಲಿ ಜನರ ಸಂಚಾರವನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಅನುಷ್ಟಾನಿಸಲಾಗಿದೆ. ಇದೀಗ ಬದಲಿ ಸ್ಥಳದಿಂದ ಬಂದು ದೇವಾಲಯಕ್ಕೆ ಶಾರ್ಟ್ ಕಟ್ ರಸ್ತೆಯಲ್ಲಿ ಹೋಗುವ ಹಂಬಲದಿಂದ ನಡೆಸುವ ಅಪಾಯಕಾರಿ ಯತ್ನವು ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಇದ್ದು, ಈ ಭಾಗದಲ್ಲಿ ಜನರ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸುವ ಅಗತ್ಯ ಇದೆ.
ರಕ್ಷಣೆಗೆ ಆದ್ಯತೆ ನೀಡಲಿ: ಸ್ವರ್ಣೇಶ್ ಗಾಣಿಗ
ವಯಸ್ಸಾದ ಭಕ್ತಾದಿಗಳು ಈ ಹಿಂದೆ ಇದ್ದ ಸುಲಭವಾಗಿ ಸಂಪರ್ಕ ಸಾಧಿಸುವ ರಸ್ತೆಯನ್ನು ಅಂದಾಜಿಸಿ ಕುಮಾರಧಾರಾ ಸೇತುವೆ ದಾಟಿದ ತಕ್ಷಣ ಬಸ್ಸಿನಿಂದ ಇಳಿಯುತ್ತಾರೆ. ಬಳಿಕ ಯಾವುದೇ ರಸ್ತೆ ಇಲ್ಲದನ್ನು ತಿಳಿದು ಕಂಡಕಂಡಲ್ಲಿ ಇಳಿಯಲು ಪ್ರಯತ್ನಿಸುತ್ತಾರೆ. ಪ್ರಸಕ್ತ ಈ ಭಾಗದಲ್ಲಿ ಯಾವುದೇ ರೀತಿಯಲ್ಲಿ ಸುರಕ್ಷಿತವಾಗಿ ಇಳಿಯುವ ವ್ಯವಸ್ಥೆ ಇಲ್ಲದಿರುವುದರಿಂದ ವೃದ್ಧ ಭಕ್ತಾದಿಗಳು ಬಿದ್ದು ಎದ್ದು ಸಾಗುವ ದೃಶ್ಯ ಕಳವಳವನ್ನು ಮೂಡಿಸುವಂತಿದೆ. ಈ ಕಾರಣಕ್ಕೆ ತಾತ್ಕಾಲಿಕ ನೆಲೆಯಲ್ಲಿಯಾದರೂ ಸುರಕ್ಷಿತವಾಗಿ ಹೆದ್ದಾರಿಯಿಂದ ದೇವಾಲಯದ ರಸ್ತೆಗೆ ಇಳಿಯುವ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ ಹಾಗೂ ಸುರಕ್ಷಿತ ದಾರಿಯ ಬಗ್ಗೆ ಅರಿವು ಮೂಡಿಸುವ ಫಲಕವನ್ನು ಹಾಕಬೇಕು. ತಾತ್ಕಾಲಿಕ ವ್ಯವಸ್ಥೆಯನ್ನು ಕಲ್ಪಿಸಲು ಅಸಾಧ್ಯವೆಂದಾದರೆ ಸೇತುವೆಯ ಬಳಿ ಬಸ್ಸಿನಿಂದ ಇಳಿಸುವ ಪ್ರಕ್ರಿಯೆಯನ್ನು ತಡೆಗಟ್ಟುವ ಬಗ್ಗೆಯಾದರೂ ಗಮನ ನೀಡಬೇಕು. ಒಟ್ಟಾರೆ ದೇವಾಲಯಕ್ಕೆಂದು ಬಂದವರು ಬದುಕು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಬಾರದೆಂದು ಉದ್ಯಮಿ ಸ್ವರ್ಣೇಶ್ ಗಾಣಿಗ ಅಗ್ರಹಿಸಿದ್ದಾರೆ.
ಶಾಶ್ವತ ವ್ಯವಸ್ಥೆಗೆ ಕ್ರಮ:
ಪ್ರಸಕ್ತ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಮ್ಮ ನಿರೀಕ್ಷೆಯ ವೇಗಕ್ಕೆ ತಕ್ಕಂತೆ ಕಾಮಗಾರಿ ನಡೆಸಲಾಗುತ್ತಿಲ್ಲ. ಆದರೂ ಹೆದ್ದಾರಿಯಿಂದ ದೇವಾಲಯದ ರಸ್ತೆಗೆ ಸಂಪರ್ಕ ಕಲ್ಪಿಸುವ ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಅತೀ ಎತ್ತರದ ತಡೆಗೋಡೆಯ ಬಳಿಯಿಂದ ಜನರು ಇಳಿಯಲು ಯತ್ನಿಸುವ ದೃಶ್ಯ ಕಳವಳವನ್ನು ಮೂಡಿಸಿದೆ. ಜನರೂ ಕೂಡಾ ವಿವೇಚನೆ ಬಳಸಿ ಅಪಾಯಕಾರಿ ಸ್ಥಳದತ್ತ ಸಾಗಬಾರದು ಎಂದು ಹೆದ್ದಾರಿ ವಿಸ್ತರಣಾ ಕಾಮಗಾರಿ ನಿರತ ಇಂಜಿನಿಯರ್ ರಘುನಾಥ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.