ದೇಶದ ವಾಣಿಜ್ಯ ವ್ಯವಸ್ಥೆ ಕಾಲಕ್ಕನುಗುಣವಾಗಿ ಬದಲಾಗಬೇಕು : ಸುಬ್ರಮಣ್ಯ ನಟ್ಟೋಜ
ಪುತ್ತೂರು: ದೇಶದ ವಾಣಿಜ್ಯ ವ್ಯವಸ್ಥೆ ಕಾಲಕ್ಕನುಗುಣವಾಗಿ ಬದಲಾವಣೆ ಆಗಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲದಕ್ಕೂ ಹೋರಾಟ ಇದೆ. ಎಲ್ಲವನ್ನು ಸವಾಲಾಗಿ ಸ್ವೀಕರಿಸುವ ಮೂಲಕ ನಮ್ಮ ಯುವ ಪೀಳಿಗೆ ಮುನ್ನಡೆಯಬೇಕು. ಹೊಸ ಆಯಾಮ, ಚೌಕಟ್ಟು, ಹೊಸ ಮಜಲುಗಳೊಂದಿಗೆ ಗುರಿ ಸಾಧನೆಯ ಕನಸನ್ನು ನನಸಾಗಿಸುವುದರ ಜತೆಗೆ, ದೇಶವನ್ನು ಹಣಕಾಸಿನ ನೆಲೆಯಲ್ಲಿ ಮೇಲಕ್ಕೆ ಕೊಂಡೊಯ್ಯಲು ಪ್ರಯತ್ನಿಸಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಗುರುವಾರ ಆಯೋಜಿಸಲಾದ ಮಾರ್ಗದರ್ಶಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯ ಸುರೇಶ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಸಂಪನ್ಮೂಲ ವ್ಯಕ್ತಿಗಳಾದ ಸಿಎಸ್ ಸಂತೋಷ್ ಪ್ರಭು ಹಾಗೂ ಮಂಗಳೂರಿನ ಐಸಿಎಸ್ಐ ಸಂಸ್ಥೆಯ ಆಡಳಿತಾಧಿಕಾರಿ ಶಂಕರ್ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅನನ್ಯ, ಶ್ರೀದೇವಿ, ಸಮನ್ವಿಕಾ ಪ್ರಾರ್ಥಿಸಿದರು. ಜಾನ್ವಿ ಶೆಟ್ಟಿ ಸ್ವಾಗತಿಸಿ, ಅದ್ವೈತ ಕೃಷ್ಣ ವಂದಿಸಿದರು. ಅನನ್ಯ ವಿ. ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ನಯನ ಕುಮಾರ್ ಸಹಕರಿಸಿದರು. ತದನಂತರ ಕಂಪನಿ ಸೆಕ್ರೆಟರಿಶಿಪ್ನ ಬಗ್ಗೆ ಮಾಹಿತಿ ನೀಡಲಾಯಿತು.