
ವಿಟ್ಲ: ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ವಿಟ್ಲ ಠಾಣಾ ಎಸ್.ಐ. ರಾಮಕೃಷ್ಣ ರವರ ನೇತೃತ್ವದ ಪೊಲೀಸರ ತಂಡ ವಶಕ್ಕೆ ಪಡೆದಿರುವ ಘಟನೆ ಆ.2ರಂದು ನಡೆದಿದೆ.
ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ವಿಟ್ಲ ಠಾಣಾ ಎಸ್.ಐ. ರಾಮಕೃಷ್ಣ ರವರ ನೇತೃತ್ವದ ಪೊಲೀಸರ ತಂಡ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಉಕ್ಕಡ ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಎರಡು ಲಾರಿಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ತಲಾ 500 ಕೆಂಪು ಕಲ್ಲುಗಳಿದ್ದು, ಲಾರಿ ಚಾಲಕರಲ್ಲಿ ಕೆಂಪು ಕಲ್ಲು ಸಾಗಾಟದ ಬಗ್ಗೆ ಪರವಾನಿಗೆ ಕೇಳಿದಾಗ ಆತ ತದ್ವಿರುದ್ಧ ಉತ್ತರ ನೀಡಿ ಪರವಾನಿಗೆ ಇಲ್ಲವೆಂದು ತಿಳಿಸಿದ್ದರು. ಅದರಲ್ಲಿ ಒಂದು ಲಾರಿಗೆ ಕೇರಳ ರಾಜ್ಯದ ಪೆರ್ಲ ಎಂಬಲ್ಲಿಂದ ಕಲ್ಲುಗಳನ್ನು ಜಾಫರ್ ಎಂಬುವರು ಅಕ್ರಮವಾಗಿ ತುಂಬಿಸಿ ಕಳುಹಿಸಿರುವುದಾಗಿ, ಮತ್ತು ಇನ್ನೊಂದು ಲಾರಿಯಲ್ಲಿ ಕೇರಳ ರಾಜ್ಯದ ಧರ್ಮತ್ತಡ್ಕ ಎಂಬಲ್ಲಿಂದ ನಾಸೀರ್ ಎಂಬವರು ಅಕ್ರಮವಾಗಿ ತುಂಬಿಸಿ ಕಳುಹಿಸಿರುವುದಾಗಿ ವಿಚಾರಣೆ ವೇಳೆ ಚಾಲಕರು ತಿಳಿಸಿದ್ದರು.
ಪೊಲೀಸರು ಲಾರಿಗಳನ್ನು ಹಾಗೂ ಚಾಲಕರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.