ಪುತ್ತೂರು: ಕಲೆ, ಸಂಸ್ಕೃತಿಗಳು ಈ ಮಣ್ಣಿನ ಸತ್ತ್ವದ ಸಂಕೇತಗಳು. ಅದನ್ನು ಕರಗತಮಾಡಿಕೊಳ್ಳುವುದು ಜೀವಮಾನ ಸಾಧನೆಯಾಗಿದ್ದು, ಅದರಲ್ಲೂ ವಿಶ್ವ ದಾಖಲೆ ನಿರ್ಮಿಸುವುದು ಅತ್ಯಪೂರ್ವ. ದೇವರ ಅನುಗ್ರಹ, ಸಂಕಲ್ಪ ಶಕ್ತಿಗಳಿಂದ ವ್ಯಕ್ತಿ ಶಕ್ತಿಯಾಗುವುದೇ ಬದುಕಿನ ಸಾರ್ಥಕತೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.
ಚಾತುರ್ಮಾಸ್ಯ ವ್ರತಾಚಾರಣೆಯ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭದಲ್ಲಿ ಆ.16ರಂದು ಭರತನಾಟ್ಯದಲ್ಲಿ ಸಾಧನೆಗೈದ ಮಂಗಳೂರಿನ ರೆಮೋನಾ ಇವೆಟ್ ಪೆರೇರಾ ಅವರನ್ನು ಅಭಿನಂದಿಸಿದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕದ ಮಾಜಿ ವಿಧಾನ ಪರಿಷತ್ತು ಸದಸ್ಯ ಕ್ಯಾಪ್ಟನ್.ಗಣೇಶ್ ಕಾರ್ಣಿಕ್ ಮಾತನಾಡಿ, ಜೀವನದಲ್ಲಿ ಎತ್ತರಕ್ಕೇರಬೇಕೆಂದಾದರೆ ಅಂತರ್ಮುಖಿಯಾಗಬೇಕು. ನಮ್ಮ ಸಾಮಥ್ರ್ಯವನ್ನು ಹೊರತರುವುದೇ ಜೀವನದ ಲಕ್ಷ್ಯವಾದಾಗ ಬದುಕು ಸಾರ್ಥಕವಾಗುತ್ತದೆ. ರೆಮೋನಾ ಅವರ ಸಾಧನೆ ಇಂತಹ ಲಕ್ಷ್ಯದಿಂದ ಒದಗಿರುವಂತದ್ದು. ಇದು ನಮಗೆಲ್ಲ ಮಾದರಿಯಾಗಲಿ ಎಂದು ತಿಳಿಸಿದರು. ಶಾಂತಿ, ನೆಮ್ಮದಿ, ಸಮಾಧಾನಗಳು ಸ್ಮಾರ್ಟ್ ಪೋನೊಳಗಲ್ಲ, ಅದು ನಮ್ಮೊಳಗೆ ಹಲವು ತುಡಿತಗಳ ಸಾಮಥ್ರ್ಯಗಳಲ್ಲಿ ಅಡಗಿದೆ. ನಮ್ಮ ಅನಿಸಿಕೆ, ಬೇಡಿಕೆಗಳಿಗಾಗಿ ಮಕ್ಕಳನ್ನು ಬೆಳೆಸುವುದು ಬೇಡ. ಅವರ ಆಸಕ್ತಿ, ಶಕ್ತಿಗಳನ್ನು ತಿಳಿದು ಬೆಳೆಸಿದಲ್ಲಿ ಸತ್ಪ್ರಜೆಗಳನ್ನು ನಿರ್ಮಿಸಲು ಸಾಧ್ಯ ಎಂದವರು ತಿಳಿಸಿದರು.
ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ, ಪುತ್ತೂರಿನ ವೈಷ್ಣವೀ ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ 170 ಗಂಟೆಗಳ ನಿರಂತರ ಭರತನಾಟ್ಯದ ಮೂಲಕ ಗೋಲ್ಡನ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್ ಸಾಧನೆಗೈದ ರೆಮೋನಾ ಇವೆಟ್ ಪೆರೇರಾ ಅವರನ್ನು ಚಾತುರ್ಮಾಸ್ಯ ಸಾಧನಾ ಪುರಸ್ಕಾರ ನೀಡಿ ಸ್ವಾಮೀಜಿ ಅಭಿನಂದಿಸಿ ಆಶೀರ್ವದಿಸಿದರು.
ಚಾತುರ್ಮಾಸ್ಯ ಸಮಿತಿ ಜೊತೆ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಸ್ವಾಗತಿಸಿ, ಕಾರ್ಯದರ್ಶಿ ಸೂರ್ಯನಾರಾಯಣ ಭಟ್ ಎಡನೀರು ನಿರೂಪಿಸಿ, ವಂದಿಸಿದರು.
ಬಳಿಕ ವೈಷ್ಣವೀ ನಾಟ್ಯಾಲಯದ ಆಶ್ರಯದಲ್ಲಿ ಶ್ರೀರಾಮ ಪುನರಾಗಮನ ನೃತ್ಯ ರೂಪಕ ಹಾಗೂ ನೃತ್ಯಾರ್ಪಣಂ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಯಿತು. ಡಾ.ರಾಜೇಶ್ ಬೆಜ್ಜಂಗಳ ಅವರ ಸಾಹಿತ್ಯಕ್ಕೆ ನಟುವಾಂಗದಲ್ಲಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು, ನೃತ್ಯ ರೂಪಕದ ರಾಗ ಸಂಯೋಜನೆ ಹಾಗೂ ಹಾಡುಗಾರಿಕೆಯಲ್ಲಿ ವಿದ್ವಾನ್ ವೆಳ್ಳಿಕ್ಕೋತ್ ವಿಷ್ಣು ಭಟ್ ಹಾಗೂ ವಸಂತಕುಮಾರ್ ಗೋಸಾಡ, ಮೃದಂಗದಲ್ಲಿ ವಿದ್ವಾನ್ ಗೀತೇಶ್ ಕುಮಾರ್ ನೀಲೇಶ್ವರ, ಕೊಳಲಿನಲ್ಲಿ ವಿದ್ವಾನ್ ರಾಜಗೋಪಾಲ ಕಾಞಂಗಾಡ್ ಸಹಕರಿಸಿದರು.
ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಇವರ ಸಮರ್ಥ ನಿರ್ದೇಶನದಲ್ಲಿ ಮೂಡಿಬಂದ ಶ್ರೀರಾಮ ಪಟ್ಟಾಭಿಷೇಕದ ಕಥೆಯ ಸಾರವನ್ನು ಒಳಗೊಂಡಿರುವ ಶ್ರೀರಾಮ ಪುನರಾಗಮನ ನೃತ್ಯರೂಪಕವು ಸೇರಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.