ಪುತ್ತೂರು: ಅಕ್ಷಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಪ್ರತಿಜ್ಞಾ ವಿಧಿ ಸ್ವೀಕಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಸೀತಾರಾಮ ಕೇವಳ ಮಾತನಾಡಿ, ನಮ್ಮ ಜೀವನದಲ್ಲಿ ನಾವು ಹೇಗಿರಬೇಕು? ಮತ್ತು ಏನಾಗಬೇಕು? ಎಂದು ನಾವೇ ತೀರ್ಮಾನಿಸಬೇಕು. ಜೀವನದಲ್ಲಿ ಲಭಿಸುವ ಅವಕಾಶವನ್ನು ಅತ್ಯಂತ ಶ್ರದ್ದೆಯಿಂದ ಮತ್ತು ನಂಬಿಕೆಯಿರಿಸಿ ಮಾಡಿದಲ್ಲಿ ಮಾತ್ರ ನಮ್ಮ ಜೀವನದ ಲಕ್ಷ್ಯವನ್ನು ಸಾಧಿಸಬಹುದು. ಶಾಲಾ- ಕಾಲೇಜಿನ ವಿದ್ಯಾರ್ಥಿ ದೆಸೆಯಲ್ಲಿ ನಾಯಕತ್ವದ ಅವಕಾಶಗಳನ್ನು ಪಡೆದವರು ಮುಂದಿನ ಜೀವನದಲ್ಲಿ ಜನಪ್ರತಿನಿಧಿಗಳಾಗಿ ಗುರುತಿಸಿಕೊಂಡವರು ಅನೇಕರಿದ್ದಾರೆ. ನಮ್ಮ ಯಶಸ್ಸಿಗೆ ಸಂಬಂಧಿಸಿದಂತೆ ಶಿಕ್ಷಣಕ್ಕೆ ಮಾಡುವ ಹೂಡಿಕೆ ಒಂದು ಸಣ್ಣ ಭಾಗ, ಬಹುತೇಕ ಹೂಡಿಕೆ ಜೀವನದ ಮೌಲ್ಯಗಳನ್ನು ಗಳಿಸುವಲ್ಲಿ ನಾವು ಮಾಡಬೇಕು. ವೈಜ್ಞಾನಿಕ ಮತ್ತು ಸತ್ಯವನ್ನು ಕಂಡುಕೊಂಡು ನಮ್ಮ ಜೀವನದ ಸವಾಲುಗಳಿಗೆ ಅತ್ಯಂತ ನಿಖರವಾದ ಪರಿಹಾರಗಳನ್ನು ಕಂಡುಕೊಳ್ಳಲು ನಾವು ಸಮರ್ಥವಾಗಿರಬೇಕು. ನಮ್ಮ ಜೀವನದ ದಿಸೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಧನಾತ್ಮಕ ಚಿಂತನೆಗಳನ್ನು ಯಥಾವತ್ತಾಗಿ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲ್ ಮಾತನಾಡಿ, ವಿದ್ಯಾರ್ಥಿ ಪ್ರತಿನಿಧಿಗಳು ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪಂದಿಸುತ್ತಾ, ವಿದ್ಯಾರ್ಥಿಗಳ ಧ್ವನಿಯಾಗಿರ ಬೇಕು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸುತ್ತಾ ಬೇಡಿಕೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಆ ಮೂಲಕ ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯ, ಉತ್ತಮ ಕಲಿಕಾ ಪರಿಸರ ನಿರ್ಮಾಣಕ್ಕೆ ಪ್ರಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಅಕ್ಷಯ್ ಮಾತನಾಡಿ, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ನೀಡಿದ ಭರವಸೆ ಗಳನ್ನು ಯಥಾವತ್ತಾಗಿ ಪಾಲಿಸಿ ಆದರ್ಶ ವಿದ್ಯಾರ್ಥಿ ನಾಯಕ- ನಾಯಕಿಯರಾಗಿ ಹೊರ ಹೊಮ್ಮಬೇಕೆಂದು ಕರೆ ನೀಡಿದರು.
2025- 26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಅಂತಿಮ ಆಂತರಿಕ ವಿನ್ಯಾಸ ವಿಭಾಗದ ರಾಕೇಶ್ ಕೆ., ಉಪಾಧ್ಯಕ್ಷರಾಗಿ ಅಂತಿಮ ಬಿಸಿಎ ವಿಭಾಗದ ಮನೋಜ್ ಕುಮಾರ್, ಕಾರ್ಯದರ್ಶಿ ಅಂತಿಮ ವಾಣಿಜ್ಯ ವಿಭಾಗದ ವರ್ಷಿಣಿ ಎನ್.ಎಸ್., ಜೊತೆ ಕಾರ್ಯದರ್ಶಿಯಾಗಿ ಫ್ಯಾಷನ್ ಡಿಸೈನ್ ವಿಭಾಗದ ಖಲಂದರ್, ಖಜಾಂಚಿಯಾಗಿ ಅಂತಿಮ ಬಿಸಿಎ ವಿಭಾಗದ ಪೃಥ್ವಿರಾಜ್ ಪಿ., ಜೊತೆ ಖಜಾಂಚಿಯಾಗಿ ದ್ವಿತೀಯ ಬಿಸಿಎ ವಿಭಾಗದ ಅಪೇಕ್ಷಾ ಕೆ. ಶೆಟ್ಟಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಂತಿಮ ಬಿಸಿಎ ವಿಭಾಗದ ಕೀರ್ತನ್ ಕೃಷ್ಣ ಪಿ.ಡಿ., ಸಾಂಸ್ಕೃತಿಕ ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಬಿಸಿಎ ವಿಭಾಗದ ರಕ್ಷಾ ಕೆ ಆರ್, ಕ್ರೀಡಾ ಕಾರ್ಯದರ್ಶಿಯಾಗಿ ಅಂತಿಮ ಬಿಸಿಎಯ ಧನುಷ್ಡಿ ಎಸ್., ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಆಶಿಕಾ ಎನ್., ಮಾಧ್ಯಮ ಕಾರ್ಯದರ್ಶಿಯಾಗಿ ಅಂತಿಮ ವಾಣಿಜ್ಯ ವಿಭಾಗದ ವಿಂಧುಶ್ರೀ ಮತ್ತು ದ್ವಿತೀಯ ಪದವಿ ಹಾಸ್ಪಿಟಲಿಟಿ ಸಾಯನ್ಸ್ ನ ಫ್ಲೋಯಿಡನ್ಲೋಬೋ ಪ್ರಮಾಣ ವಚನ ಸ್ವೀಕರಿಸಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಅಶೋಕ್ ರೈ ಎಂ ನೂತನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ,ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕಿ ರಶ್ಮಿ ಕೆ. ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಅರ್ಪಿತ್ ಟಿ.ಎ. ಸ್ವಾಗತಿಸಿ, ಉಪ ಪ್ರಾಂಶುಪಾಲ ರಕ್ಷಣ್ ಟಿ. ಆರ್. ವಂದಿಸಿದರು.
ದ್ವಿತೀಯ ಫ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿನಿಗಳಾದ ಕು.ಮೋಕ್ಷ ಮತ್ತು ದೇವಿಕಾ ಪ್ರಾರ್ಥನೆ ಹಾಡಿದರು. ಕನ್ನಡ ವಿಭಾಗದ ಉಪನ್ಯಾಸಕಿ ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.