ಪುತ್ತೂರು: ಕೆಯ್ಯೂರು ಗ್ರಾಮದ ಓಲೆಮುಂಡೋವುದಲ್ಲಿ ವಲಿಯುಲ್ಲಾಹಿ ಮಶ್ಹೂರ್ (ಖ.ಸಿ) ದರ್ಗಾದ ನೂತನ ಕಟ್ಟಡ ಅ.4ರಂದು ಉದ್ಘಾಟನೆಗೊಳ್ಳಲಿದೆ ಎಂದು ದರ್ಗಾ ನೂತನ ಕಟ್ಟಡದ ಸ್ವಾಗತ ಸಮಿತಿ ಸದಸ್ಯ ಖಲಂದರ್ ಶಾಫಿ ಎರಬೈಲ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ಇತಿಹಾಸ ಪ್ರಸಿದ್ದ ಝಿಯಾರತ್ (ಪ್ರಾರ್ಥನಾ) ಕೇಂದ್ರವೂ, ಜಾತಿ, ಮತ ಬೇಧವಿಲ್ಲದೇ ಸರ್ವಧಮೀರ್ಯರಿಂದಲೂ ಗೌರವಿಸಲ್ಪಡುವ ಕೆಯ್ಯೂರು ಗ್ರಾಮದ ಓಲೆಮುಂಡೋವು ವಲಿಯುಲ್ಲಾಹಿ ಮಶ್ ಹೂರ್(ಖ.ಸಿ) ದರ್ಗಾ ಶರೀಫ್ನಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಉರೂಸ್ ಸಮಾರಂಭ ನಡೆಯುತ್ತಿದ್ದು, ಅದರಲ್ಲಿ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ದರ್ಗಾ ಝಿಯಾರತ್ ನೆರವೇರಿಸುತ್ತಾರೆ. ಇತರ ದಿನಗಳಲ್ಲೂ ಇಲ್ಲಿಗೆ ಝಿಯಾರತ್ ಗೆಂದು ಭಕ್ತಾದಿಗಳು ಆಗಮಿಸುತ್ತಿದ್ದು ಈ ದರ್ಗಾ ಪವಾಡ ಕೇಂದ್ರವಾಗಿ ಗುರುತಿಸಿಕೊಂಡಿದೆ. ಹಿಂದಿನ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ದರ್ಗಾದಲ್ಲಿ ಸ್ಥಳಾವಕಾಶದ ಕೊರತೆಯ ಹಿನ್ನೆಲೆಯಲ್ಲಿ ಹೊಸ ಕಟ್ಟಡವನ್ನು ಕಟ್ಟುವ ಬಗ್ಗೆ ಓಲೆಮುಂಡೋವು ಜಮಾಅತ್ ಕಮಿಟಿಯು 2 ವರ್ಷಗಳ ಹಿಂದೆ ಅಂದಿನ ಜಮಾಅತ್ ಅಧ್ಯಕ್ಷರಾಗಿದ್ದ ಮರ್ಹೂಂ ಪುತ್ತುಮೋನು ಹಾಜಿ ಬಲ್ಕಾಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿ ಕಾಮಗಾರಿ ಆರಂಭಿಸಿದ್ದು ಇದೀಗ ಪೂರ್ಣಗೊಂಡಿದೆ. ಆಧುನಿಕ ರೀತಿಯಲ್ಲಿ ವಿಶಾಲ ಸ್ಥಳಾವಕಾಶದೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಕಟ್ಟಡ ನಿರ್ಮಾಣಕ್ಕಾಗಿ ಓಲೆಮುಂಡೋವು ಜಮಾಲಿತ್, ಇತರ ಜಮಾಲಿತ್ನವರು, ದಾನಿಗಳು, ಅನಿವಾಸಿ ಸಹೋದರರು ಸಹಕಾರ ನೀಡಿದ್ದು ಎಲ್ಲರ ಸಹಕಾರದ ಫಲವಾಗಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡದ ಉದ್ಘಾಟನೆಯನ್ನು ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷ ಸಯ್ಯಿದುಲ್ ಉಲಮಾ ಅಸ್ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೆರವೇರಿಸಲಿದ್ದು, ಕರ್ನಾಟಕ ಮಜ್ಲಿಸುನ್ನೂರು ಚೀಫ್ ಅಮೀರ್ ಹಾಗೂ ಓಲೆಮುಂಡೋವು ಜುಮಾ ಮಸೀದಿಯ ಖತೀಬರಾಗಿರುವ ಅಸ್ಸಯ್ಯಿದ್ ಸಯ್ಯದಲವಿ ತಂಙಳ್ ಓಲೆಮುಂಡೋವು ದುವಾ ನೆರವೇರಿಸಲಿದ್ದಾರೆ.
ಓಲೆಮುಂಡೋವು ಮಸೀದಿಯ ಮಾಜಿ ಖತೀಬರಾಗಿರುವ ಮಹಮೂದುಲ್ ಫೈಝಿ ಓಲೆಮುಂಡೋವು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಮೋಹನ್ ರೈ ಓಲೆಮುಂಡೋವು ಸಹಿತ ಹಲವಾರು ಉಲಮಾ ಉಮಾರಗಳು ಹಾಗೂ ರಾಜಕೀಯ, ಸಾಮಾಜೀಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ದರ್ಗಾ ನೂತನ ಕಟ್ಟಡ ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಾಕ್ ಎರಬೈಲ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಎರಬೈಲ್, ಜಮಾ ಅತ್ ಕಾರ್ಯದರ್ಶಿ ಇಸ್ಮಾಯಿಲ್ ಸೊರಕೆ, ಜೊತೆ ಕಾರ್ಯದರ್ಶಿ ಹಂಝ ಎಲಿಯ ಉಪಸ್ಥಿತರಿದ್ದರು.