ಪುತ್ತೂರು: ಜನರ ತುರ್ತು ಆರೋಗ್ಯ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಸರಕಾರವೇ ಕೋಟ್ಯಂತರ ರೂ. ವೆಚ್ಚದಲ್ಲಿ ಪ್ರಾರಂಭಿಸಿದ 108 ಆಂಬ್ಯುಲೆನ್ಸ್ ವಾಹನ ಹಲವು ಕಡೆಗಳಲ್ಲಿ ತುಕ್ಕು ಹಿಡಿಯುತ್ತಿದ್ದು, ಪುತ್ತೂರು ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಸಮುದಾಯ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ಕಳೆದೊಂದು ತಿಂಗಳಿನಿಂದ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ಬದಿ ಶೆಡ್ ನಲ್ಲಿ ನಿಂತಿದೆ. ಜನಸಾಮಾನ್ಯರ ಪಾಲಿಗೆ ಸೇವೆಗೈಯುವ ಸೌಲಭ್ಯಗಳು ಇದ್ದು,ಇಲ್ಲದಂತಾಗಿದೆ.

ಉಪ್ಪಿನಂಗಡಿ ನಗರ ಪ್ರದೇಶಕ್ಕೆ ಸರಕಾರ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಮಾಡಿದ್ದು, ಆಸ್ಪತ್ರೆಯ ಕಟ್ಟಡ, ಬೃಹತ್ ಕೊಠಡಿಗಳು ಚೆನ್ನಾಗಿದೆ ಆದರೆ ಜನರಿಗೆ ಬೇಕಾದ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಆಸತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ತಮ್ಮ ಶ್ರಮದಿಂದ ಮೂಲಸೌಕರ್ಯಗಳ ಅಭಾವದಲ್ಲಿಯೂ ಉತ್ತಮ ಸೇವೆ ನೀಡುತ್ತಿದ್ದಾರೆ.
ಜನರ ಜೀವ ಉಳಿಸಲು ನೀಡಿದ ಈ ವಾಹನ ಸೇವೆ ನಿಲ್ಲಿಸುವುದು ಸರಿಯೇ ಎಂಬುದು ಜನಸಾಮಾನ್ಯರ ಪ್ರಶ್ನೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು, 108 ಸೇವೆ ನಿರ್ವಹಿಸುತ್ತಿರುವ ಜಿವಿಕೆ ಸಂಸ್ಥೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಉಪ್ಪಿನಂಗಡಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಆಂಬ್ಯುಲೆನ್ಸ್ ಸೇವೆ ವಿರಳ. ಕೆಲವೆಡೆ ಲಭ್ಯವಿದ್ದರೂ ದುಬಾರಿ. ಬಡವರಿಗಾಗಿ ಸರಕಾರ ನೀಡಿದ 108 ವಾಹನವೇ ಏಕೈಕ ಭರವಸೆಯಾಗಿತ್ತು. ಇದೀಗ ಅದು ನಿಂತಿರುವುದರಿಂದ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸಲು ಜನರು ಸಂಕಷ್ಟಪಡುವಂತಾಗಿದೆ.
ಉಪ್ಪಿನಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಂಬ್ಯುಲೆನ್ಸ್ ಮ್ಯಾನ್ ಪವರ್ ಇಲ್ಲದ ಕಾರಣ ಬಳಕೆಯಾಗುತ್ತಿಲ್ಲ. 108 ಆಂಬ್ಯುಲೆನ್ಸ್ ವ್ಯವಸ್ಥೆಯಲ್ಲಿ ಶೇ.50ರಷ್ಟು ಅಧಿಕಾರ ಆರೋಗ್ಯ ಇಲಾಖೆಗೆ ಹಾಗೂ ಶೇ.50ರಷ್ಟು ಜಿವಿಕೆ ಸಂಸ್ಥೆಗೆ ಇದೆ. ಹೀಗಾಗಿ ಪೂರ್ಣ ಪ್ರಮಾಣದ ಅಧಿಕಾರ ಯಾರಿಗೂ ಇಲ್ಲದ ಕಾರಣ ಗೊಂದಲ ಉಂಟಾಗಿದೆ ಎಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 108 ಜಿವಿಕೆ ಸಂಯೋಜಕ ಮುನಿಷ್ ತಿಳಿಸಿದ್ದಾರೆ.