





ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಇವರ ನೇತೃತ್ವದಲ್ಲಿ, ದ್ವಾರಕಾ ಪ್ರತಿಷ್ಠಾನ (ರಿ.), ಪುತ್ತೂರು ಇವರ ಪ್ರಾಯೋಜಕತ್ವದಲ್ಲಿ ‘ಸಾಹಿತ್ಯದ ಚಿತ್ತ ವಿದ್ಯಾರ್ಥಿಗಳತ್ತ’ ಎಂಬ ಘೋಷವಾಕ್ಯದೊಂದಿಗೆ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇವರ ಸಂಯೋಜನೆಯಲ್ಲಿ ಕನ್ನಡ ರಾಜ್ಯೋತ್ಸವ 2025 ಮತ್ತು ಪುತ್ತೂರು ತಾಲೂಕು ಮಟ್ಟದ ವಿದ್ಯಾರ್ಥಿಗಳ ಅಂಚೆ ಕಾರ್ಡು ಕವನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನ.1ರಂದು ಮುಕ್ರಂಪಾಡಿಯ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪಬೆಳಗಿಸುವುದರ ಮೂಲಕ ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ಇವರು ಉದ್ಘಾಟಿಸಿದರು. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ.ವಿಜಯ ಕುಮಾರ ಮೊಳೆಯಾರ್ ಅವರು ಆಶಯ ನುಡಿಗಳನ್ನಾಡಿದರು.


ಕಾರ್ಯಕ್ರಮ ಮುಖ್ಯ ಅಭ್ಯಾಗತರಾಗಿದ್ದ ಅಂಕಣಕಾರ, ಹಿರಿಯ ಸಾಹಿತಿ ನಾರಾಯಣ ಕುಕ್ಕುವಳ್ಳಿ ಮತ್ತು ಪಿಎಂಶ್ರೀ ಸ. ಹಿ. ಪ್ರಾ. ಶಾಲೆ, ವೀರಮಂಗಲದ ಮುಖ್ಯೋಪಾಧ್ಯಾಯರಾಗಿರುವ ತಾರಾನಾಥ ಸವಣೂರು ಇವರು ಕಾರ್ಯಾಕ್ರಮಕ್ಕೆ ಶುಭಹಾರೈಸುವುದರ ಜೊತೆಗೆ ಕನ್ನಡ ಭಾಷೆಯ ಬೆಳವಣಿಗೆಯ ಕುರಿತು ಒಳನೋಟಗಳನ್ನು ನೀಡಿದರು.





ಈ ಸಂದರ್ಭದಲ್ಲಿ ಸಾಹಿತಿ ನಾರಾಯಣ ಕುಂಬ್ರ ಅವರ ರಚನೆಯ ‘ಮೊಳಗಲಿ ಕನ್ನಡದ ಕಹಳೆ’ ಆಲ್ಬಮ್ ಹಾಡನ್ನು ಐಎಎಸ್ ತಜ್ಞ ತರಬೇತುದಾರರೂ, ಐಎಎಸ್ ದರ್ಶನ ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯಸ್ಥರೂ ಆಗಿರುವ ದರ್ಶನ್ ಗರ್ತಿಕೆರೆ ಅವರು ಲೋಕಾರ್ಪಣೆಗೊಳಿಸಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಚಿಗುರೆಲೆ ಸಾಹಿತ್ಯ ಬಳಗ, ಪುತ್ತೂರು ಇದರ ಸದಸ್ಯರಾಗಿರುವ ರಶ್ಮಿತಾ ಸುರೇಶ್ ಜೋಗಿಬೆಟ್ಟು ಇವರು ನಿರ್ವಹಿಸಿದರು.
ಈ ಕಾರ್ಯಕ್ರಮದಲ್ಲಿ ಅಂಚೆ ಕಾರ್ಡು ಕವನ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಬಹುಮಾನಿತರ ಪಟ್ಟಿಯನ್ನು ದ್ವಾರಕಾ ಸಂಸ್ಥೆಯ ಕು. ಧನ್ಯಶ್ರೀ ಮಿಂಚಿನಡ್ಕ ಇವರು ವಾಚಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಇದರ ಅಧ್ಯಕ್ಷರಾಗಿರುವ ಪುತ್ತೂರು ಉಮೇಶ ನಾಯಕ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕು. ಕೀರ್ತನಾ ಅರ್ತ್ಯಡ್ಕ ಮತ್ತು ಕು. ಅಕ್ಷರೀ ದ್ವಾರಕಾ ಇವರು ಪ್ರಾರ್ಥಿಸಿದರು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಗಣರಾಜ ಕುಂಬ್ಳೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ದ್ವಾರಕಾ ಪ್ರತಿಷ್ಠಾನದ ಉಪಾಧ್ಯಕ್ಷ ಅಮೃತಕೃಷ್ಣ ಎನ್. ಇವರು ಸ್ವಾಗತಿಸಿ, ನವೀನಕೃಷ್ಣ ಎಸ್. ಉಪ್ಪಿನಂಗಡಿ ಇವರು ವಂದಿಸಿದರು.








