ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸುವಲ್ಲಿ ಜ್ಞಾನವಿಕಾಸ ಕೇಂದ್ರ ಮಹತ್ವಪೂರ್ಣವಾಗಿದೆ -ಸದಾಶಿವ ರೈ
ಬಡಗನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಪುತ್ತೂರು ತಾಲೂಕಿನ ಅರಿಯಡ್ಕ ವಲಯದ ಕರ್ನೂರು ಕಾರ್ಯಕ್ಷೇತ್ರದಲ್ಲಿ ದಾರಿದೀಪ ಜ್ಞಾನವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭವು ನ. 9ರಂದು ಕರ್ನೂರು ಶಾಲೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ಕರ್ನೂರು ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಸದಾಶಿವ ರೈ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಹಮ್ಮಿಕೊಂಡ ಈ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ದೂರೆಯುವ ವಿವಿಧ ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಬದುಕು ರೂಪಿಸುವ ಜತೆಗೆ ಮಕ್ಕಳಿಗೆ ಉತ್ತಮ ಸಂಸ್ಕೃತಿ ಸಂಸ್ಕಾರವನ್ನು ನೀಡಿ ಬೆಳೆಸುವಂತೆ ಕರೆ ನೀಡಿ ಶುಭಹಾರೈಸಿದರು.
ವಲಯದ ಮೇಲ್ವಿಚಾರಕ ಹರೀಶ್ ಕುಲಾಲ್ ರವರು ಜ್ಞಾನ ವಿಕಾಸ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ಮಾತನಾಡಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಉತ್ತಮ ಮಾಹಿತಿಗಳು ತರಬೇತಿಗಳು ದೊರೆಯುತ್ತಿದ್ದು, ಈ ಅವಕಾಶದ ಸದುಪಯೋಗ ಪಡೆಯುವಂತೆ ಹೇಳಿದ ಅವರು ಯಾವುದೇ ಕೆಲಸ ಮಾಡುವಲ್ಲಿ ಸಮಯ ಪಾಲನೆ ಅತೀ ಅಗತ್ಯ. ಸಮಯ ಪಾಲನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅರಿಯಡ್ಕ ವಲಯಾಧ್ಯಕ್ಷ ವಿಕ್ರಂ ರೈ ಸಾಂತ್ಯ,ಅರಿಯಡ್ಕ ವಲಯಾಧ್ಯಕ್ಷ ದಿನೇಶ್ ರೈ ಕುತ್ಯಾಳ, ಕರ್ನೂರು ಒಕ್ಕೂಟದ ಅಧ್ಯಕ್ಷ ಆಶಾ, ಉಪಾಧ್ಯಕ್ಷ ಸುಬ್ಬಣ್ಣ ಕಲ್ಲಾಜೆ, ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
ಒಕ್ಕೂಟದ ಸಂಯೋಜಕಿ ಉಷಾ ಸ್ವಾಗತಿಸಿದರು. ಕೇಂದ್ರದ ಸದಸ್ಯೆ ನೇತ್ರ ವಂದಿಸಿದರು. ಕರ್ನೂರು ಶಾಲಾ ನಿವೃತ ಶಿಕ್ಷಕಿ ರೀತಾ ರವರು ಪ್ರಾರ್ಥಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.