





ವಿಟ್ಲ: ಬಂಟ್ವಾಳ ತಾಲೂಕಿನ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಆವರಣದೊಳಗೆ ಮೇಯುತ್ತಿದ್ದ ನಾಲ್ಕು ಹಸುಗಳನ್ನು ನ.18ರ ತಡರಾತ್ರಿ ಮೂವರು ಮುಸುಕುಧಾರಿಗಳು ಕದ್ದೊಯ್ದದಿರುವ ಘಟನೆ ನಡೆದಿದೆ. ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.


ಸ್ಥಳೀಯ ನಿವಾಸಿಗಳಾದ ನಾರಾಯಣ ನಾಯ್ಕ ಹಾಗೂ ಗಣೇಶ್ ರೈರವರ ದನಗಳು ಎಂದಿನಂತೆ ನ.18 ರಂದೂ ಸೊಸೈಟಿಯ ಆವರಣದಲ್ಲಿ ಮೇಯುತ್ತಿದ್ದವು. ಸಂಜೆಯಾದಾಗ ದನಗಳು ಅಲ್ಲಿಯೇ ಇರುವಂತೆಯೇ ಸೊಸೈಟಿಯ ನೌಕರರು ಗೇಟಿನ ಬೀಗವನ್ನು ಹಾಕಿ ತೆರಳಿದ್ದರು. ಆದರೆ ಮರುದಿನ ಹಸುಗಳು ಕಾಣದಿರುವ ಹಿನ್ನೆಲೆಯಲ್ಲಿ ಹಸುಗಳ ಮಾಲಕರು ಹುಡುಕಾಟ ನಡೆಸುತ್ತಿರುವಂತೆ ಸೊಸೈಟಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಹಸುಗಳನ್ನು ಸೊಸೈಟಿಯ ಗೇಟಿನ ಬೀಗ ಮುರಿದು ಅಕ್ರಮ ಪ್ರವೇಶ ಮಾಡಿ 4 ದನಗಳನ್ನು ಎಳೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಗಣೇಶ್ ರೈ ರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.















