ಚೆಕ್ ಅಮಾನ್ಯ ಪ್ರಕರಣ: ಆರೋಪಿ ಖುಲಾಸೆ

0

ಪುತ್ತೂರು: ಚೆಕ್ ಅಮಾನ್ಯ ಪ್ರಕರಣದ ಆರೋಪಿಯೋರ್ವನನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಪುತ್ತೂರು ಶ್ರೀ ರಾಮ್ ಟ್ರಾನ್ಸ್ ಪೊರ್ಟ್ಸ್ ಫೈನಾನ್ಸ್ ಕಂಪನಿಯಿಂದ ಸುಳ್ಯ ತಾಲೂಕಿನ ಅಜ್ಜಾವರ ಎ.ಬಿ ಅಶ್ರಫ್ ಎಂಬವರು 9,54,೦೦೦ ರೂಪಾಯಿ ಹಣವನ್ನು ವಾಹನ ಪಡೆಯುವುದಕ್ಕಾಗಿ ಸಾಲ ಪಡೆದುಕೊಂಡಿದ್ದರು. ನಂತರ ಅದರ ಮರುಪಾವತಿಗಾಗಿ ಚೆಕ್ ನೀಡಿದ್ದರು. ಆ ಚೆಕ್ ಅಮಾನ್ಯ ಆಗಿದೆ ಎಂದು ಆರೋಪಿಸಿ ಶ್ರೀ ರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪನಿಯವರು ಎ.ಬಿ. ಅಶ್ರಫ್ ವಿರುದ್ಧ ಚೆಕ್ ಅಮಾನ್ಯಗೊಂಡ ಬಗ್ಗೆ ಖಾಸಗಿ ಫಿರ್ಯಾದು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾದ ಎ.ಬಿ ಅಶ್ರಫ್ ರವರು ತಾನು ಯಾವುದೇ ವಾಹನ ಖರೀದಿಗಾಗಿ ಆ ರೀತಿಯಾಗಿ ಸಾಲ ಪಡೆದಿಲ್ಲ. ಸಾಲ ಪಡೆಯುವ ಅವಶ್ಯಕತೆಯೂ ನನಗೆ ಇರಲಿಲ್ಲ ಮತ್ತು ಸಾಲ ಪಡೆದಿದ್ದೇನೆ ಎಂಬ ಕಾಲಕ್ಕೆ ಸಾಲಕ್ಕೆ ಆಧಾರವಾಗಿತ್ತು ಎನ್ನಲಾದ ವಾಹನದ ಮಾಲಕನೂ ನಾನು ಆಗಿರುವುದಿಲ್ಲ. ಸದ್ರಿ ಚೆಕ್ಕನ್ನು ಸಾಲದ ಮರುಪಾವತಿಗಾಗಿ ನಾನು ನೀಡಿದ್ದೂ ಇಲ್ಲ ಮತ್ತು ನನ್ನಿಂದ ಬಾಕಿ ಇದೆ ಎನ್ನಲಾದ ಸಾಲಕ್ಕೆ ಯಾವುದೇ ಚೆಕ್ಕನ್ನು ಬರೆದುಕೊಟ್ಟಿಲ್ಲ. ದಿನಾಂಕ 03/08/2006ರಂದು ನನ್ನ ಮೊಬೈಲ್‌ಗೆ ಮೆಸೇಜ್‌ವೊಂದು Thanks for using for shriram Financial Speciality against Vehicle No.KA21-C-6263 your contact account No is PTR 75634100 ಬಂದಿದ್ದು ವಾಹನಕ್ಕೆ ಸಂಬಂಧಿಸಿ ನಾನು ಸಾಲ ಪಡೆದಿದ್ದೇನೆ ಎಂಬುವುದು, ಅದನ್ನು ನೋಡಿ ನಾನು ಆಶ್ಚರ್ಯಗೊಂಡು ನಾನು ಯಾವುದೇ ಸಾಲ ಪಡೆದಿಲ್ಲ ಎಂದು ನಾನು ತಕ್ಷಣ ಬ್ಯಾಂಕಿಗೆ ಹೋಗಿ ನನ್ನ ಚೆಕ್ಕನ್ನು ಯಾವುದೇ ಕಾರಣಕ್ಕೊ ನಗದೀಕರಣ ಮಾಡುವಂತಿಲ್ಲ ಎಂದು ಬರೆದುಕೊಟ್ಟಿರುತ್ತೇನೆ. ಮಾತ್ರವಲ್ಲದೆ ಶ್ರೀ ರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸಿಗೆ ತನ್ನ ವಕೀಲರ ಮುಖಾಂತರ ನೋಟಿಸು ನೀಡಿ ಚೆಕ್ಕನ್ನು ಹಿಂದಿರುಗಿಸಬೇಕೆಂದು ಕೇಳಿರುತ್ತೇನೆ. ಹಾಗೂ ಒಮ್ಮೆ ನಾನು ನಾರಾಯಣ ರೈ ಎನ್ನುವವರ ಜೊತೆ ಶ್ರೀ ರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಸಂಸ್ಥೆಗೆ ಹೋಗಿದ್ದು ಅವರು ನನ್ನನ್ನು ಹೊರಗೆ ನಿಲ್ಲಿಸಿ ಒಳಗೆ ಹೋಗಿದ್ದು ಮಾತುಕತೆ ಮುಗಿಸಿ ಬಂದಿರುತ್ತಾರೆ. ಮತ್ತು ನನ್ನ ಕೈಯಿಂದ ಖಾಲಿ ಚೆಕ್ಕು, ಖಾಲಿ ಪೇಪರಿಗೆ ಸಹಿ ಮಾಡಿಸಿ ಪಡೆದಿರುತ್ತಾರೆ ಎಂದು ತಿಳಿಸಿದ್ದರು. ವಾದ-ಪ್ರತಿವಾದ ಆಲಿಸಿದ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶರಾದ ಗೌಡ ಆರ್.ಪಿ.ರವರು ಆರೋಪಿಯನ್ನು ನಿರ್ದೋಷಿಯೆಂದು ಪರಿಗಣಿಸಿ ಅವರ ವಿರುದ್ಧ ಸಲ್ಲಿಸಿದ ಕೇಸನ್ನು ವಜಮಾಡಿ ತೀರ್ಪು ನೀಡಿದ್ದಾರೆ. ಆರೋಪಿ ಪರವಾಗಿ ಹಿರಿಯ ವಕೀಲ ಮಹೇಶ್ ಕಜೆ ವಾದಿಸಿದ್ದರು.

LEAVE A REPLY

Please enter your comment!
Please enter your name here