ಅಳಿಕೆ ವ್ಯವಸಾಯ ಸೇವಾ ಸಹಕಾರ ಸಂಘದ ‘ಶತಸಮೃದ್ಧಿ’ ಕಟ್ಟಡ ಉದ್ಘಾಟನೆ

0

ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಸಹಕಾರಿ‌‌ ಸಂಘಗಳಿಂದ ಆಗುತ್ತಿದೆ: ಎಂ.ಎನ್.ರಾಜೇಂದ್ರ ಕುಮಾ‌ರ್
ಭಾರತದ ಆರ್ಥಿಕ ಸುಧಾರಣೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ: ನಳೀನ್ ಕುಮಾರ್ ಕಟೀಲು
ಅಳಿಕೆ ಸಹಕಾರಿ ಸಂಘದ ಹೆಸರು ರಾಜ್ಯದಲ್ಲಿ ಪಸರಿಸಲಿ: ಟಿ.ಜಿ.ರಾಜಾರಾಮ ಭಟ್
ಸಹಕಾರಿ ಜನರಿಗೆ ಸ್ವಾವಲಂಭನೆಯ ಬದುಕು ಕೊಟ್ಟಿದೆ: ಸಂಜೀವ ಮಠಂದೂರು

ವಿಟ್ಲ: ಸ್ವಸಾಯ ಸಂಘದ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬಹಳಷ್ಟು ಎತ್ತರಕ್ಕೆ ಬೆಳೆದಿದೆ. ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಸಹಕಾರಿ‌‌ ಸಂಘಗಳಿಂದ ಆಗುತ್ತಿದೆ. ರೈತರು ಸಮೃದ್ಧಿ ಭರಿತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಸಹಕಾರ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾ‌ರ್ ಹೇಳಿದರು.

ಅವರು ಆ.28ರಂದು ಅಳಿಕೆ ವ್ಯವಸಾಯ ಸೇವಾ ಸಹಕಾರ ಸಂಘದ ಶತಮಾನದ ನೂತನ ಕಟ್ಟಡ ಶತಸಮೃದ್ಧಿ ಉದ್ಘಾಟನೆಯನ್ನು ನಡೆಸಿ, ಸಂಘಕ್ಕೆ 10ಲಕ್ಷ ರೂ ಕೊಡುಗೆ ನೀಡಿ ಮಾತನಾಡಿದರು.ಇತರ ಜಿಲ್ಲೆಗೆ ಹೋಲಿಸಿದರೆ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸಹಕಾರಿಗಳು ಹಲವಾರು ಬದಲಾವಣೆಗಳನ್ನು ತಂದಿದೆ. ಕೃಷಿ ಸಾಲವನ್ನು ಶೇ.100 ರಷ್ಟು ಮರುಪಾವತಿ ಮಾಡುತ್ತಿರುವುದು ಜಿಲ್ಲೆಯ ಹೆಮ್ಮೆಯಾಗಿದೆ. ಗ್ರಾಮೀಣ ಭಾಗದಲ್ಲಿ ಸಂಘ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.

ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ನಳೀನ್ ಕುಮಾರ್ ಕಟೀಲುರವರು ಸಂಸ್ಥೆಯ ಗೋದಾಮು ಉದ್ಘಾಟನೆಯನ್ನು ನಡೆಸಿ ಮಾತನಾಡಿ ಭಾರತದ ಆರ್ಥಿಕ ಸುಧಾರಣೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ. ಅಳಿಕೆ ಶಿಕ್ಷಣದಲ್ಲಿ ಅದ್ಭುತ ಸಾಧನೆಯನ್ನು ಮಾಡಿದೆ. ಆರ್ಥಿಕ ಕುಶಲತೆಯನ್ನು ಸಮಾಜಕ್ಕೆ ನೀಡುವ ಕಾರ್ಯಕ್ಕೆ ಮಡಿಯಾಲ ಕುಟುಂಬ ಮುಂದಾಗಿದೆ. ಕೃಷಿಕರ ಬದುಕನ್ನು ಹಸನು ಮಾಡುವ ಕಾರ್ಯವನ್ನು ಸಹಕಾರಿ ಕ್ಷೇತ್ರ ಮಾಡಿದೆ. ಸಹಕಾರಿ ದುರೀಣರನ್ನು ನೀಡಿದ ಕೀರ್ತಿ ದಕ್ಷಿಣ ಕನ್ನಡ ಜಿಲ್ಲೆಗೆ ಸಲ್ಲುತ್ತದೆ. ಜಗತ್ತಿನಲ್ಲಿ ಆರ್ಥಿಕ ಸುಧಾರಣೆಯನ್ನು ಕಂಡು ಮೂರನೇ ಸ್ಥಾನಕ್ಕೆ ಭಾರತ ಬರುತ್ತಿದೆ. ದೇಶದಲ್ಲಿ 9ಲಕ್ಷ ಸಹಕಾರಿ ಸ್ಥಾಪನೆಗೆ ಮುಂದಾಗುವ ಜತೆಗೆ ಪ್ಯಾಕ್ಸ್ ಮೂಲಕ ಹಲವು ಯೋಜನೆಯನ್ನು ಜೋಡಿಸುವ ಕಾರ್ಯವಾಗಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ನಿರ್ದೇಶಕರಾದ ಟಿ. ಜಿ. ರಾಜಾರಾಮ ಭಟ್ ರವರು ಆಡಳಿತ ಮಂಡಳಿಯ ಸಭಾಂಗಣ ಉದ್ಘಾಟನೆ ಮಾಡಿ ಮಾತನಾಡಿ ಸಹಕಾರಿ ಸಂಘವನ್ನು ಒಡೆಯುವ ಕೆಲಸವಾಗುತ್ತಿದೆ.ಪಂಚಾಯತ್ ಗೊಂದರಂತೆ ಸಹಕಾರಿ ಸಂಘ ಎನ್ನುವ ಯೋಜನೆ ಬಗ್ಗೆ ಮಾತು ಕೇಳಿಬಂದಿದೆ. ಇದರಿಂದ ಈಗ ಇರುವ ಸಹಕಾರಿಗಳು ಒಡೆದು ಹೋಗುವ ಸಾಧ್ಯತೆಇದ್ದು ಗ್ರಾಹಕರಿಗೂ ಸಮಸ್ಯೆಯಾಗಬಹುದು. ಈಗಾಗಲೇ ಕೆಲವೊಂದು ಸಹಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದು, ಸಮಸ್ಯೆಗಳಿಂದ ಪಾರಾಗಿ ಬರುವ ವಿಶ್ವಾಸ ಇದೆ. ಅಳಿಕೆ ಸಹಕಾರಿ ಸಂಘದ ಹೆಸರು ರಾಜ್ಯದಲ್ಲಿ ಪಸರಿಸಲಿ ಎಂದು ಶುಭಹಾರೈಸಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರುರವರು ಗಣಕೀಕರಣ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ
ಶಿಕ್ಷಣ ಕಾಶಿಯಾಗಿರುವ ಅಳಿಕೆ ಇದೀಗ ಸಹಕಾರಿಯ ಕಾಶಿಯಾಗಿದೆ. ಈ ಶತಸಮೃದ್ಧಿ ಇತರರಿಗೆ ಪ್ರೇರಣೆಯಾಗಲಿ. ಸಹಕಾರಿಯ ಮೂಲಕ‌ ಹಲವಾರು‌ ಬದಲಾವಣೆಗಳಾಗಿದೆ. ಹುಟ್ಟಿನಿಂದ ಸಾವಿನವರೆಗೆ ಗ್ರಾಮದ ಜನರಿಗೆ ಸಹಕಾರಿ ಬೆನ್ನೆಲುಬಾಗಿದೆ. ಸಹಕಾರಿ ಜನರಿಗೆ ಸ್ವಾವಲಂಭನೆಯ ಬದುಕು ಕೊಟ್ಟಿದೆ. ಗ್ರಾಮ ರಾಜ್ಯಕ್ಕೆ ಮಾದರಿಯಾಗುವ ಕೆಲಸ ಅಳಿಕೆಯಿಂದಾಗಿದೆ. ಆಧುನಿಕತೆಯ ವ್ಯವಸ್ಥೆಯ ಜೊತೆಗೆ ಸಹಕಾರಿ‌ ಸಾಗಲಿದೆ. ಗ್ರಾಮಕ್ಕೊಂದು ಸಹಕಾರಿಯಾದರೆ ಜಿಲ್ಲೆಗೆ ಸಮಸ್ಯೆ. ಕಾನ ಈಶ್ವರ ಭಟ್ ರವರ ಹೃದಯ ಶ್ರೀಮತಿಕೆ ಅಪಾರ. ರಾಜಕೀಯಕ್ಕಿಂತ ಅಜಾತಶತ್ರುವಾಗಿ ಕೆಲಸ ಮಾಡಲು ಇರುವ ಕ್ಷೇತ್ರ ಸಹಕಾರಿ ಎಂದರು.ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಎಸ್. ಕೃಷ್ಣ ಭಟ್ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು, ದ.ಕ. ಜಿ. ಕೇ. ಸ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ದ.ಕ.ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ., ಸ್ಕಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಬಂಟ್ವಾಳ ಸಹಕಾರ ಅಭಿವೃದ್ಧಿ ಅಧಿಕಾರಿ ಗೋಪಾಲ ಎನ್.ಜೆ., ವಲಯ ಮೇಲ್ವಿಚಾರಕ ಯೋಗೀಶ್ ಎಚ್., ಸಹಕಾರಿಯ ಉಪಾಧ್ಯಕ್ಷ ರೂಪೇಶ್ ರೈ ಜಿ., ನಿರ್ದೇಶಕರಾದ ಚಂದ್ರನಾಥ ಆಳ್ವ ಎಂ., ತಿಮ್ಮಪ್ಪ ಶೆಟ್ಟಿ ಬಿ., ವಸಂತ ಎ. ಆನಂದ ಶೆಟ್ಟಿ, ಭಾಸ್ಕರ ಎಂ., ಸೀತಾರಾಮ ಶೆಟ್ಟಿ ಎಂ., ಸುಂದರ ನಾಯ್ಕ ಬಿ., ಚಂದ್ರಾವತಿ, ವಿನಯ, ವೇದಾವತಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಹಾಸ ರೈ ಬಿ. ಉಪಸ್ಥಿತರಿದ್ದರು.ಮಹಾಲಿಂಗ ಭಟ್ ಸನ್ಮಾನಿತರ ಪರಿಚಯ ಮಾಡಿದರು. ನಿರ್ದೇಶಕ ಮಹೇಶ್ ಅಳಿಕೆ ವಂದಿಸಿದರು. ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಸುಮಂಗಲ ವೈ., ಪ್ರೇಮಾನಂದ ಎಸ್., ಪ್ರಶಾಂತ್ ಸಿ. ಎಚ್. ಸಹಕರಿಸಿದರು.

ಸನ್ಮಾನ – ಅಭಿನಂದನೆ:
ದ.ಕ. ಜಿ. ಕೇ. ಸ. ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾ‌ರ್ ಅವರನ್ನು ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷರಾದ ಕೆ. ಗೋವಿಂದ ಭಟ್ ಕೋಡಿಜಾಲು, ವಿ. ಗೋವಿಂದ ಭಟ್ ವಳಬೈಲು, ವಿ. ಈಶ್ವರ ಭಟ್ ವಧ್ವ, ಮುಳಿಯ ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು. ಪೂರ್ವ ಅಧ್ಯಕ್ಷ ಚಂದ್ರನಾಥ ಆಳ್ವ, ಅಧ್ಯಕ್ಷ ಕಾನ ಈಶ್ವರ ಭಟ್ ಅವರನ್ನು ಅಭಿನಂದಿಸಲಾಯಿತು.

ಹಲವರ ಶ್ರಮ, ಸಹಕಾರ, ತ್ಯಾಗಕ್ಕೆ ಸರಿಯಾದ ಬೆಲೆ ಸಿಕ್ಕಿದೆ: ಕಾನ ಈಶ್ವರ ಭಟ್
ಸಂಘದ ಅಧ್ಯಕ್ಷರಾದ ಕಾನ ಈಶ್ವರ ಭಟ್ ರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಹಿಂದಿನ ಅಧ್ಯಕ್ಷರುಗಳ, ಆಡಳಿತ ಮಂಡಳಿಯವರ ಸಹಿತ ಹಲವರ ಶ್ರಮ, ತ್ಯಾಗ, ಸಹಕಾರಕ್ಕೆ ಇದೀಗ ಸರಿಯಾದ ಬೆಲೆ ಬಂದಿದೆ. ಮುಂದಿನ‌ ದಿನಗಳಲ್ಲಿ ಪಡಿತರ, ಹಣಕಾಸು ಮಾತ್ರವಲ್ಲದೆ ಹಾರ್ಡ್ ವೇರ್ ಸಹಿತ ಇನ್ನಿತರ ವಸ್ತುಗಳ ಮಾರಾಟ ವಿಭಾಗಗಳನ್ನು ನಮ್ಮ ಸಂಸ್ಥೆಯಲ್ಲಿ ತೆರೆಯುವ ಇರಾದೆಯನ್ನು ಹೊಂದಿದ್ದೇವೆ. ಆಧುನಿಕತೆಗೆ ಒಗ್ಗುವ ರೀತಿಯಲ್ಲಿ ಕಟ್ಟಡಗಳನ್ನು‌ ನಿರ್ಮಾಣ ಮಾಡಲಾಗಿದ್ದು, ಮುಂದಿನ ೨೫ ವರ್ಷದವರೆಗೆ ಬದಲಾವಣೆ ಮಾಡುವ ಅವಶ್ಯಕತೆ ಇರುವುದಿಲ್ಲ. ಸಹಕಾರಿಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿ ಸಹಕಾರಿ ನಡೆದುಬಂದ ಹಾದಿಯ ಬಗ್ಗೆ‌ ವಿವರಿಸಿದರು.

LEAVE A REPLY

Please enter your comment!
Please enter your name here