34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ, ಅಹವಾಲು ಸ್ವೀಕಾರ

0

ಕೈಗಾರಿಕಾವಲಯದ 100 ಎಕ್ರೆ ಭೂಮಿ ಎಲ್ಲಿ ಹೋಯಿತು: ಮಠಂದೂರು ಕಾಲೆಳೆದ ಶಾಸಕರು

ಪುತ್ತೂರು: ಪುತ್ತೂರಿನಲ್ಲಿ ಬೃಹತ್ ಕೈಗಾರಿಕಾ ವಲಯವನ್ನು ಸ್ಥಾಪನೆ ಮಾಡಲಾಗುತ್ತದೆ, ಇದಕ್ಕಾಗಿ 100 ಎಕ್ರೆ ಭೂಮಿಯನ್ನು ಕಾಯ್ದಿರಿಸಲಾಗಿದೆ, ವಿವಿಧ ಕೈಗಾರಿಕೆಗಳು ಒಂದೇ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿದೆ, ಇದರಿಂದ ಇಲ್ಲಿನ ಸಾವಿರಾರು ಜನರಿಗೆ ಉದ್ಯೋಗವೂ ಲಭಿಸಲಿದೆ ಎಂದು ಮಾಜಿ ಶಾಸಕರು ಹೇಳಿದ್ದು ಪತ್ರಿಕೆಗಳಲ್ಲಿ ದೊಡ್ಡದಾಗಿ ಬಂದಿತ್ತು, ನಾನು ಓದಿ ಸಂತೋಷಪಟ್ಟಿದ್ದೆ. ಆದರೆ ಹೇಳಿದವರ ಅವಧಿ ಕಳೇದರೂ ಇನ್ನೂ 100 ಎಕ್ರೆ ಭೂಮಿ ಬಂದಿಲ್ಲ ಎಲ್ಲಿ ಹೋಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನು ಪರೋಕ್ಷವಾಗಿ ಶಾಸಕ ಅಶೋಕ್ ರೈ ಕಾಲೆಳೆದಿದ್ದಾರೆ.


34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕರು, ಸುಳ್ಳು ಹೇಳಿಯೇ ಐದು ವರ್ಷ ಕಳೆದುಹೋಗಿದೆ, ಜನತೆಯನ್ನು ಭರವಸೆ ಕೊಟ್ಟೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ಕರಾವಳಿಯಲ್ಲಿ ಏಳು ಮಂದಿ ಬಿಜೆಪಿ ಶಾಸಕರಿದ್ದರು, ಸಂಸದರಿದ್ದರು, ಮಂತ್ರಗಳಿದ್ದರು ಆದರೆ ಕೊಯಿಲದಲ್ಲಿರುವ ಪಶುವೈದ್ಯಕೀಯ ಕಾಲೇಜು ಇವರ ಯಾರ ಕಣ್ಣಿಗೂ ಕಾಣಲಿಲ್ಲ, ಜಾನುವಾರು ಕೇಂದ್ರಕ್ಕೆ ನಯಾಪೈಸೆ ಅನುದಾನ ನೀಡಿಲ್ಲ, ಕೋಟಿಗಟ್ಟಲೆ ಅನುದಾನದಲ್ಲಿ ಕಟ್ಟಿದ ಎಕ್ರೆಗಟ್ಟಲೆ ಜಾಗ ಕಣ್ಣೆದುರೇ ಕೊಳೆಯುತ್ತಿದ್ದರೂ ಬಿಜೆಪಿಗರಿಗೆ ಅದನ್ನು ಅಭಿವೃದ್ದಿ ಮಾಡಬೇಕೆಂಬ ಚಿಂತೆಯೇ ಹೊಳೆಯಲಿಲ್ಲ ಯಾಕೆ? ಕೆಎಂಎಫ್‌ನವರು 10 ಎಕ್ರೆ ಜಾಗ ಕೇಳಿದರೂ ಮಾಜಿ ಶಾಸಕರಿಗೆ ಕೊಡ್ಲಿಕ್ಕೆ ಆಗಲಿಲ್ಲ. 100 ಎಕ್ರೆ ಜಾಗದ ಮಾತು ಎಲ್ಲಿ ಎಂದು ಶಾಸಕರು ಕುಟುಕಿದರು.

ಯುವಕರ ಕೈಗೆ ಉದ್ಯೋಗ ಕೊಡಿ:
ಯುವಕರನ್ನು ತಮ್ಮ ಪಕ್ಷದ ಪ್ರಚಾರಕ್ಕಾಗಿ ಬಳಸುವ ಬಿಜೆಪಿಯವರು ಅವರಿಗೆ ಉದ್ಯೋಗ ಕೊಡಿಸುವ ಆಲೋಚನೆಯೇ ಇಲ್ಲ. ಧರ್ಮದ ಬಗ್ಗೆ ಸುಳ್ಳು ವಿಚಾರಗಳನ್ನು ತಲೆಗೆ ತುಂಬಿಸಿ ಯುವ ಸಮೂಹವನ್ನು ದಾರಿತಪ್ಪಿಸುತ್ತಿರುವ ಬಿಜೆಪಿಯವರು ಇಷ್ಟು ವರ್ಷದಲ್ಲಿ ಎಷ್ಟು ಮಂದಿ ಯುವಕರಿಗೆ ಉದ್ಯೋಗ ಕೊಡಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಯುವಕರನ್ನು ಬಳಸಿಕೊಂಡು ತಾವು ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಬಿಜೆಪಿಯವರ ನಕಲಿ ರಂಪಾಟವನ್ನು ಯುವ ಸಮೂಹ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಸಂಸದರು, ಶಾಸಕರುಗಳು ನಿಮ್ಮ ಕ್ಷೇತ್ರದ ಯುವಕರಿಗೆ ಉದ್ಯೋಗ ಕೊಡಿಸಿ ಪುಣ್ಯಕಟ್ಟಿಕೊಳ್ಳಬೇಕು. ಯಾರದೋ ಅಪ್ಪ ಅಮ್ಮನ ಮಕ್ಕಳನ್ನು ಪಕ್ಷಕ್ಕಾಗಿ ಬಳಸಿಕೊಂಡು ಅವರನ್ನು ದಾರಿತಪ್ಪಿಸಬೇಡಿ ಒಳ್ಳೆಯದಾಗುವುದಿಲ್ಲ. ಯುವ ಸಮೂಹ ಬಿಜೆಪಿಯವರ ನಕಲಿತ್ವವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಕೆಎಂಎಫ್‌ನಿಂದ ಸಾವಿರಾರು ಮಂದಿಗೆ ಉದ್ಯೋಗ ಕೊಡುತ್ತೇನೆ:
ನಾನು ಕೆಎಂಎಫ್‌ನ್ನು ಪುತ್ತೂರಿಗೆ ಸ್ಥಳಾಂತರ ಮಾಡುತ್ತಿದ್ದೇನೆ, ಇದರಲ್ಲಿ ಸಾವಿರಾರು ಮಂದಿ ಯುವಕ, ಯುವತಿಯರಿಗೆ ಕೆಲಸವನ್ನು ಕೊಡಿಸುತ್ತೇನೆ. ಯುವಕರ ಕೈಗೆ ಉದ್ಯೋಗ ಕೊಡುವ ಮೂಲಕ ಅವರ ಕುಟುಂಬಕ್ಕೆ ನೆರವಾಗುವ ರೀತಿಯಲ್ಲಿ ಯುವ ಸಮೂಹವನ್ನು ಸಮಾಜಕ್ಕೆ ಅರ್ಪಿಸುವ ಕೆಲಸವನ್ನು ಮಾಡುತ್ತೇನೆ. ಯಾವ ಕಾರಣಕ್ಕೆ ಯುವಕಸಮೂಹವನ್ನು ಬಳಕೆ ಮಾಡಿ ಎಸೆಯುವ ಜಾಯಾಮಾನ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದು ಶಾಸಕರು ಹೇಳಿದರು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ವಠಾರವನ್ನು ಟೂರಿಸಂ ಕ್ಷೇತ್ರ ಮಾಡುತ್ತೇನೆ, ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ತೆರಳುವ ಯಾತ್ರಾರ್ಥಿಗಳು ಪುತ್ತೂರು ಮತ್ತು ಉಪ್ಪಿನಂಗಡಿಗೆ ಬಂದು ಹೋಗುವಷ್ಟರ ಮಟ್ಟಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರವನ್ನೂ ಟೂರಿಸಂ ಕೇಂದ್ರವಾಗಿ ಮಾಡುತ್ತೇನೆ. ಉಪ್ಪಿನಂಗಡಿಯಲ್ಲಿ ಹೊಸ ಡ್ಯಾಂ ನಿರ್ಮಾಣ ಮಾಡಿ ಸುಮಾರು 6 ಕಿ.ಮೀ ವ್ಯಾಪ್ತಿಗೆ ವರ್ಷಪೂರ್ತಿ ನೀರು ಸಂಗ್ರಹ ಮಾಡುವ ಕೆಲಸವನ್ನು ಮಾಡುತ್ತೇನೆ. ಟೂರಿಸಂ ಕೇಂದ್ರವಾಗಿ ಮಾರ್ಪಟ್ಟರೆ ಇಲ್ಲಿರುವ ಎಲ್ಲರಿಗೂ ವ್ಯವಹಾರವಾಗಲಿದೆ ಎಲ್ಲರಿಗೂ ಒಳ್ಳೆಯದಾಗಲಿದೆ ಎಂದು ಹೇಳಿದರು.

ಭ್ರಷ್ಟಾಚಾರ ರಹಿತ ಕೆಲಸ:
ಯಾವುದೇ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಸಿದರೆ ತಕ್ಷಣ ನನ್ನ ಗಮನಕ್ಕೆ ತನ್ನಿ. ಅಕ್ರಮ ಸಕ್ರಮ, 94 ಸಿ, 94 ಸಿಸಿ ಸೇರಿದಂತೆ ಇಲಾಖೆಯ ಯಾವುದೇ ಕೆಲಸ ಕಾರ್ಯಗಳಿಗೆ ಅಧಿಕಾರಿಗಳು ಲಂಚ ಕೇಳಿದರೆ ನೇರವಾಗಿ ನನಗೆ ತಿಳಿಸಿ ತಕ್ಷಣ ನಾನು ಕಾನೂನುಕ್ರಮಗಳನ್ನು ಕೈಗೊಳ್ಳುತ್ತೇನೆ. ಚುನಾವಣೆಯ ಪೂರ್ವದಲ್ಲೂ ಆ ಬಳಿಕವೂ ನಾನು ಯಾರಿದಂಲೂ ನಯಾ ಪೈಸೆ ತೆಗೆದುಕೊಂಡಿಲ್ಲ, ಮುಂದಕ್ಕೂ ನಾನು ಭ್ರಷ್ಟಾಚಾರರಹಿತವಾಗಿಯೇ ಕೆಲಸವನ್ನು ಮಾಡಲಿದ್ದೇನೆ, ಮಾಡಿಸುತ್ತೇನೆ ಎಂದು ಅಧಿಕಾರಿಗಳಿಗೆ ಬಿಸಿಮುಟ್ಟಿಸಿದರು.

ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆ:
ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರಾದ ಅಶೋಕ್ ನಾಯಕ್ ಇಂದಾಜೆ, ಗಣೇಶ್ ನಾಯ್ಕ್ ಇಂದಾಜೆ, ಅರುಣ್, ಅಣ್ಣು, ಅಪ್ಪಿ, ಉಷಾ, ಪೊನ್ನಕ್ಕ ಮತ್ತು ಭವಾನಿ ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಶಾಸಕರು ಪಕ್ಷದ ದ್ವಜ ನೀಡಿ ಬರಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ನಡೆಯಿತು. ವೇದಿಕೆಯಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆಬಿ , ಮಾಜಿ ಅಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು, ನಗರಸಭಾ ಸದಸ್ಯ ದಿನೇಶ್ ಶೇವಿರೆ, ಗುತ್ತಿಗೆದಾರ ರಾಧಾಕೃಷ್ಣ ನಾಯ್ಕ್, ಬನ್ನೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕೆಪಿಸಿಸಿ ಸಂಯೋಜಕ ಚಂದ್ರಹಾಸ ರೈ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಮಾಜಿ ವಲಯಾಧ್ಯಕ್ಷ ಶೇಖಬ್ಬ ಹಾಜಿ, ವಲಯ ಕಾರ್ಯದರ್ಶಿ ಕಲಂದರ್ ಶಾಫಿ, ಬೂತ್ ಅಧ್ಯಕ್ಷ ಅಬ್ದುಲ್ ಹಮೀದ್, ಇಸಾಕ್ ನೆಕ್ಕಿಲಾಡಿ ಶಾಲೆ, ನವಾಝ್ ಕರ್ವೆಲ್, ಅಬ್ದುಲ್ ಖಾದರ್ ಆದರ್ಶನಗರ, ಜಯಶೀಲಾ, ಜಾನ್ ಕೆನ್ಯುಟ್, ಹನೀಫ್ ಕೆನರಾ, ಫಯಾಝ್ ನೆಕ್ಕಿಲಾಡಿ, ಶರೀಫ್ ನೆಕ್ಕಿಲಾಡಿ, ಕಮರು ಬಾನು, ಕಮಲಾಕ್ಷಿ, ತಾಹಿರಾ, ಪೊನ್ನಕ್ಕ, ಅಣ್ಣಿ, ಅಪ್ಪಿ, ಗಣೇಶ್ ನಾಯಕ್, ಮಜೀದ್, ಬಶೀರ್ ಬೊಳಂತಿಲ, ಯಹ್ಯಾ ಮೊದಲಾದವರು ಉಪಸ್ಥಿತರಿದ್ದರು.
ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿಮಿನೆಜಸ್ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಅಬ್ದುಲ್‌ ರಹಿಮಾನ್ ಯುನಿಕ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here