ಪುತ್ತೂರು: ಪುತ್ತೂರು ಕೋಟಿಚೆನ್ನಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.

ಇಂದು (ಜು.15) ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದೊಳಗೆ ಕೆಳ ಮಹಡಿಯಿಂದ ಮೇಲ್ಮಹಡಿಗೆ ತೆರಳುವ ಮೆಟ್ಟಿಲುಗಳ ಕೆಳಗೆ ವ್ಯಕ್ತಿಯೊಬ್ಬರು ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಂಶಯಗೊಂಡ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ವ್ಯಕ್ತಿ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಇದೇ ವೇಳೆ ಅನ್ಯ ಕಾರ್ಯ ನಿಮಿತ್ತ ಸ್ಥಳಕ್ಕೆ ಆಗಮಿಸಿದ ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸುವಲ್ಲಿ ಪೊಲೀಸರಿಗೆ ನೆರವಾದರು. ಪೊಲೀಸರ ಅಸಹಾಯಕತೆಯನ್ನು ಮನಗಂಡು ಸ್ಟ್ರೆಚರ್ ತರಿಸಿ 108 ವಾಹನಕ್ಕೆ ಮೃತದೇಹವನ್ನು ಕೊಂಡೊಯ್ಯುವಲ್ಲಿ ಕೈ ಜೋಡಿಸಿದರು. ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ ಜಯಪ್ರಕಾಶ್ ಬದಿನಾರು ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಮೃತರನ್ನು ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿ ಪುಟ್ಟಬೈರ ಎಂಬವರ ಪುತ್ರ ಗಣೇಶ್(38ವ) ಎಂದು ಗುರುತಿಸಲಾಗಿದೆ. ಘಟನೆ ಕುರಿತು ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.