ಸರಕಾರಿ ಕಛೇರಿ, ಶಾಲಾ, ಕಾಲೇಜು, ಸಂಘ ಸಂಸ್ಥೆಗಳಲ್ಲಿ ಸಂವಿಧಾನ ಪೀಠಿಕೆ ಅಂಬೇಡ್ಕರ್ ಭಾವಚಿತ್ರ ಕಡ್ಡಾಯಗೊಳಿಸಿ- ಶಾಸಕ ಅಶೋಕ್ ಕುಮಾರ್ ರೈ ಗೆ ಪುತ್ತೂರು ನಿಯೋಗದಿಂದ ಮನವಿ

0

ಪುತ್ತೂರು: ಭಾರತೀಯ ಸಂವಿಧಾನ ಪೀಠಿಕೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಎಲ್ಲಾ ಸರಕಾರಿ ಕಛೇರಿ, ಅರೆ ಸರಕಾರಿ ಕಛೇರಿ, ಶಾಲೆ, ಕಾಲೇಜು, ನ್ಯಾಯಾಲಯ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಸಮಾನ ಮನಸ್ಕರ ಪುತ್ತೂರು  ನಿಯೋಗವೊಂದು ಜು.29 ರಂದು ಮನವಿ ಮಾಡಿದೆ.

ಸಂವಿಧಾನ ಆಶಯ ಮತ್ತು ಗುರಿಯನ್ನು ವಿವರಿಸುವ ಸಂವಿಧಾನದ ಮುಕುಟದಂತಿರುವ ಸಂವಿಧಾನ ಪೀಠಿಕೆ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಎಲ್ಲಾ ಕಡೆಗಳಲ್ಲೂ ಅಳವಡಿಸಬೇಕು, ಇದರಿಂದಾಗಿ ಸಂವಿಧಾನದ ಜಾಗೃತಿ ಮೂಡಿಸಿದಂತಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ.ನಿಯೋಗದಲ್ಲಿರುವ ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಬಡಗನ್ನೂರುರವರು ಮನವಿಯಲ್ಲಿರುವ ವಿಷಯದ ಬಗ್ಗೆ ಹಾಗೂ ಸಂವಿಧಾನ ಪೀಠಿಕೆ ಮತ್ತು ಅಂಬೇಡ್ಕರ್ ಭಾವಚಿತ್ರ ಅಳವಡಿಸುವ ಬಗ್ಗೆ ಮನವಿ ಮಾಡಿಕೊಂಡರು. 

ಪುತ್ತೂರು ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ರೆ.ವಿಜಯ ಹಾರ್ವಿನ್ , ಪುತ್ತೂರು ಸ್ವರ ಮಾಧುರ್ಯ ಸಂಗೀತ ಬಳಗದ ಸಲಹೆಗಾರ ಜನಾರ್ದನ್ ಬಿ, ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಬಡಗನ್ನೂರು, ಜಿಲ್ಲಾ ದಲಿತ ಸೇವಾ ಸಮಿತಿ ವಿಟ್ಲ ಇದರ ಸ್ಥಾಪಕ ಅಧ್ಯಕ್ಷ ಶೇಷಪ್ಪ ಬೆದ್ರಕಾಡ್, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ ಹಾಗೂ ಪತ್ರಕರ್ತ ಸಿಶೇ ಕಜೆಮಾರ್  ಒಳಗೊಂಡ ನಿಯೋಗ ಮನವಿ ಸಲ್ಲಿಸಿದೆ. 

ಈ ಬಗ್ಗೆ ಸರಕಾರದ ಗಮನ ಸೆಳೆಯುತ್ತೇನೆ- ಅಶೋಕ್ ಕುಮಾರ್ ರೈ 
ಮನವಿ ಬಗ್ಗೆ ಪೂರಕ ಸ್ಪಂದನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈಯವರು ಇದೊಂದು ಬಹಳ ಒಳ್ಳೆಯ ವಿಷಯವಾಗಿದೆ. ಅಂಬೇಡ್ಕರ್ ಭಾವಚಿತ್ರದೊಂದಿಗೆ ಸಂವಿಧಾನದ ಪೀಠಿಕೆಯನ್ನು ಪ್ರತಿ ಸರಕಾರಿ ಕಛೇರಿ ಸೇರಿದಂತೆ ಶಾಲೆ, ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಅಳವಡಿಸುವ ಮೂಲಕ ಸಂವಿಧಾನಕ್ಕೆ ಉನ್ನತ ಮಟ್ಟದಲ್ಲಿ ಗೌರವ ನೀಡಿದಂತೆ ಆಗುತ್ತದೆ. ಈ ಬಗ್ಗೆ ಸರಕಾರದ ಗಮನ ಸೆಳೆಯುತ್ತೇನೆ ಎಂದರು.

ಚಾರಿತ್ರಿಕ ಬದಲಾವಣೆಗೆ ನಾಂದಿಯಾಗಲಿದೆ
ಸರಕಾರ ಈಗಾಗಲೇ ಹಲವಾರು ಯೋಜನೆಗಳ ಮೂಲಕ ಕ್ರಾಂತಿಕಾರಿಕ ಬದಲಾವಣೆಯನ್ನು ಜಾರಿಗೆ ತಂದಿದ್ದು ಒಂದು ವೇಳೆ ಸಂವಿಧಾನದ ಪ್ರಸ್ತಾವನೆ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ಅನಾವರಣವನ್ನು ಕಡ್ಡಾಯಗೊಳಿಸಿದಲ್ಲಿ ಅದು ಒಂದು ಬಹುಮುಖ್ಯ ಕ್ರಾಂತಿಕಾರಕ ಬದಲಾವಣೆಯನ್ನು ಉಂಟುಮಾಡಬಹುದಾಗಿದ್ದು ಇಂತಹ ಕಾರ್ಯಕ್ರಮವನ್ನು ನವೆಂಬರ್ ತಿಂಗಳ 26 ನೇ ದಿನ ಸಂವಿಧಾನ ದಿನ ಆಚರಣೆಯ ಸಂದರ್ಭದಲ್ಲಿ ರಾಜ್ಯಾದಾದ್ಯಂತ ಅನಾವರಣ ಮಾಡಲು ಅಧಿಸೂಚನೆ ಹೊರಡಿಸಿದ್ದಲ್ಲಿ ರಾಜ್ಯದಲ್ಲಿ ಸಂವಿಧಾನದ ಕುರಿತು ಇನ್ನಷ್ಟು ಜಾಗೃತಿಯನ್ನು ಮೂಡಿಸಿದಂತಾಗುತ್ತದೆ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ರವರಿಗೆ ವಿಶೇಷ ಗೌರವವನ್ನು ನೀಡಿದ ರಾಜ್ಯ ಎಂಬ ಹೆಗ್ಗಳಿಕೆಗೆ ನಮ್ಮ ರಾಜ್ಯವು ಪಾತ್ರವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂಬುದು ನಮ್ಮೆಲ್ಲರ ಅಭಿಪ್ರಾಯವಾಗಿದೆ. ಈ ವಿಚಾರವನ್ನು ತಾವುಗಳು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು ಸಂಬಂಧಪಟ್ಟ ಇಲಾಖೆಯವರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಮಾಡಲು ಕ್ರಮ ವಹಿಸುವಂತೆ ತಮ್ಮಲ್ಲಿ ಈ ಮೂಲಕ ಕೋರಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here