ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ವಿಧಾತ ಭಗವದ್ಗೀತಾ ಕಾರ್ಯಕ್ರಮ

0

ಭಗವದ್ಗೀತೆಯ ಓದು ಜೀವನದ ದೃಷ್ಟಿಕೋನವನ್ನು ಉತ್ತಮವಾಗಿಸುತ್ತದೆ. : ಪೂಜ್ಯ ಗುಣಾಕರ ರಾಮದಾಸ
ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ 1600  ಭಗವದ್ಗೀತಾ ಪುಸ್ತಕ ವಿತರಣೆ

ಪುತ್ತೂರು: ಜೀವನದ ಆಳವಾದ ಅರ್ಥ,ಉದ್ದೇಶ ಮತ್ತು ನಿರ್ದಿಷ್ಟಗುರಿಯನ್ನು ಸಾಧು,ಸಂತರು,ಶಾಸ್ತ್ರಗಳು ಹಾಗೂ  ಪ್ರಾಚೀನ ಗ್ರಂಥವಾದ ಭಗವದ್ಗೀತೆಯು ತಿಳಿಸಿಕೊಟ್ಟಿದೆ. ಇದನ್ನರಿಯದ ಅನೇಕರು, ಸಮಾಜದ ಉನ್ನತ ಸ್ಥಾನದಲ್ಲಿರುವವರು ಸೇರಿದಂತೆ ಜೀವನದ ಉತ್ತುಂಗಕ್ಕೆ ತಲುಪಿದ ಮೇಲೆ ಖಿನ್ನತೆಗೊಳಗಾಗಿ ಜೀವನವನ್ನು ತಾವೇ ಅಂತ್ಯಗೊಳಿಸುತ್ತಾರೆ. ಪುಸ್ತಕ ಜಗತ್ತಿನಲ್ಲಿ ವಿದ್ಯೆ,ತಾಂತ್ರಿಕ ಕೌಶಲ್ಯವನ್ನು ಹೊಂದಿದವರು ಇದ್ದಾರೆ. ಆದರೆ ಜ್ಞಾನವನ್ನು ಜೀವನದಲ್ಲಿ ಅನ್ವಯಿಸುವುದರಲ್ಲಿ ಎಡವುತ್ತಾರೆ. ಆದುದರಿಂದ ಜೀವನದ ಶೋಕ,ಸಂದಿಗ್ಧ ಪರಿಸ್ಥಿತಿಗಳಲ್ಲಿ ಭಗವದ್ಗೀತೆಯನ್ನು ಓದಿ, ಜೀವನದ ಸಾರ ಅರ್ಥೈಸಿಕೊಂಡು ಲಭ್ಯವಿರುವ ಅಲ್ಪ ಸಮಯವನ್ನು ಭಗವದ್ಗೀತೆಯ ಓದುವಿಕೆಗೆ ಮೀಸಲಿಡಬೇಕು” ಎಂದು ಪೂಜ್ಯ ಗುಣಾಕರ ರಾಮದಾಸ , ಅಧ್ಯಕ್ಷರು, ಇಸ್ಕಾನ್‌ ಮಂಗಳೂರು, ಎಚ್.ಕೆ. ಎಂ ಮಂಗಳೂರು ಮತ್ತು ವಲಯ ಅಧ್ಯಕ್ಷರು, ಅಕ್ಷಯಪಾತ್ರ ಫೌಂಡೇಶನ್‌ ಇವರು ನುಡಿದರು.

ಅವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ವಿವೇಕ ವಿಧಾತ ಭಗವದ್ಗೀತಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.  ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀ ಆಂಜನೇಯ ರೆಡ್ಡಿ , ಸಬ್‌ ಇನ್‌ ಸ್ಪೆಕ್ಟರ್ ,ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಠಾಣೆ ಪುತ್ತೂರು, ಇವರು ಮಾತನಾಡುತ್ತಾ “ಭಾರತ ಅತ್ಯಂತ ವಿಶಿಷ್ಟವಾದ ಸಾಂಸ್ಕೃತಿಕ ಹಾಗೂ ಬೌದ್ಧಿಕ ಹಿರಿಮೆಯುಳ್ಳ ದೇಶವಾಗಿದೆ. ಜಗತ್ತಿನ ಬೇರೆ ಯಾವ ರಾಷ್ಟ್ರವೂ ಇಂತಹ ಪಾರಂಪರಿಕ ಹಿನ್ನೆಲೆಯನ್ನು ಹೊಂದಿಲ್ಲದ ಕಾರಣ ಈ ನೆಲದಲ್ಲಿ ಜನಿಸಿದ ನಾವು ಭಾಗ್ಯಶಾಲಿಗಳು. ಪೂಜ್ಯ ಶಂಕರಾಚಾರ್ಯರು, ಬಸವಣ್ಣ, ಸ್ವಾಮಿ ವಿವೇಕಾನಂದ ಮುಂತಾದ ಮಹನೀಯರು ಅವರ ಪರಮೋಚ್ಛ ಸಾಧನೆಗಳಿಂದ ಇಂದು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಆದುದರಿಂದ ನಾವು ಎಷ್ಟು ವರ್ಷಗಳ ಕಾಲ ಜೀವಿಸಿದ್ದೆವು ಅನ್ನುವುದಕ್ಕಿಂತ ಜೀವಿಸಿದ ಅವಧಿಗಳಲ್ಲಿ ನಾವು ಗೈದ ಸಾಧನೆಗಳು ನಮ್ಮನ್ನು ನೂರು ಕಾಲ ಜೀವಂತವಾಗಿರಿಸುತ್ತವೆ. ಭಗವದ್ಗೀತೆಯಂತಹ ಪುಸ್ತಕ ಮಾನಸಿಕ ಬಲವನ್ನು ತುಂಬಿ ಆತ್ಮವಿಶ್ವಾಸವನ್ನು ನೀಡುವುದರ ಮೂಲಕ ಭವಿಷ್ಯಕ್ಕೆ ಬೆಳಕಾಗಬಲ್ಲುದು ಎಂದರು.                                                               

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ. ಮಾತನಾಡುತ್ತಾ “ಶಿಕ್ಷಣದ ಮೂಲ ಉದ್ದೇಶ ನಮ್ಮೊಳಗೆ ಅಂತರ್ಗತವಾಗಿರುವ ಅರಿವಿನ ಬೆಳಕಿನ ಪ್ರಕಟೀಕರಣ. ಜಗತ್ತಿಗೆ ಭಾರತವು ನೀಡಿದ ಆಧ್ಯಾತ್ಮಿಕ ದೇಣಿಗೆ ಅಪಾರವಾದುದು. ಈ ನೆಲದ ಅಸ್ಮಿತೆಯಾಗಿರುವ ಭಗವದ್ಗೀತೆಯ ಜ್ಞಾನ,  ಇಂದು ಜಗತ್ತಿಗೆ ಬೆಳಕು ನೀಡುವ ಶಕ್ತಿಪುಂಜವನ್ನು ಧ್ವಂಸ ಮಾಡುವ ನೀಚ ಶಕ್ತಿಗಳನ್ನು ಧಮನ ಮಾಡುವಲ್ಲಿ ಆವಶ್ಯಕವಾಗಿದೆ. ಇಸ್ಕಾನ್ ನಂತಹ ಬಹುದೊಡ್ಡ  ಆಧ್ಯಾತ್ಮಿಕ ಕೇಂದ್ರ ಭಗವದ್ಗೀತೆಯ ಸಂದೇಶವನ್ನು ಜಗತ್ತಿನ ಮೂಲೆ ಮೂಲೆಗೆ ತಲುಪಿಸುವ ಮೂಲಕ ಸೇವೆಯೆಂಬ ಶಬ್ದಕ್ಕೆ ಹೊಸರೂಪವನ್ನು ನೀಡುತ್ತಿದೆ ಎಂದರು.

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ  ಸತೀಶ್ ರಾವ್‌,  ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಡಾ. ಕೃಷ್ಣ ಪ್ರಸನ್ನ ಕೆ, ಕಾಲೇಜಿನ ಪ್ರಾಂಶುಪಾಲರಾದ ಮಹೇಶ್‌ ನಿಟಿಲಾಪುರ ,ಉಪಪ್ರಾಂಶುಪಾಲರಾದ ದೇವಿಚರಣ್‌ ರೈ ಹಾಗೂ ಕಾರ್ಯಕ್ರಮದಲ್ಲಿ  ಕಾಲೇಜಿನ ಉಪನ್ಯಾಸಕ –ಉಪನ್ಯಾಸಕೇತರ ಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಳಿಕ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಭಗವದ್ಗೀತೆ ಪುಸ್ತಕಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿದ್ದ ಅತಿಥಿ ಗಣ್ಯರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ಕಾಲೇಜಿನ ವಿಧ್ಯಾರ್ಥಿನಿಯರು ಪ್ರಾರ್ಥಿಸಿ, ಆಡಳಿತ ಮಂಡಳಿ ಸದಸ್ಯರಾದ ಡಾ. ಕೃಷ್ಣ ಪ್ರಸನ್ನ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾಲೇಜಿನ ಉಪಪ್ರಾಂಶುಪಾಲರಾದ ದೇವಿಚರಣ್‌ ರೈ ವಂದಿಸಿ, ಉಪನ್ಯಾಸಕಿ ದಿವ್ಯಾ.ಕೆ ಸ್ವಾಗತಿಸಿ, ನಿರೂಪಿಸಿದರು.                                                    

LEAVE A REPLY

Please enter your comment!
Please enter your name here