ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಲು ಆ.31 ಅಂತಿಮ ದಿನ

0

ಪುತ್ತೂರು: ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ)ಮಾಡಿಸಿಕೊಳ್ಳಲು ಆ.31 ಅಂತಿಮ ದಿನವಾಗಿದೆ. ಇದರಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಚೀಟಿದಾರರು ಆ.31ರ ಒಳಗಾಗಿ ಇ-ಕೆವೈಸಿ ಮಾಡಿಕೊಳ್ಳುವುದನ್ನು ಸರಕಾರ ಕಡ್ಡಾಯಗೊಳಿಸಿದೆ.

ತಾಲೂಕಿನಲ್ಲಿ 2,413 ಅಂತ್ಯೋದಯ, 24,984 ಬಿಪಿಎಲ್ ಹಾಗೂ 21,003 ಎಪಿಎಲ್ ಪಡಿತರ ಚೀಟಿಯಿದೆ. ಇದರಲ್ಲಿ ಒಟ್ಟು 1,95,642 ಸದಸ್ಯರನ್ನು ಹೊಂದಿದೆ. ಈ ಪೈಕಿ 2045 ಅಂತ್ಯೋದಯ, 23,086 ಬಿಪಿಎಲ್ ಮತ್ತು 11,900 ಎಪಿಎಲ್ ಪಡಿತರ ಚೀಟಿಗಳ ಒಟ್ಟು 1,58,853 ಸದಸ್ಯರು ಈಗಾಗಲೇ ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. 368 ಅಂತ್ಯೋದಯ, 1898 ಬಿಪಿಎಲ್ ಹಾಗೂ 9103 ಎಪಿಎಲ್ ಪಡಿತರ ಚೀಟಿಗಳ ಒಟ್ಟು 36,779 ಮಂದಿ ಸದಸ್ಯರು ಇನ್ನೂ ಇ-ಕೆವೈಸಿ ಮಾಡಿಸಿಕೊಳ್ಳಲು ಬಾಕಿಯಿದೆ. ಕೆಲವೊಂದು ಚೀಟಿಗಳಲ್ಲಿ ಒಂದಿಬ್ಬರು ಸದಸ್ಯರು ಇ-ಕೆವೈಸಿ ಮಾಡಿಸಿಕೊಳ್ಳಲು ಬಾಕಿಯಿದೆ.
ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿಯೇ ಇ-ಕೆವೈಸಿ ಮಾಡಿಕೊಳ್ಳಬೇಕಾಗಿದೆ. ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶವಿದ್ದು ವಲಸೆ ಬಂದವರು, ಹೋದವರು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿಯೂ ತಮ್ಮ ಆಧಾರ್ ಆಧಾರಿತ ಬೆರಳಚ್ಚು ನೀಡಿ ದೃಡೀಕರಣ ಮಾಡಿಸಿಕೊಳ್ಳಬಹುದಾಗಿದೆ ಎಂದು ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here