ವಿವೇಕಾನಂದ ಶಿಶು ಮಂದಿರ 26ನೇ ವರ್ಷದ ಶ್ರೀಕೃಷ್ಣಲೋಕ-ಶ್ರೀಕೃಷ್ಣ ಬಾಲಲೀಲೆಗಳನ್ನು ನೆನಪಿಸಿದ ಕೃಷ್ಣ ಲೋಕ

0

ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಇಲ್ಲಿನ ವಿವೇಕಾನಂದ ಶಿಶು ಮಂದಿರದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ಆ.26ರಂದು ನಡೆದ 26ನೇ ವರ್ಷದ ‘ಶ್ರೀಕೃಷ್ಣಲೋಕ’ ಕಾರ್ಯಕ್ರಮವು ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸಿತು.


ಪರ್ಲಡ್ಕ ಶಿವಪೇಟೆಯಲ್ಲಿರುವ ಶಿಶು ಮಂದಿರದ ಆವರಣದಲ್ಲಿ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಂದ ಪ್ರಾರ್ಥನೆ ನಡೆದು ಕೃಷ್ಣ ರಾಧೆಯರ ನೊಂದಾವಣೆಯು ಪ್ರಾರಂಭಗೊಂಡಿತು. ವಿದ್ಯಾರ್ಥಿಗಳಿಂದ ಭಜನೆ ಜರುಗಿತು. ಬಳಿಕ ತೊಟ್ಟಲ ಸಂಭ್ರಮದ ಮಗುವಿನ ಅಮ್ಮನಿಗೆ ಆರತಿ ಬೆಳಗಿ ಬಾಗಿನ ಅರ್ಪಿಸಲಾಯಿತು. ಆರು ತಿಂಗಳ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಬೆಣ್ಣೆ ತಿನ್ನಿಸಿ, ಮಾತೃ ಮಂಡಳಿಯ ಸದಸ್ಯರು, ಮಾತೆಯರು ಬಾಲಕೃಷ್ಣನ ತೊಟ್ಟಲ ತೂಗಿ, ಜೋಗುಳ ಹಾಡಿ ಸಂಭ್ರಮಿಸಿದರು.


ನಂತರ ನಡೆದ ಶ್ರೀಕೃಷ್ಣ-ರಾಧೆಯರ ಶೋಭಾಯಾತ್ರೆಗೆ ಮಾಜಿ ಶಾಸಕ ಸಂಜೀವ ಮಠಂದೂರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ನಗರ ಸಭಾ ಸದಸ್ಯೆ ವಿದ್ಯಾ ಗೌರಿ ಧ್ವಜ ಹಸ್ತಾಂತರಿಸಿದರು. ಶಿಶು ಮಂದಿರದ ಆವರಣದಿಂದ ಹೊರಟ ಮೆರವಣಿಗೆಯು ಎಂ.ಟಿ ರಸ್ತೆಯಾಗಿ ಮುಖ್ಯ ರಸ್ತೆಯ ಮೂಲಕ ಸಾಗಿ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಮಾಪನಗೊಂಡಿತು. ಕೃಷ್ಣ ರಾಧೆಯ ವೇಷ ಧರಿಸಿದ ಸಾವಿರಾರು ಪುಟಾಣಿಗಳ ವೈಭವದ ಮೆರವಣಿಗೆಯಲ್ಲಿ ಮಕ್ಕಳ ಪೋಷಕರು ಜತೆಯಾಗಿ ಸಾಗಿದರು. ಶ್ರೀಕೃಷ್ಣ ಹಾಗೂ ರಾಧೆಯ ವೇಷ ಭೂಷಣದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿ ಮಗುವಿನಲ್ಲಿಯೂ ಕೃಷ್ಣನನ್ನು ಕಾಣುವ ಖುಷಿ ಪೋಷಕರದ್ದು ಆಗಿತ್ತು. ಕೆಲವು ಮಕ್ಕಳು ಕೊಳಲು ಹಿಡಿದು ಕುಣಿದು ಸಂಭ್ರಮಿಸಿದರೆ ಇನ್ನು ಕೆಲವು ಮಕ್ಕಳ ಆಟ, ತುಂಟಾಟವು ನೋಡುಗರ ಗಮನ ಸೆಳೆಯಿತು.

LEAVE A REPLY

Please enter your comment!
Please enter your name here