ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಸಂಸ್ಕೃತ ದಿನಾಚರಣೆ

0

ಸಂಸ್ಕೃತ ಸಂಪೂರ್ಣ ಬೆಳವಣಿಗೆ ಹೊಂದಿದ ಭಾಷೆ: ಶಶಿಕಲಾ ವರ್ಕಾಡಿ


ಪುತ್ತೂರು: ಸಂಸ್ಕೃತ ಪರಿಪೂರ್ಣ ಭಾಷೆಯಾಗಿದ್ದು, ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಇದು ಎಲ್ಲಾ ಭಾಷೆಗಳ ಮಾತೃಸ್ವರೂಪಿ ಭಾಷೆಯಾಗಿ ಗುರುತಿಸಿಕೊಂಡಿದೆ. ಸಂಸ್ಕೃತ ಪದಗಳು ವಿಶ್ವದ ಬಹುತೇಕ ಭಾಷೆಗಳಲ್ಲಿ ಬಳಕೆಯಾಗುತ್ತಿರುವುದೇ ಇದಕ್ಕೆ ಸ್ಪಷ್ಟ ಉದಾಹರಣೆ ಎಂದು ಅಂಬಿಕಾ ಮಹಾವಿದ್ಯಾಲಯ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಶಶಿಕಲಾ ವರ್ಕಾಡಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗ ಹಮ್ಮಿಕೊಂಡಿದ್ದ ಸಂಸ್ಕೃತ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.


ಸಂಸ್ಕೃತ ಶ್ಲೋಕಗಳು ಪಠಣೆಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿ ಹರಿದುಕೊಂಡು ಬಂದರೂ ಇಂದಿಗೂ ಜೀವಂತವಾಗಿವೆ. ಇದು ಭಾಷಾ ಶ್ರೀಮಂತಿಕೆಗೆ ಸಾಕ್ಷಿ. ಈ ಭಾಷೆಯ ವಿಶೇಷತೆಯೆಂದರೆ ತುಂಬಾ ಗಹನವಾದ ಅರ್ಥ ತುಂಬಿದ ಪದಗಳನ್ನು ಹೊಂದಿದೆ. ನ್ಯಾಯಾಲಯ, ಸಂವಿಧಾನ, ರಕ್ಷಣಾ ವಿಭಾಗಗಳು ಸೇರಿದಂತೆ ವಿವಿಧೆಡೆ ಧ್ಯೇಯ ವಾಕ್ಯಗಳ ಬಳಕೆಯಲ್ಲಿ ಮಹಾಭಾರತದ ಸಂಸ್ಕೃತ ಶ್ಲೋಕಗಳ ಸಾಲನ್ನೇ ಆಯ್ದು ಬಳಸಲಾಗಿದೆ ಎಂದು ಉದಾಹರಣೆ ಸಹಿತ ವಿವರಿಸಿದರು.


ಸಂಸ್ಕೃತ ಸಂಪೂರ್ಣ ಬೆಳವಣಿಗೆ ಹೊಂದಿದ ಭಾಷೆ. ಹಿಂದೆ ಇದು ಕೇವಲ ಒಂದು ವರ್ಗಕ್ಕೆ ಸಂಸ್ಕೃತ ಸೀಮಿತವಾಗಿರಲಿಲ್ಲ, ಎಲ್ಲರಿಗೂ ಸೇರಿದ ಭಾಷೆಯಾಗಿತ್ತು. ಭಾರತದ ಭವ್ಯ ಜ್ಞಾನ ಭಂಡಾರವನ್ನು ಸಂಸ್ಕೃತದಲ್ಲಿ ಹಿಡಿದಿಡಲಾಗಿದೆ. ಆಗಿನ ಕಾಲದಲ್ಲಿಯೇ ಗುರುತ್ವಾಕರ್ಷಣೆ, ಸೂರ್ಯನ ಶಕ್ತಿ, ಗ್ರಹಣ, ಲೋಹ, ಮೊದಲಾದವುಗಳ ಕುರಿತು ಅಧ್ಯಯನ ನಡೆಸಲಾಗಿತ್ತು. ಕಣಾದನಂತಹ ಭೌತ ವಿಜ್ಞಾನಿಗಳು ಭಾರತದಲ್ಲಿ ಇದ್ದರು. ಅವರುಗಳು ಮಂಡಿಸಿದ ವಿಚಾರಗಳನ್ನೇ ಪಾಶ್ಚಾತ್ಯ ವಿಜ್ಞಾನಿಗಳು ಮಂಡಿಸಿ, ಅವರು ಕಂಡುಹಿಡಿದದ್ದು ಎಂಬಂತೆ ಬಿಂಬಿಸಿದ್ದಾರೆ. ಭಾರತೀಯರ ಜ್ಞಾನ ಪರಂಪರೆ ಇಂದಿಗೂ ನಿಗೂಢವಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಕ್ಯೂಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ, ಸಂಸ್ಕೃತದಲ್ಲಿ ಎಲ್ಲಾ ವಿಚಾರಗಳೂ ಲಭಿಸುತ್ತವೆ. ಇದು ಭಾರತದ ಪರಂಪರೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುತ್ತದೆ. ಸಂಸ್ಕೃತದ ಪ್ರತೀ ಪದಗಳೂ 60ರಿಂದ 100ರಷ್ಟು ಸಮಾನಾಂತರ ಪದಗಳನ್ನು ಹೊಂದಿರುವುದೇ ಇದಕ್ಕೆ ಸಾಕ್ಷಿ. ಇಷ್ಟೊಂದು ಅಗಾಧತೆಯನ್ನು ಬೇರೆ ಯಾವುದೇ ಭಾಷೆಯಲ್ಲಿ ಕಾಣಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಸಂಸ್ಕೃತದಲ್ಲಿ ನಿರ್ವಹಿಸಿದ್ದು ವಿಶೇಷವಾಗಿತ್ತು. ಶ್ರೀಲಕ್ಷ್ಮೀ ಪ್ರಾರ್ಥಿಸಿದರು. ಶರಣ್ಯ ಕಾರ್ಯಕ್ರಮ ನಿರೂಪಿಸಿದರು. ಅಕ್ಷಿತಾ ಸ್ವಾಗತಿಸಿ, ಶ್ರೀದೇವಿ ವಂದಿಸಿದರು.

LEAVE A REPLY

Please enter your comment!
Please enter your name here