ನಾಪತ್ತೆಯಾಗಿದ್ದ ವಿವಾಹಿತೆ ಪತ್ತೆ – ಕರುಳ ಬಳ್ಳಿಗಳ ಕೂಗಿಗೂ ಮರುಗದೇ ಸ್ವತಂತ್ರ ಜೀವನ ಆರಿಸಿಕೊಂಡ ತಾಯಿ!

0

ಉಪ್ಪಿನಂಗಡಿ: ಇಲ್ಲಿನ ಉಪ್ಪಿನಂಗಡಿ (Uppinangady) ಪೊಲೀಸ್ ಠಾಣಾ ವ್ಯಾಪ್ತಿಯ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿಂದ ನಾಪತ್ತೆಯಾಗಿದ್ದ 31ರ ಹರೆಯದ ವಿವಾಹಿತೆ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ತನ್ನ ಪತಿ ಹಾಗೂ ಎಳೆ ಮಕ್ಕಳನ್ನು ತೊರೆದು ಸ್ವತಂತ್ರವಾಗಿ ಜೀವನ ನಡೆಸುವುದಾಗಿ ತಿಳಿಸಿದ್ದರಿಂದ ಪತಿ ಹಾಗೂ ಮಕ್ಕಳು ಕಂಗೆಟ್ಟ ಘಟನೆ ನಡೆದಿದೆ. 

ದೇರಣೆ ನಿವಾಸಿ ನಾರಾಯಣ ಎಂಬವರು ತನ್ನ ಪತ್ನಿ ಕಳೆದ ಅಗಸ್ಟ್ 23 ರಂದು ಪುತ್ತೂರಿನ ಸಿಟಿ ಆಸ್ಪತ್ರೆಗೆ ಹೋಗಿ ಬರುವೆನೆಂದು ಹೇಳಿ ಹೋದಾಕೆ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪೊಲೀಸರು ಪ್ರಕರಣವನ್ನು ದಾಖಲಿಸಿ ಶೋಧ ಕಾರ್ಯಾಚರಣೆ ನಡೆಸಿದಾಗ ಮಂಗಳೂರಿನ ಪಿ.ಜಿ.ಯೊಂದರಲ್ಲಿ ನಾಪತ್ತೆಯಾದ ಮಹಿಳೆಯು ಪತ್ತೆಯಾಗಿದ್ದು, ಆಕೆಯನ್ನು ಕರೆತಂದು ವಿಚಾರಿಸಿದಾಗ, ‘ತನಗೆ ಗಂಡನೊಂದಿಗೆ ಜೀವನ ನಡೆಸಲು ಅಸಾಧ್ಯ. ಅದಕ್ಕಾಗಿ ಮಕ್ಕಳನ್ನು ಮತ್ತು ಪತಿಯನ್ನು ತೊರೆದು ಮಂಗಳೂರಿನಲ್ಲಿ ಉದ್ಯೋಗವೊಂದಕ್ಕೆ ಸೇರಿರುವುದಾಗಿ..’ ತಿಳಿಸಿದ್ದಾಳಲ್ಲದೆ, ತಾನು ಸ್ವತಂತ್ರ ಜೀವನ ನಡೆಸುವುದಾಗಿ ತಿಳಿಸಿದ್ದಳು.

ಕರುಳ ಬಳ್ಳಿಗಳು ಬೇಡವಾಯಿತೇ?
ಪತ್ನಿಯಾದವಳಿಗೆ ಗಂಡನೊಂದಿಗೆ ಭಿನ್ನಾಭಿಪ್ರಾಯ ಮೂಡುವುದು, ಹೊಂದಾಣಿಕೆಯ ಜೀವನ ಕಷ್ಟವಾಗುವುದು ಸಹಜ. ಆದರೆ ಎಷ್ಟೇ ಕಷ್ಟವಾದರೂ ತಾಯಿಯಾದವಳು ತನ್ನ ಮಕ್ಕಳನ್ನು ತನ್ನೊಂದಿಗೆ ಕರೆದೊಯ್ಯುವುದು ಸಮಾಜದಲ್ಲಿ ಕಾಣುವ ಸರ್ವೆ ಸಾಮಾನ್ಯ ವಿದ್ಯಮಾನವಾಗಿದೆ. ಆದರೆ ಇಲ್ಲಿ ಇದು ತದ್ವಿರುದ್ಧವಾಗಿದ್ದು, ಈ ಪ್ರಕರಣದಲ್ಲಿ ತನ್ನ ಹನ್ನೆರಡು ವರ್ಷ ಪ್ರಾಯದ ವಿಶೇಷ ಚೇತನ  ಮಗು ಹಾಗೂ ಐದು ವರ್ಷದ ಇನ್ನೊಂದು ಮಗುವನ್ನು ಗಂಡನ ಜೊತೆ ಬಿಟ್ಟು ತಾನು ಸ್ವತಂತ್ರ ಜೀವನ ನಡೆಸಲು ಮುಂದಾಗಿರುವುದು ಆಶ್ಚರ್ಯಕಾರಿಯಾಗಿದೆ.‘ಅಮ್ಮ ಬೇಕು. ನನ್ನಮ್ಮ ಬೇಕು..’ ಎಂದು ದಿನ ನಿತ್ಯ ಅಳುತ್ತಿರುವ ಮಕ್ಕಳನ್ನು ಸಮಾಧಾನಿಸುವುದರಲ್ಲಿಯೇ ಆಕೆಯ ಗಂಡ ಈ ಹೈರಾಣಾಗುವಂತಾಗಿದೆ.

LEAVE A REPLY

Please enter your comment!
Please enter your name here