ಅ.3-12:ಮೊಟ್ಟೆತ್ತಡ್ಕ ಮಿಶನ್‌ಮೂಲೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಜ್ರಂಭಣೆಯ ನವರಾತ್ರಿ ಉತ್ಸವ

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅ.3 ರಿಂದ 12ರ ವರೆಗೆ ವರ್ಷಂಪ್ರತಿ ಆಚರಿಸುತ್ತಿರುವ ಸಾರ್ವಜನಿಕ ನವರಾತ್ರಿ ಉತ್ಸವ ಕಾರ್ಯಕ್ರಮ ನಡೆಯಲಿದೆ.


ಅ.3ರಂದು ಗುರುವಾರ ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ರಾತ್ರಿ ಮೊಟ್ಟೆತ್ತಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಮಹಾಪೂಜೆ, ಅ.4 ರಂದು ಶುಕ್ರವಾರ ರಾತ್ರಿ ಸಾಯಿಕಲಾ ಯಕ್ಷ ಬಳಗ, ಬಾಲವನ ಪುತ್ತೂರು ಇವರಿಂದ ಯಕ್ಷಗಾನ ‘ಏಕಾದಶಿ ದೇವಿ ಮಹಾತ್ಮೆ’ ಅನಂತರ ಮಹಾಪೂಜೆ, ಅ.5ರಂದು ಶನಿವಾರ ರಾತ್ರಿ ಮೊಟ್ಟೆತ್ತಡ್ಕ ನಾಟ್ಯರಂಜಿನಿ ಕಲಾಲಯ ಇದರ ಗುರು ವಿದುಷಿ ಪ್ರಮೀಳ ಉದಯ್‌ರವರ ನೇತೃತ್ವದಲ್ಲಿ ‘ನೃತ್ಯಸಂಧ್ಯಾ’ ಭರತನಾಟ್ಯ, ಮೋಹಿನಿಯಾಟ್ಟಂ ಮತ್ತು ಜಾನಪದ ನೃತ್ಯ ಬಳಿಕ ಮಹಾಪೂಜೆ ನಡೆಯಲಿದೆ.


ಅ.6 ರಂದು ಆದಿತ್ಯವಾರ ಮುಕ್ರಂಪಾಡಿ ಆನಂದಾಶ್ರಮ ಅಂಗನವಾಡಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಮಹಾಪೂಜೆ, ಅ.7 ರಂದು ಸೋಮವಾರ ರಾತ್ರಿ ಐಕ್ಯ ಕಲಾ-ಸೇವಾ ಟ್ರಸ್ಟ್ ಪುತ್ತೂರು ಅರ್ಪಿಸುವ ನವಸಂಭ್ರಮ 2024 ಇದರ ಪ್ರಯುಕ್ತ ತುಳುರಂಗಭೂಮಿಯಲ್ಲಿ ಸಂಚಲನ ಮೂಡಿಸಿದ ವಿಜಯಕುಮಾರ್ ಕೊಡಿಯಾಲ್‌ಬೈಲ್ ರಚಿಸಿ ನಿರ್ದೇಶಿಸಿದ ಕಲಾಸಂಗಮದ ಬತ್ತಳಿಕೆಯ ಮತ್ತೊಂದು ಬ್ರಹ್ಮಾಸ್ತ್ರ ‘ಮೈತಿದಿ’ ನಾಟಕವು ಪ್ರದರ್ಶನಗೊಳ್ಳಲಿರುವುದು.


ಅ.8ರಂದು ಮಂಗಳವಾರ ರಾತ್ರಿ ಶ್ರೀದೇವಿ ಮಹಿಳಾ ಯಕ್ಷ ತಂಡ, ಬಾಲವನ ಪುತ್ತೂರು ಇವರಿಂದ ಯಕ್ಷಗಾನ ‘ಮಾತೃದರ್ಶನ’, ಬಳಿಕ ಮಹಾಪೂಜೆ, ಅ.9 ರಂದು ಬುಧವಾರ ಸಂಜೆ ಬನ್ನೂರು ಬಲಮುರಿ ಶ್ರೀ ದುರ್ಗಾ ಗಣಪತಿ ಗಾನ ಕಲಾವೃಂದದ ಕಲಾವಿದರಿಂದ ಭಜನ್ ಸಂಧ್ಯಾ ಬಳಿಕ ಮಹಾಪೂಜೆ, ಅ.10 ರಂದು ಗುರುವಾರ ರಾತ್ರಿ ಮೊಟ್ಟೆತ್ತಡ್ಕ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಮಹಾಪೂಜೆ, ಅ.11ರಂದು ಶುಕ್ರವಾರ ಇಂಚರ ಮ್ಯೂಸಿಕಲ್ ಪುತ್ತೂರು ಇವರಿಂದ ‘ಸಂಗೀತ ರಸಸಂಜೆ’ ಬಳಿಕ ಮಹಾಪೂಜೆ ಜರಗಲಿದೆ.


ಅ.12 ರಂದು ಶನಿವಾರ ಬೆಳಿಗ್ಗೆ ಅಕ್ಷರಾಭ್ಯಾಸ, ವಿಜಯದಶಮಿ ಪೂಜೆ, ಪ್ರಸಾದ ವಿತರಣೆ ಮತ್ತು ನವಾನ್ನ ಭೋಜನ ಜರಗಲಿದೆ. ಪ್ರಧಾನ ಅರ್ಚಕರಾಗಿ ಉದಯನಾರಾಯಣ ಕಲ್ಲೂರಾಯ ಸಂಪ್ಯ, ಸಹಾಯಕ ಅರ್ಚಕರಾಗಿ ರಮೇಶ್ ಅಯ್ಯರ್ ಮುಕ್ರಂಪಾಡಿರವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಿರುವರು. ಪ್ರತಿದಿನ ರಾತ್ರಿ ಪೂಜೆಯ ಬಳಿಕ ಸಾರ್ವಜನಿಕ ಅನ್ನದಾನ ನಡೆಯಲಿರುವುದು. ಭಕ್ತಾಭಿಮಾನಿಗಳು ಈ ಹತ್ತು ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಅಧ್ಯಕ್ಷ ರಾಮ ಶೆಟ್ಟಿ, ಕಾರ್ಯದರ್ಶಿ ಕೆ.ಬಿ ಶೇಖರ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಶೆಟ್ಟಿ, ಸಂತೋಷ್ ರೈ, ಸುಂದರ ಕೆ, ಕೋಶಾಧಿಕಾರಿ ಮೋಹನ್ ಕುಮಾರ್ ಡಿ, ಲೆಕ್ಕಪರಿಶೋಧಕ ಬಿ.ವಿಶ್ವನಾಥ ರೈ ಮಿಶನ್‌ಮೂಲೆ, ಉಪಾಧ್ಯಕ್ಷರುಗಳಾದ ಸಂತೋಷ್ ಕುಮಾರ್ ಕೆ, ಸತೀಶ್ ಎಂ. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷೇತ್ರ ಶೃಂಗಾರಮಯ..
ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರವು ಕೇಸರಿ ಬಣ್ಣದ ಬಂಟಿಂಗ್ಸ್ ಹಾಗೂ ಲೈಟಿಂಗ್ಸ್‌ನೊಂದಿಗೆ ಶೃಂಗಾರಗೊಂಡಿದೆ. ಶ್ರೀ ಕ್ಷೇತ್ರದ ಯುವಸಮೂಹವು ಜೊತೆಗೂಡಿ ಶ್ರೀ ಕ್ಷೇತ್ರ ಅಲ್ಲದೆ ಮೊಟ್ಟೆತ್ತಡ್ಕ ಜಂಕ್ಷನ್‌ನಿಂದ ಮುಕ್ರಂಪಾಡಿ-ಮೊಟ್ಟೆತ್ತಡ್ಕ ತಿರುವಿನಲ್ಲಿನ ಸುಮಾರು ಒಂದು ಕಿ.ಮೀ ರಸ್ತೆಯ ಇಕ್ಕೆಲಗಳುದ್ದಕ್ಕೂ ಕೇಸರಿ ಬಣ್ಣದ ಬಂಟಿಂಗ್ಸ್‌ಗಳನ್ನು ಅಳವಡಿಸಿ ಕೇಸರಿಮಯದೊಂದಿಗೆ ಶೃಂಗಾರಗೊಂಡಿದೆ.

LEAVE A REPLY

Please enter your comment!
Please enter your name here