ಪುತ್ತೂರು: ಪುತ್ತೂರಿನಿಂದ ಪುರುಷರಕಟ್ಟೆ ಮಾರ್ಗವಾಗಿ ಆನಡ್ಕಕ್ಕೆ ಬರುವ ಕೆಎಸ್ಆರ್ಟಿಸಿ ಬಸ್ ಕಣ್ಣಾಮುಚ್ಚಾಲೆ ಆಟ ಆಡುತ್ತಿರುವ ಪರಿಣಾಮ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿರುವ ಘಟನೆ ವರದಿಯಾಗಿದೆ.
ಪುತ್ತೂರಿನಿಂದ ಬೆಳಿಗ್ಗೆ ಹೊರಡುವ ಬಸ್ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಆನಡ್ಕದಿಂದ ವಾಪಸ್ ಪುತ್ತೂರಿಗೆ ಹೋಗುತ್ತಿದ್ದು ಆನಡ್ಕ ಭಾಗದ ಸಾಕಷ್ಟು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಇದೇ ಬಸ್ನ್ನು ಅವಲಂಬಿಸಿದ್ದರು. ಆದರೆ ಕೆಲವು ಸಮಯಗಳಿಂದ ಈ ಭಾಗಕ್ಕೆ ಬರುವ ಬಸ್ ವಾರದಲ್ಲಿ ಎರಡು-ಮೂರು ಬಾರಿ ಕೈ ಕೋಡುತ್ತಿದ್ದು ಮುಖ್ಯವಾಗಿ ವಿದ್ಯಾರ್ಥಿಗಳು ಪರದಾಟ ನಡೆಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
ಬಸ್ಗಾಗಿ ಕಾದು ಕುಳಿತು ಕೊನೆಗೆ ಬಸ್ ಬಾರದಿದ್ದಾಗ ವಿದ್ಯಾರ್ಥಿಗಳು ರಿಕ್ಷಾದ ಮೂಲಕ ಪುತ್ತೂರಿಗೆ ಪ್ರಯಾಣಿಸಬೇಕಾಗಿದ್ದು, ರಿಕ್ಷಾ ಕೂಡಾ ಸರಿಯಾಗಿ ಸಿಗದೇ ಹಲವು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಂಬಂಧಪಟ್ಟವರು ಇನ್ನಾದರೂ ಈ ಬಗ್ಗೆ ತುರ್ತು ಗಮನ ಹರಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕಿದೆ ಎನ್ನುವ ಆಗ್ರಹ ಸ್ಥಳೀಯವಾಗಿ ವ್ಯಕ್ತವಾಗಿದ್ದು, ನಮ್ಮ ಸಮಸ್ಯೆ ಬಗೆಹರಿಸಿ ಎಂದು ವಿದ್ಯರ್ಥಿಗಳು ಮನವಿ ಮಾಡಿಕೊಂಡಿದ್ದಾರೆ. ಬಸ್ ವಾರದ ಕೆಲವು ದಿನ ಮಾತ್ರ ಬರುತ್ತಿದ್ದು ಕೆಲವು ದಿನ ಬಾರದೇ ಇರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದ್ದು ಈ ಬಗ್ಗೆ ನಾವು ಮನವಿ ನೀಡಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ, ಇನ್ನಾದರೂ ಇದರ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಸರಿಯಾದ ಬಸ್ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯ ಸಾಮಾಜಿಕ ಮುಂದಾಳು ಯಜ್ಞೇಶ್ ಮರಕ್ಕೂರು ಆಗ್ರಹಿಸಿದ್ದಾರೆ.