ಕಲಿ ಯೋಗೀಶನ ಸಹಚರ ಅಬ್ದುಲ್ ಅಸೀರ್ ಸೆರೆ

0

ರಾಜಧಾನಿ ಜ್ಯುವೆಲ್ಲರ‍್ಸ್ ಶೂಟೌಟ್ ಪ್ರಕರಣದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ

ಮಂಗಳೂರು: ಪುತ್ತೂರಿನ ರಾಜಧಾನಿ ಜ್ಯುವೆಲ್ಲರಿಯಲ್ಲಿ ನಡೆದಿದ್ದ ಶೂಟೌಟ್ ಸಹಿತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ,ಭೂಗತ ಪಾತಕಿ ಕಲಿ ಯೋಗೀಶನ ಸಹಚರನೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಹಿತ ಬಂಧಿಸಿದ್ದಾರೆ.ಕಾಸರಗೋಡು ಮೂಲದ ಮೊಗ್ರಾಲ್ ನಿವಾಸಿ ಅಬ್ದುಲ್ ಅಸೀರ್ (32ವ)ಬಂಧಿತ ಆರೋಪಿ.ಈತನಿಗೆ ಸದ್ದು, ಸಾದು, ಮಾಯ ಎಂಬ ಅಡ್ಡ ಹೆಸರೂಗಳೂ ಇವೆ.


ಆರೋಪಿಯು ಕಾಸರಗೋಡಿನಿಂದ ಮಂಗಳೂರು ನಗರಕ್ಕೆ ಬಂದು ನಂತೂರು ಪರಿಸರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾನೆಂಬ ಖಚಿತ ಮಾಹಿತಿಯಂತೆ ದಾಳಿ ನಡೆಸಿ ಆತನನ್ನು ಬಂಧಿಸಿ 5 ಲಕ್ಷ ರೂ.ಮೌಲ್ಯದ 53 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿರುವುದಾಗಿ ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.


ರಾಜಧಾನಿ ಜ್ಯುವೆಲ್ಲರ‍್ಸ್ ಶೂಟೌಟ್ ಪ್ರಕರಣದ ಆರೋಪಿ:
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರನಾಗಿರುವ ಆರೋಪಿ ಅಬ್ದುಲ್ ಅಸೀರ್, 2015ರಲ್ಲಿ ಪುತ್ತೂರು ನಗರದಲ್ಲಿ ರಾಜಧಾನಿ ಜ್ಯುವೆಲ್ಲರ್ಸ್‌ಗೆ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಈತ ಬಳಿಕ ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ.ಈತನ ವಿರುದ್ಧ ಈ ಹಿಂದೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಶಾಫೀಕ್ ಕೊಲೆ ಪ್ರಕರಣ, ಪೋಕ್ಸೋ ಪ್ರಕರಣ, ಕಳ್ಳತನ ಪ್ರಕರಣ ಹಾಗೂ ಕಾಸರಗೋಡು ನಗರ ಪೊಲೀಸ್ ಠಾಣೆಯಲ್ಲಿ ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣ ದಾಖಲಾಗಿದ್ದು, ವಾರಂಟ್ ಜಾರಿಯಲ್ಲಿತ್ತು.


ಪುತ್ತೂರು ಮುಖ್ಯರಸ್ತೆ ಸಿಪಿಸಿ ಪ್ಲಾಜಾದಲ್ಲಿದ್ದ ರಾಜಧಾನಿ ಜ್ಯುವೆಲ್ಲರ‍್ಸ್ ಮೇಲೆ 2015ರ ಅಕ್ಟೋಬರ್ 6ರಂದು ರಾತ್ರಿ ಗುಂಡಿನ ದಾಳಿ ನಡೆದಿತ್ತು.ಆದಿನ ರಾತ್ರಿ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಎರಡು ಸಲ ಬೈಕ್‌ನಲ್ಲಿ ಬಂದ, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಅಪರಿಚಿತ ಯುವಕರು ಕೆಲವೇ ಕ್ಷಣಗಳ ಅಂತರದಲ್ಲಿ ರಾಜಧಾನಿ ಜುವೆಲ್ಲರ‍್ಸ್‌ಗೆ ಮೂರು ಬಾರಿ ಫೈರಿಂಗ್ ನಡೆಸಿ ಪರಾರಿಯಾಗಿದ್ದರು.ಶೂಟೌಟ್ ನಡೆಸಿದವರಿಗಾಗಿ ಪೊಲೀಸರು ವಿವಿಧೆಡೆ ಶೋಧ ಮುಂದುವರಿಸುತ್ತಿದ್ದಂತೆಯೇ ಘಟನೆ ನಡೆದ ಮರುದಿವಸ ಬೆಳಿಗ್ಗೆ ಪತ್ರಕರ್ತರಿಗೆ ಕರೆ ಮಾಡಿದ್ದ ಕಲಿ ಯೋಗೀಶ, ‘ಇದು ನನ್ನ ಹುಡುಗರ ಕೆಲಸವಾಗಿದೆ,ಉಪ್ಪಳದಲ್ಲಿರುವ ವಿವಾದವೊಂದನ್ನು ಪರಿಹರಿಸಿದ್ದಕ್ಕಾಗಿ ಹಣ ಕೇಳಿದಾಗ ಕೊಡುವುದಾಗಿ ಒಪ್ಪಿಕೊಂಡಿದ್ದ ಜ್ಯುವೆಲ್ಲರ‍್ಸ್ ಮಾಲಕ ಬಳಿಕ ಹಣವನ್ನೂ ಕೊಟ್ಟಿಲ್ಲ, ದೂರವಾಣಿ ಕರೆಯನ್ನೂ ಸ್ವೀಕರಿಸುತ್ತಿಲ್ಲ.ಆದ್ದರಿಂದ ನನ್ನ ಹುಡುಗರ ಮೂಲಕ ಶೂಟೌಟ್ ಮಾಡಲಾಗಿದೆ’ ಎಂದು ಹೇಳಿಕೆ ನೀಡಿದ್ದ. ಜ್ಯುವೆಲ್ಲರ‍್ಸ್ ಪಾಲುದಾರ, ಮೂಲತಃ ಮಹಾರಾಷ್ಟ್ರದವರಾಗಿದ್ದು ವಿಟ್ಲ ನಿವಾಸಿಯಾಗಿದ್ದ ತಾನಾಜಿ ಶೇಟ್ ನೀಡಿದ್ದ ದೂರಿನ ಮೇರೆಗೆ, ‘ಅಪರಿಚಿತ ಯುವಕರಿಂದ ಗುಂಡಿನ ದಾಳಿ’ ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ನಗರ ಠಾಣಾ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿ ಹಲವು ಆರೋಪಿಗಳನ್ನು ಬಂಧಿಸಿದ್ದರು.


ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತ(ಕಾನೂನು ಸುವ್ಯವಸ್ಥೆ ವಿಭಾಗ)ಸಿದ್ದಾರ್ಥ ಗೋಯಲ್, ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ ವಿಭಾಗ)ಕೆ.ರವಿಶಂಕರ್ ಅವರ ನಿರ್ದೇಶನದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಸಿಸಿಬಿ ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ.ಎಂ.,ಪಿಎಸ್‌ಐ ಶರಣಪ್ಪ ಭಂಡಾರಿ, ಸುದೀಪ್ ಎಂ.ವಿ., ನರೇಂದ್ರ ಹಾಗೂ ಎಎಸ್‌ಐ ಮೋಹನ್ ಕೆ.ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಬ್ಬಂದಿಗಳು ಅಬ್ದುಲ್ ಅಸೀರ್ ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here