ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿ ಶ್ರೀ ದೇವತಾ ಸಮಿತಿ ದೇವಗಿರಿಯ ಶ್ರೀ ದೇವತಾ ಭಜನಾ ಮಂದಿರದ 30 ನೇ ವರ್ಷದ ವಾರ್ಷಿಕ ಮಂಗಲೋತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟವು ಮಾ.17 ರಂದು ದೇವಗಿರಿಯಲ್ಲಿ ನಡೆಯಿತು.

ಬೆಳಿಗ್ಗೆ ಕಟೀಲು ಮೇಳದ ದೇವರು ಮತ್ತು ಕಲಾವಿದರನ್ನು ಬರಮಾಡಿಕೊಳ್ಳುವ ಕಾರ್ಯಕ್ರಮ ನಡೆದು ಕಟೀಲು ಶ್ರೀ ದೇವಿಗೆ ಬೆಳಗ್ಗಿನ ಪೂಜೆ ನಡೆದು ಸ್ಥಳ ಸಾನಿಧ್ಯ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಶ್ರೀ ದೇವತಾ ಮಂದಿರದ ವಾರ್ಷಿಕ ಮಂಗಲೊತ್ಸವದ ಪ್ರಯುಕ್ತ ಅರ್ಚಕ ಕೃಷ್ಣಕುಮಾರ ಉಪಾಧ್ಯಾಯರವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊಂಡು ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು.ಈ ನಡುವೆ ಆಲಡ್ಕ ಶ್ರೀ ಸದಾಶಿವ ಭಜನಾ ಮಂಡಳಿಯವರಿಂದ ಭಜನಾ ಸೇವೆ ನಡೆಯಿತು. ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸಂಜೆ ಕಟೀಲು ಶ್ರೀ ದೇವಿಗೆ ಚೌಕಿ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಮಂಗಳೋತ್ಸವದ ವಿಶೇಷವಾಗಿ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾತವಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಟೀಲು ಇವರಿಂದ ‘ಶ್ರೀ ಶಿವಪಂಚಾಕ್ಷರಿ ಮಹಿಮೆ’ ಎಂಬ ಯಕ್ಷಗಾನ ಬಯಲಾಟ ನಡೆಯಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಊರಪರವೂರ ನೂರಾರು ಭಕ್ತಾಧಿಗಳು ಆಗಮಿಸಿ ಅನ್ನಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶ್ರೀ ದೇವತಾ ಸಮಿತಿ ಹಾಗೂ ಶ್ರೀ ದೇವತಾ ಭಜನಾ ಮಂಡಳಿಯ ಅಧ್ಯಕ್ಷರು, ಸದಸ್ಯರು ಹಾಗೇ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸೇವಾ ಸಮಿತಿಯ ಸಂಚಾಲಕರು, ಸೇವಾರ್ಥಿಗಳು ಉಪಸ್ಥಿತರಿದ್ದರು.