ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ-ಇಕ್ಬಾಲ್ ಹುಸೇನ್
ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಹೊಸದಾಗಿ ಎಂಟನೇ ತರಗತಿಗೆ ದಾಖಲಾದ ಹಾಗೂ ಒಂಬತ್ತನೇ ತರಗತಿಗೆ ಹೊಸದಾಗಿ ದಾಖಲಾದ ಮಕ್ಕಳನ್ನು ಬ್ಯಾಂಡ್ನೊಂದಿಗೆ ಮೆರವಣಿಗೆ ಮೂಲಕ ಶಾಲೆಗೆ ಬರಮಾಡಿಕೊಂಡು ಹೂವಿನ ಸಿಂಚನಗೈದು ಸಿಹಿ ಹಂಚಿ ಸ್ವಾಗತಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿನಿಯರಿಂದ ಏರೋಬಿಕ್ಸ್ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಕಾರ್ಯಾಧ್ಯಕ್ಷರಾದ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನ ಪ್ರಯೋಗಾಲಯ, ಬಯಲು ರಂಗ ಮಂದಿರ ನಿರ್ಮಾಣ ಹಾಗೂ ಶಾಲಾ ವಾಹನದ ವ್ಯವಸ್ಥೆ ಮಾಡುವುದರ ಬಗ್ಗೆ ಪ್ರಸ್ತಾಪಿಸುತ್ತಾ ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದ್ದು ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಆಸಕ್ತಿ ತೋರಿಸಬೇಕೆಂದು ಹೇಳಿ ಹೊಸ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು. ಪುತ್ತೂರಿನ ಮಿತ್ರವೃಂದ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ನಡೆದ ವಾಲಿಬಾಲ್ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ವಿನುತ, ವರ್ಷ, ಆಶಿಕ, ಲೀಲಾಕ್ಷಿ ಇವರಿಗೆ ಪ್ರಮಾಣ ಪತ್ರ ನೀಡಲಾಯಿತು. ಸರಕಾರದಿಂದ ಒದಗಿಸಲಾದ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪೋಷಕರ ಪರವಾಗಿ ಚಂದ್ರ ಮಾತನಾಡಿದರು. ದಾನಿಗಳಾದ ರಮೇಶ್ ಪರ್ಪುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್ಡಿಎಂಸಿ ಸದಸ್ಯರಾದ ಹೊನ್ನಪ್ಪ ನಾಯ್ಕ, ರೇವತಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳ ಪ್ರಮಾಣ ಪತ್ರದ ಪಟ್ಟಿಯನ್ನು ದೈ.ಶಿ.ಶಿಕ್ಷಕಿ ಪ್ರವೀಣಾ ರೈ ಬಿ ವಾಚಿಸಿದರು. ಶಾಲಾ ಮುಖ್ಯಗುರು ಮೋನಪ್ಪ ಬಿ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಶಿಕ್ಷಕಿ ಪೂರ್ಣಿಮಾ ಶೆಟ್ಟಿ ವಂದಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಸವಿತಾ ಪಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಪ್ರೀತ ಟಿ ಎಂ ಹರಿಪ್ರಸಾದ್ ಕೆ, ಶಾಲೆಟ್ ಜೇನ್ ರೆಬೆಲ್ಲೊ, ಹರಿಣಾಕ್ಷಿ ಕೆ ಸಹಕರಿಸಿದರು.