ಉಪ್ಪಿನಂಗಡಿ: ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಶಾಲಾ ಸಂಸತ್ತಿನ ಪದಾಧಿಕಾರಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. ವಿದ್ಯಾರ್ಥಿಗಳಲ್ಲಿ ಮತದಾನದ ಅರಿವು ಮೂಡಿಸಲು ಶಾಲಾ ಕಾರ್ಯಚಟುವಟಿಕೆಯನ್ನು ಸುಗಮವಾಗಿ ನಿರ್ವಹಿಸಲು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸಲು ಹಾಗೂ ಸೋಲು- ಗೆಲುವನ್ನು ಸಮಾನಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸುವ ಸಲುವಾಗಿ ಶಾಲಾ ಸಂಸತ್ತಿನ ಚುನಾವಣೆಯನ್ನು ನಡೆಸಲಾಯಿತು.

ಚುನಾವಣೆಯ ಮುಂಚಿತವಾಗಿ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಯಿತು. ಸೂಕ್ತ ಅಭ್ಯರ್ಥಿಗಳು ನಾಮಪತ್ರವನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದರು. ನಂತರ ಅಭ್ಯರ್ಥಿಗಳು ಕೆಲವು ಆಶ್ವಾಸನೆಗಳನ್ನು ನೀಡಿ ಮತ ಯಾಚಿಸಿದರು. ಮತದಾನದ ದಿನ ಮೊಬೈಲ್ ತಂತ್ರಜ್ಞಾನದ ಮೂಲಕ ಮತದಾನ ಮಾಡಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಅಂತಿಮವಾಗಿ ಶಾಲೆಯ ಮುಖ್ಯ ಶಿಕ್ಷಕಿ ವೀಣಾ ಆರ್. ಪ್ರಸಾದ್ ಚುನಾವಣಾ ಫಲಿತಾಂಶವನ್ನು ಘೋಷಿಸಿ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು.

ಶಾಲಾ ಸಂಸತ್ತಿನ ಪ್ರಧಾನ ಮುಖ್ಯಮಂತ್ರಿಯಾಗಿ ಸಿಂಚನ ಭಟ್ (೧೦ನೇ ತರಗತಿ), ಗೃಹ ಮಂತ್ರಿಯಾಗಿ ಅನ್ಮಯ್ಶೆಟ್ಟಿ (೧೦ನೇ ತರಗತಿ), ಸಂವಹನ ಮಂತ್ರಿಯಾಗಿ ಸ್ಪನಿಕ(೧೦ನೇ ತರಗತಿ), ಶಿಕ್ಷಣ ಮಂತ್ರಿಯಾಗಿ ಯಶ್ವಿನ್ಕುಮಾರ್ (೯ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ಶಮಿಕ ಎಂ. (೯ನೇ ತರಗತಿ), ಕ್ರೀಡಾ ಮಂತ್ರಿಯಾಗಿ ಚಿಂತನ್ ಕೆ.ಸಿ. (೧೦ನೇ ತರಗತಿ), ನೀರಾವರಿ ಮತ್ತು ವಿದ್ಯುತ್ ಮಂತ್ರಿಯಾಗಿ ನಿಶಾಂತ್ (೯ನೇ ತರಗತಿ), ಆರೋಗ್ಯ ಮತ್ತು ಸ್ವಚ್ಚತಾ ಮಂತ್ರಿಯಾಗಿ ಧನ್ವಿ ಶೆಟ್ಟಿ(೯ನೇತರಗತಿ) ಇವರು ಚುನಾಯಿತರಾದರು.
ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ಶಶಿಕಲಾ ಚುನಾವಣಾ ಆಯುಕ್ತರಾಗಿ ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಮತಗಟ್ಟೆಯ ಅಧಿಕಾರಿಗಳಾಗಿ ಶಿಕ್ಷಕ – ಶಿಕ್ಷಕೇತರ ವೃಂದದವರು ಸಹಕರಿಸಿದರು. ಚುನಾಯಿತರಾದ ಎಲ್ಲಾ ವಿದ್ಯಾರ್ಥಿ ನಾಯಕರನ್ನು ಸಂಸ್ಥೆಯ ಸಂಚಾಲಕರು, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿದರು.