ಲೋಕಾಯುಕ್ತದಿಂದ ಬಂಧಿತರಾಗಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿಯವರಿಂದ ಸರಕಾರಿ ಕಚೇರಿ ದುರುಪಯೋಗ- ಅಮಾನತುಗೊಳಿಸಲು ನವೀನ್ ರೈ ಕೈಕಾರ ಮನವಿ

0

ಪುತ್ತೂರು: ಸರಕಾರಿ ಕಚೇರಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿಯವರನ್ನು ಅಮಾನತು ಮಾಡಬೇಕು ಎಂದು ಪುತ್ತೂರಿನ ನವೀನ್ ರೈ ಕೈಕಾರ ಅವರು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ.


ಕೃಷ್ಣವೇಣಿ ಅವರು ಸರಕಾರದ ಆದೇಶ ಇಲ್ಲದಿದ್ದರೂ ಅಕ್ರಮ ಪ್ರವೇಶ ಮಾಡಿ ಸರಕಾರಿ ಕಛೇರಿಯನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಉಳ್ಳಾಲ ವ್ಯಾಪ್ತಿಯಲ್ಲಿ ಸಾರ್ವಜನಿಕ ವಲಯದಿಂದ ಆರೋಪ ಕೇಳಿ ಬಂದಿದೆ.


ಉಳ್ಳಾಲ ಗ್ರಾಮದ ಸರ್ವೆ ನಂಬರ್ 279/5ರಲ್ಲಿ 1.39 ಎಕರೆಯಲ್ಲಿ ನಿರ್ಮಿಸಿದ ಜಮೀನಿನ ಪೈಕಿ 0.35 ಎಕರೆ ಪ್ರದೇಶದಲ್ಲಿ ಮನೆ ಕಟ್ಟುವ ಉದ್ದೇಶದಿಂದ ಕಟ್ಟಡ ಕಟ್ಟಲು ಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ನೀಡುವಂತೆ ವ್ಯಕ್ತಿಯೋರ್ವರು ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾಗ ಉಪನಿರ್ದೇಶಕಿ ಕೃಷ್ಣವೇಣಿಯವರು ಸಿಬ್ಬಂದಿ ಪ್ರದೀಪ ಎಂಬವರನ್ನು ಕಳುಹಿಸಿ ಫೈಲ್‌ ಗೆ 50000 ಮೊತ್ತ ತೆಗೆದುಕೊಳ್ಳಲು ಸೂಚನೆ ನೀಡಿದ್ದರು. ಈ ಬಗ್ಗೆ ಮಂಗಳೂರಿನ ಲೋಕಾಯುಕ್ತ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೃಷ್ಣವೇಣಿ, ಪ್ರದೀಪ್‌ ಮತ್ತು ಕೃಷ್ಣವೇಣಿಯವರ ವಾಹನ ಚಾಲಕ ಮಧು ಅವರನ್ನು ಬಂಧಿಸಲಾಗಿತ್ತು. ಆರೋಪಿಗಳ ಪೈಕಿ ಪ್ರದೀಪ್‌ ಮತ್ತು ಮಧು ಅವರನ್ನು ಸರಕಾರದ ಆದೇಶ ಪ್ರಕಾರ ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಆದರೆ ಕೃಷ್ಣವೇಣಿಯವರು ಪ್ರಕರಣ ಇರುವಾಗಲೇ 19-06-2025ರಂದು ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಛೇರಿಯಲ್ಲಿ ಸರಕಾರದ ಆದೇಶ ಇಲ್ಲದೆ ಅಕ್ರಮ ಪ್ರವೇಶ ಮಾಡಿ ಸರಕಾರಿ ಕಛೇರಿಯನ್ನು ದುರಪಯೋಗ ಪಡಿಸಿದ್ದಾರೆ. ಇವರ ಇಂತಹ ವರ್ತನೆಯಿಂದ ಇವರ ಮೇಲಿರುವ ಪ್ರಕರಣದ ಸಾಕ್ಷಿ ನಾಶ ಮಾಡುವ ಉದ್ದೇಶವಿರುವುದು ಸಾರ್ವಜನಿಕರಿಗೆ ನೇರವಾಗಿ ಕಾಣುತ್ತಿದೆ. ಆದುದರಿಂದ ಸರಕಾರ ತಕ್ಷಣ ಕೃಷ್ಣವೇಣಿ ಅವರನ್ನು ಅಮಾನತುಗೊಳಿಸಿ ಸರಕಾರಿ ಕಛೇರಿಗೆ ಮತ್ತು ಸಾರ್ವಜನಿಕರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ನವೀನ್‌ ರೈ ಮನವಿಯಲ್ಲಿ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here