ಪುತ್ತೂರು: ಭಾರೀ ಮಳೆಯಿಂದ ರೈಲ್ವೇ ಹಳಿ ಮೇಲೆ ಗುಡ್ಡ ಕುಸಿದ ಘಟನೆ ಸಕಲೇಶಪುರ ತಾಲೂಕಿನ ಯಡೆಕುಮಾರಿ ಬಳಿ ನಡೆದಿದೆ.
ಕಿಲೋಮೀಟರ್ ಸಂಖ್ಯೆ 74 & 75ರ ನಡುವಿನ ಅರೆಬೆಟ್ಟ ಮತ್ತು ಯಡೆಕುಮಾರಿ ಮಧ್ಯೆ ಭಾಗದಲ್ಲಿ ರೈಲ್ವೆ ಹಳಿ ಮೇಲೆ ಭೂಕುಸಿತವಾಗಿದೆ. ಭಾರೀ ಗಾತ್ರದ ಬಂಡೆ ಉರುಳಿ ಬಿದ್ದಿದ್ದು, ಹಳಿಗೆ ಹಾನಿಯಾಗಿದೆ. ಇದರಿಂದಾಗಿ ಬೆಂಗಳೂರು-ಕಣ್ಣೂರು ಘಾಟ್, ಬೆಂಗಳೂರು-ಮುರುಡೇಶ್ವರ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ರೈಲ್ವೇ ಹಳಿ ಮೇಲೆ ಬಿದ್ದಿದ್ದ 3 ಬಂಡೆಗಳನ್ನು ರೈಲ್ವೆ ಇಲಾಖೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದು, ರೈಲು ಸಂಚಾರ ಪುನರಾರಂಭವಾಗಿದೆ.
ಮೊದಲು ಗುಡ್ಡ ಕುಸಿತದಿಂದ ಘಟನೆ ನಡೆದಿದೆ ಎಂದು ಭಾವಿಸಲಾಗಿತ್ತು. ಆದರೆ ರೈಲ್ವೆ ವ್ಯಾಗನ್ ನಲ್ಲಿ ಸಾಗಿಸುತ್ತಿದ್ದ ಬಂಡೆಗಳು ಉರುಳಿದ್ದರಿಂದ ಸಮಸ್ಯೆ ಆಗಿತ್ತು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಇಂದು (ಜೂ.21ರ, ಶನಿವಾರ) ಬೆಳಿಗ್ಗೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ರೈಲ್ವೆ ಕಾರ್ಯಾಚರಣೆಗೆ ಬಳಸಲು ವ್ಯಾಗನ್ನಲ್ಲಿ ಬಂಡೆಗಳನ್ನು ಹೊತ್ತೊಯ್ಯುತ್ತಿದ್ದಾಗ, ಕೆಲ ಬಂಡೆಗಳು ಆಯತಪ್ಪಿ ರೈಲ್ವೇ ಹಳಿಯ ಮೇಲೆ ಬಿದ್ದಿದ್ದವು. ಇದರಿಂದ ಸಕಲೇಶಪುರದಲ್ಲಿ ಬೆಂಗಳೂರು-ಮುರುಡೇಶ್ವರ ಎಕ್ಸ್ಪ್ರೆಸ್ ಹಾಗೂ ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲುಗಳು ಮತ್ತು ಎಡಕುಮೇರಿನಲ್ಲಿ ವಿಜಯಪುರ-ಮಂಗಳೂರು ಸೆಂಟ್ರಲ್ ರೈಲು ನಿಂತಿದ್ದವು.
ರೈಲ್ವೆ ಸಿಬ್ಬಂದಿ ಸುಮಾರು 5 ಗಂಟೆಗಳ ಕಾಲ ಶ್ರಮಿಸಿ ಬಂಡೆಗಳನ್ನು ತೆರವುಗೊಳಿಸಿದ್ದಾರೆ ಎಂದು ವರದಿಯಾಗಿದೆ.