ಆತ್ಮ ಶುದ್ಧಿಗೆ ಯೋಗ ಪೂರಕ- ವಿದ್ವಾನ್ ಕೇಶವ ಭಟ್ ಕೇಕಣಾಜೆ
ಪುತ್ತೂರು: ಯೋಗ ನಿರಂತರವಾದುದು. ಬದುಕಿನಲ್ಲಿ ಎದುರಾಗುವ ಸಮಸ್ಯೆ ಹಾಗೂ ಭಯವನ್ನು ಹೋಗಲಾಡಿಸಿ ಸದೃಢ ಬದುಕನ್ನು ನಿರ್ವಹಿಸಲು ಯೋಗ ಅತ್ಯಂತ ಪೂರಕವಾದುದು. ಶರೀರದ ಸಮರ್ಪಕವಾದ ಪರಿಚಲನೆಗೆ ಮಾತ್ರವಲ್ಲದೆ ಒಳ್ಳೆಯ ಬದುಕನ್ನು ನಡೆಸಲು ಯೋಗ ಅತ್ಯವಶ್ಯಕ. ಅಲ್ಲದೇ ಹೃದಯ ದೌರ್ಬಲ್ಯ ವನ್ನು ನಿವಾರಿಸುವ ಮೂಲಕ ವ್ಯಕ್ತಿಯ ಆತ್ಮಶುದ್ಧಿಯನ್ನೂ ಮಾಡುವ ತಾಕತ್ತು ಯೋಗ ಶಾಸ್ತ್ರಕ್ಕೆ ಇದೆ. ಹಾಗಾಗಿ ಪ್ರತಿಯೊಬ್ಬರೂ ಯೋಗವನ್ನು ನಿರಂತರವಾಗಿ ಮಾಡಿ ಜೀವನ ಶೈಲಿಯನ್ನು ಉತ್ತಮಗೊಳಿಸಬೇಕು ಎಂದು ವಿದ್ವಾನ್ ಕೇಕಣಾಜೆ ಕೇಶವ ಭಟ್ ತಿಳಿಸಿದರು.

ಇವರು ಇಲ್ಲಿನ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ( ಸ್ವಾಯತ್ತ) ಕಾಲೇಜಿನ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ,ಯೋಗ ಎನ್ನುವುದು ಬದುಕಿನಲ್ಲಿ ಉಂಟಾಗುವ ಋಣಾತ್ಮಕ ವಿಚಾರಗಳಿಂದ ಮುಕ್ತರನ್ನಾಗಿಸಿ ಧನಾತ್ಮಕತೆಯನ್ನು ಸೃಷ್ಟಿಸಲು ಸಹಾಯಮಾಡುತ್ತದೆ ಎಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಯ ಶುಭ ಸಂದೇಶವನ್ನು ನೀಡಿದರು

ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಧರ ನಾಯಕ್ ಸ್ವಾಗತಿಸಿ, ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಡಾ.ರವಿಕಲಾ ವಂದಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿದ್ಯಾ.ಎಸ್ ನಿರೂಪಿಸಿದರು.