ಪುತ್ತೂರು: ಕೆಮ್ಮಾಯಿ ಭರತಪುರದ ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದ ವತಿಯಿಂದ ಊರ, ಪರವೂರ ಸಹೃದಯ ದಾನಿಗಳ ಸಹಕಾರದಿಂದ ಕಿಡ್ನಿ, ಡಯಾಲಿಸಿಸ್ ರೋಗಿಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಯ 38ನೇ ಯೋಜನೆಯ ಕಾರ್ಯಕ್ರಮ ಸೇವಾಶ್ರಮದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಕಾವೇರಿ ಸುಂದರ ನಾಯ್ಕ ಬಪ್ಪಳಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶುಭಹಾರೈಸಿದರು. ಮುಖ್ಯ ಅತಿಥಿ ಪಾಣಾಜೆ ರಣಮಂಗಲ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಮಾತನಾಡಿ ಈ ಸಂಸ್ಥೆಯ ಬಗ್ಗೆ ಕಳೆದ 3 ವರ್ಷದಿಂದ ತಿಳಿದಿದ್ದೇನೆ. ಪ್ರತೀ ವರ್ಷ ನನ್ನ ಮನೆಗೆ ಬಂದು ನನ್ನ ಸಹಾಯವನ್ನು ಸ್ವೀಕರಿಸುತ್ತಿದ್ದಾರೆ. ದಾನಿಗಳ ಸಹಕಾರದಿಂದ ಸಹಾಯ ಮಾಡುತ್ತಿದ್ದಾರೆ ಎಂದ ಅವರು ರೋಗಿಗಳಿಗೆ ನೀಡುವ ಸಹಾಯದ ಉಪಯೋಗ ಸಿಗಲಿ. ಕರ್ನಾಟಕದಲ್ಲಿ ಉತ್ತಮ ಸಂಸ್ಥೆಯಾಗಿ ಮೂಡಿಬರಲಿ ಎಂದು ಹಾರೈಸಿದರು.
ಶ್ರೀಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರವೀಣ್ ನಾೖಕ್, ನಿವೃತ್ತ ಶಿಕ್ಷಕ ಬೊಮ್ಮಾಯಿ ಬಂಗೇರ, ಚಿದಾನಂದ ರೈ ಮಾತನಾಡಿ ಸಾಂತ್ವನ ಸೇವಾಶ್ರಮದಿಂದ ಬಡ ಜನರಿಗೆ ನೀಡುವ ಆಹಾರ ಕಿಟ್ ವಿತರಣಾ ಕಾರ್ಯವನ್ನು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಸೇವಾಶ್ರಮದ ಅಧ್ಯಕ್ಷೆ ಶೋಭಾಚೇತನ್ ಮಾತನಾಡಿ ಇದು 38ನೇ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮ ಪ್ರತೀ ತಿಂಗಳೂ ನಡೆಯುತ್ತಿದೆ. ಹಲವಾರು ದಾನಿಗಳು ನಮ್ಮ ಮೇಲೆ ವಿಶ್ವಾಸವಿಟ್ಟು ಆಹಾರ ಕಿಟ್ ವಿತರಣೆಗೆ ಕೈಜೋಡಿಸಿದ್ದಾರೆ. ನಾವು ನಿಮಿತ್ತ ಮಾತ್ರ. ದಾನಿಗಳಿಂದಲೇ ಈ ಕಾರ್ಯಕ್ರಮ ನಡೆಯುತ್ತಿದೆ ಎಂದ ಅವರು ಮುಂದೆಯೂ ನಿಮ್ಮ ಸಹಕಾರ ಇರಲಿ ಎಂದರು.
ಅತಿಥಿಯಾಗಿದ್ದ ಕಾವೇರಿ ಸುಂದರ ನಾಯ್ಕ ಬಪ್ಪಳಿಗೆರವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ ಸನ್ಮಾನಿಸಲಾಯಿತು. ರಾಧಿಕಾ ಸ್ವಾಗತಿಸಿ ವನಿತಾ ವಂದಿಸಿದರು. ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.
23 ಕುಟುಂಬಗಳಿಗೆ ಕಿಟ್ ವಿತರಣೆ
ದಾನಿಗಳಿಂದ ಸಂಗ್ರಹಿಸಿದ ಧನಸಹಾಯದಲ್ಲಿ 23 ಮಂದಿ ಫಲಾನುಭವಿಗಳಿಗೆ ಗಣ್ಯರು ಆಹಾರ ಕಿಟ್ ವಿತರಿಸಿದರು. ಕಿಟ್ ಸ್ವೀಕರಿಸಿದ ಫಲಾನುಭವಿಗಳು ಅನಿಸಿಕೆ ವ್ಯಕ್ತಪಡಿಸಿದರು.