ಈಶ್ವರಮಂಗಲ:ಈಶ್ವರಮಂಗಲ ಹನುಮಗಿರಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಕೂಟ ಸಂಭ್ರಮ ಕಾರ್ಯಕ್ರಮ ನಡೆಯಿತು. ದೀಪ ಪ್ರಜ್ವಲನೆ ಹಾಗೂ ಚೆನ್ನೆಮಣೆ ಆಡುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಮುಖ್ಯ ಅತಿಥಿ ಡಾ. ಶ್ರೀಕುಮಾರ್ ಮಾತನಾಡಿ, ಅಕ್ಷರಭ್ಯಾಸ ಮಾತ್ರ ವಿದ್ಯೆಯಲ್ಲ ,ಹಳೆಯ ಆಹಾರ ಪದ್ಧತಿಗಳು ಆಚಾರ ವಿಚಾರಗಳು ಮುಖ್ಯ ಮತ್ತು ಆಟಿ ತಿಂಗಳಿನಲ್ಲಿ ಯಾವ ಆಹಾರವನ್ನು ತಿನ್ನಬೇಕು ಎಂಬುದರ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಶಾಲೆಯ ಪ್ರಾಂಶುಪಾಲ ಕೆ ಶಾಮಣ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಜಯ್ ರಾಜ್ ರೈ ಮಾತನಾಡಿ, ಆಟಿ ತಿಂಗಳ ಮಹತ್ವದ ಬಗ್ಗೆ ತಿಳಿಸಿದರು .ಸಂಸ್ಥೆಯ ಅಧ್ಯಕ್ಷ ನನ್ಯ ಅಚ್ಚುತ್ತ ಮೂಡತ್ತಾಯ ತುಳು ಭಾಷೆ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ, ತುಳುನಾಡಿನ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸಬೇಕೆಂದರು.
ಸಂಸ್ಥೆಯ ಶಿಕ್ಷಕಿ ಜಯಸ್ವಿನಿ ತಾವೇ ರಚಿಸಿದ ಹಾಡನ್ನು ಹಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕಿಯರಾದ ಸೌಮ್ಯ ಎ ಮತ್ತು ಲತಾ ಡಿ ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಅಪೂರ್ವ ಮತ್ತು ಬಳಗದವರು ಪ್ರಾರ್ಥಿಸಿ, ಶಿಕ್ಷಕರಾದ ಪ್ರಶಾಂತ್ ರವರು ಸ್ವಾಗತಿಸಿ,ಶಿಕ್ಷಕಿ ಮಲ್ಲಿಕಾರವರು ವಂದಿಸಿದರು. ಶಿಕ್ಷಕಿಯರಾದ ಪವಿತ್ರ ಮತ್ತು ವಿಜಯಲಕ್ಷ್ಮಿ ರವರು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಹಳೆಯ ಕಾಲದ ಸಾಂಪ್ರದಾಯಿಕ ವಸ್ತುಗಳ ಮತ್ತು ಔಷಧೀಯ ಸಸ್ಯಗಳ ಪ್ರದರ್ಶನ ನಡೆಯಿತು.