ಪುತ್ತೂರು: ಕೆದಂಬಾಡಿ ಗ್ರಾಮ ವ್ಯಾಪ್ತಿಯ ಹಿಂದು ಜಾಗರಣಾ ವೇದಿಕೆ ತ್ಯಾಗರಾಜನಗರ ಇದರ 23ನೇ ವಾರ್ಷಿಕ ಸಮಾರಂಭ ಮತ್ತು ಸಾಮೂಹಿಕ ಗಣಪತಿ ಹವನ ಆ.27ರಂದು ತ್ಯಾಗರಾಜನಗರದಲ್ಲಿರುವ ಹಿಂದು ಜಾಗರಣಾ ವೇದಿಕೆಯ ಕಟ್ಟೆಯಲ್ಲಿ ನಡೆಯಿತು. ಅರ್ಚಕ ಕೃಷ್ಣಕುಮಾರ್ ಉಪಾದ್ಯಾಯರವರ ನೇತೃತ್ವದಲ್ಲಿ ಬೆಳಿಗ್ಗೆ ಸಾಮೂಹಿಕ ಶ್ರೀ ಗಣಪತಿ ಹವನ ಆರಂಭಗೊಂಡು ಮಧ್ಯಾಹ್ನ ಮಹಾಮಂಗಳಾರತಿ,ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸುಮಾರು ಮುನ್ನೂರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಕೆದಂಬಾಡಿ ಮತ್ತು ಅರಿಯಡ್ಕ ಗ್ರಾಮ ವ್ಯಾಪ್ತಿಯ ಅಂಗನವಾಡಿ ಶಾಲಾ ಮಕ್ಕಳಿಗೆ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ಜರಗಿದವು. ಹಿಂದು ಜಾಗರಣಾ ವೇದಿಕೆಯ ಸಂಯೋಜಕ ರವಿ ಸ್ವಾಮಿನಗರ, ಸಹ ಸಂಯೋಜಕ ಲೋಕೇಶ್ ಸ್ವಾಮಿನಗರ ಹಾಗೂ ಸರ್ವ ಸದಸ್ಯರುಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.
ನಾಳೆ(ಆ.29) ಧಾರ್ಮಿಕ ಸಭಾ ಕಾರ್ಯಕ್ರಮ
ಆ.29ರಂದು ಸಂಜೆ ಭಜನಾ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ರವಿ ಸ್ವಾಮಿನಗರರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕಾರ ವಿಜಯ ಕುಮಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶೇಷಪ್ಪ ಮಡಿವಾಳ ಕೋಡಿಯಡ್ಕ ಭಾಗವಹಿಸಲಿದ್ದಾರೆ. ರಾತ್ರಿ ಶ್ರೀ ದೇವತಾ ಭಜನಾ ಮಂದಿರದ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀ ಮಹಾಗಣೇಶನ ಶೋಭಾಯಾತ್ರೆಯನ್ನು ಬರಮಾಡಿಕೊಳ್ಳುವುದು, ಹಣ್ಣುಕಾಯಿ ಸಮರ್ಪಣೆ ಹಾಗೂ ಮಂಗಳಾರತಿ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿಂದು ಜಾಗರಣಾ ವೇದಿಕೆಯ ಪ್ರಕಟಣೆ ತಿಳಿಸಿದೆ.