ಪುತ್ತೂರು: 2025 -26ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಪಿಎಂಶ್ರೀ ಶಾಲೆ ವೀರಮಂಗಲ ಇಲ್ಲಿನ ಮುಖ್ಯ ಶಿಕ್ಷಕ ತಾರಾನಾಥ ಪಿ ಭಾಜನರಾಗಿದ್ದಾರೆ.
ತಾರಾನಾಥ ಪಿ ಇವರ ಕಿರು ಪರಿಚಯ
ಸವಣೂರು ಗ್ರಾಮದ ಪರಣೆ ನಿವಾಸಿ ಸೀತಾರಾಮ ಗೌಡ ಮತ್ತು ಗಿರಿಜ ದಂಪತಿಗಳ ಪುತ್ರ ತಾರಾನಾಥ ಪಿ ಇವರು 1971ರಲ್ಲಿ ಜನಿಸಿದರು ಸವಣೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಾಣಿಯೂರು ನಲ್ಲಿ ಪ್ರೌಢ ಮತ್ತು ಕಾಲೇಜು ಶಿಕ್ಷಣ, 1990ರಲ್ಲಿ ಮಂಗಳೂರು ನಲ್ಲಿ ಟಿ ಸಿ ಎಚ್ ಪದವಿ ಪಡೆದು ಸರಕಾರಿ ಶಾಲಾ ಶಿಕ್ಷಕನಾಗಿ 26/07/1994 ರಲ್ಲಿ ಸ.ಕಿ.ಪ್ರಾ.ಶಾಲೆ ಭಂಡಿಹೊಳೆ ಬೆಳ್ತಂಗಡಿ ತಾಲೂಕಿನಲ್ಲಿ ಸೇವೆಗೆ ಸೇರಿದರು. 1998ರಲ್ಲಿ ವರ್ಗಾವಣೆಗೊಂಡು ಪುತ್ತೂರು ತಾಲೂಕಿನ ಪಳ್ಳತ್ತಾರು ಶಾಲೆಯಲ್ಲಿ ಸೇವೆ ಸಲ್ಲಿಸಿ 2002 ರಿಂದ 2004 ರವರಗೆ ನರಿಮೊಗರು ಕ್ಲಸ್ಟರ್ ಸಿ ಆರ್ ಪಿ ಯಾಗಿ, 2005ರಿಂದ 2009ರವರಗೆ ನಾಣಿಲ ಶಾಲೆಯಲ್ಲಿ ಶಿಕ್ಷಕರಾಗಿ , 2009ರಿಂದ 2013 ರವರಗೆ ಸವಣೂರು ಕ್ಲಸ್ಟರ್ ಸಿ ಆರ್ ಪಿ ಯಾಗಿ, 2013 ರಲ್ಲಿ ಕೆಯ್ಯೂರು ಕೆ.ಪಿ ಎಸ್ ನಲ್ಲಿ ಶಿಕ್ಷಕರಾಗಿ 2014 ರಿಂದ 2015 ಕುಮಾರಮಂಗಲ ಶಾಲೆಯಲ್ಲಿ ಶಿಕ್ಷಕರಾಗಿ, 2015 ರಿಂದ 2016 ಬೆಳಂದೂರು ಶಾಲೆಯಲ್ಲಿ ಶಿಕ್ಷಕರಾಗಿ 2017 ಸುಳ್ಯ ತಾಲೂಕಿನಲ್ಲಿ ಬಿ ಐ ಇ ಆರ್ ಟಿ ಯಾಗಿ, 2018 ರಿಂದ 2019 ಪುತ್ತೂರು ನಲ್ಲಿ ಬಿ ಐ ಇ ಆರ್ ಟಿ ಯಾಗಿ , 2019 ರಿಂದ 2022 ಜಿಡೆಕಲ್ಲು ಶಾಲೆಯಲ್ಲಿ ಶಿಕ್ಷಕನಾಗಿ ಸೇವೆಸಲ್ಲಿಸಿದ್ದಾರೆ. ಪ್ರಸ್ತುತ 2022 ರಲ್ಲಿ ಭಡ್ತಿಗೊಂಡು ವೀರಮಂಗಲ ಶಾಲೆಯ ಮುಖ್ಯ ಶಿಕ್ಷಕನಾಗಿ ಕಾರ್ಯ ನಿರ್ವಿಸುತ್ತಿದ್ದಾರೆ. 31 ವರ್ಷಗಳ ಸೇವಾನುಭವ ಹೊಂದಿರುವ ಇವರು ರಾಜ್ಯಸಂಪನ್ಮೂಲ ವ್ಯಕ್ತಿಯಾಗಿ ಡಿ ಎಸ್ ಇ ಆರ್ ಟಿ ಯಿಂದ ನೀಡಲಾದ, ಚೈತನ್ಯ,ನಲಿಕಲಿ, ಚೈತನ್ಯ ತರಣಿ,ಶಿಕ್ಷಣದಲ್ಲಿ ರಂಗಕಲೆ,ಕಂಪ್ಯೂಟರ್ ತರಬೇತಿ,ಸಾಪ್ಟ್ ತರಬೇತಿ, ಚೈತನ್ಯ ಇಂಗ್ಲಿಷ್,ಕನ್ನಡ, ಕ್ರಿಯಾಸಂಶೋದನೆ, ಮೌಲ್ಯಂಕನ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ, ಆಶಯ,ಸಂಕಲ್ಪ,ಪಿಎಂಶ್ರೀ ಶಾಲಾ ಮುಖ್ಯ ಶಿಕ್ಷಕರ ತರಬೇತಿ ಮೊದಲಾದ ತರಬೇತಿಗಳನ್ನು ಸಾವಿರಾರು ಶಿಕ್ಷಕರಿಗೆ ನೀಡಿದ್ದಾರೆ. ಎನ್ ಸಿ ಆರ್ ಟಿ ನವದೆಹಲಿ ಇವರು ನಡೆಸಿದ ಪಿಎಂಶ್ರೀ ಶಾಲೆಗಳ ಮುಖ್ಯಸ್ಥರ ರಾಷ್ಟ್ರ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಅತ್ಯುತ್ತಮ ಭಾಗಿಧಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಕ್ಕಳ ಮೂಲಕ ಚಟುವಟಿಕೆಗಳು – ಪ್ರತಿ ವರ್ಷವೂ ಮಕ್ಕಳಿಗಾಗಿ ಬೇಸಿಗೆ ಶಿಬಿರ ಮತ್ತು ಚಳಗಾಲದ ಶಿಬಿರಗಳನ್ನು ಏರ್ಪಡಿಸುತ್ತಾ ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೆ ವೇದಿಕೆ ಕಲ್ಪಸಿದ್ದಾರೆ. ಶಿಕ್ಷಣದಲ್ಲಿ ರಂಗಕಲೆ ಎಂಬ ಪರಿಕಲ್ಪನೆಯಲ್ಲಿ ಹತ್ತಾರು ಪಾಠ ನಾಟಕಗಳು,ವಿಜ್ಞಾನ ನಾಟಕಗಳು, ಗಣಿತ ನಾಟಕಗಳಿಗೆ ನಿರ್ದೇಶನ ಮಾಡಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತಂದು ಮುಖ್ಯವಾಹಿನಿಗೆ ತಂದಿದ್ದಾರೆ.ಸಾವಿರಾರು ಮಕ್ಕಳಿಗೆ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಉಚಿತವಾಗಿ ನೀಡಿ ಗೆಜ್ಜೆ ಕಟ್ಟಿ ರಂಗಪ್ರವೇಶ ಮಾಡಿಸಿದ್ದಾರೆ. ಪ್ರತಿಭಾ ಕಾರಂಜಿಯಲ್ಲಿ ಮಕ್ಕಳಿಗೆ ಜನಪದ ಕುಣಿತ ಕೋಲಾಟ, ಛದ್ಮವೇಷ, ಯಕ್ಷಗಾನ ನಾಟಕ ಇನ್ನಿತರ ಸ್ಪರ್ದೆಗಳಲ್ಲಿ ಜಿಲ್ಲಾ ಮಟ್ಟದ ಬಹುಮಾನಗಳನ್ನು ಪಡೆಯುವಲ್ಲಿ ನಿರ್ದೇಶನ ಮಾಡಿದ್ದಾರೆ. ನೂರಾರು ಬೀದಿನಾಟಕಗಳು, ಶಿಕ್ಷಣ,ಪರಿಸರ, ಮತದಾನ ವಿಶೇ಼ಷ ಅಗತ್ಯವುಳ್ಳ ಮಕ್ಕಳ ಕುರಿತು ಜನಜಾಗೃತಿ ಬೀದಿನಾಟಕ, ಮದ್ಯಪಾನ ಹಾಗೂ ದುಶ್ಚಟಗಳ ಕುರಿತು ಜನಜಾಗೃತಿ ಬೀದಿನಾಟಕಗಳನ್ನು ಆಯೋಜಿಸಿ ನಿರ್ದೇಶನ ಮಾಡಿದ್ದಾರೆ. ಮಕ್ಕಳ ಮೂಲಕವು ಸ್ವಚ್ಛ ಬಾರತ್, ಏಕ್ ಭಾರತ್ ಶ್ರೇಷ್ಠ ಬಾರತ್,ಏಕ್ ಫೇಡ್ ಮಾ ಕೆ ನಾಮ್ ,ಪರಿಸರ ಕಾಳಜಿ, ರೋಗಗಳು ನಮ್ಮ ಆಹಾರಗಳು ಈ ಕುರಿತು ವಿಶೇಷ ಕಾರ್ಯಕ್ರಮ ಮಾಡಿದ್ದಾರೆ.
ಮದ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಕಲೋತ್ಸವದಲ್ಲಿ ರಾಷ್ಟ್ರ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಶಂಬೂರು ಶಾಲೆಯ ಮಕ್ಕಳ ನಾಟಕ ತಂಡಕ್ಕೆ ಯಕ್ಷಗಾನ ತರಬೇತು ನೀಡಿ ಪ್ರಸಾದನದಲ್ಲಿ ಸಹಕರಿಸಿ ಪ್ರಥಮ ಬರುವಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಕಂಪ್ಯೂಟರ್ ತರಬೇತು ಪಡೆದು ನೂರಾರು ಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡುತ್ತಿದ್ದಾರೆ. ಹತ್ತಾರು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಯು ಡಿ ಐ ಡಿ ಕಾರ್ಡ್ ಮಾಡಿಸಿದ್ದಾರೆ. ಕೊರೋನಾ ಸಮಯದಲ್ಲಿ ಶಿಕ್ಷಕರಿಗೆ ವಿಶೇಷವಾದ ತರಬೇತು ಸಾಹಿತ್ಯ ರಚನೆ ಮಾಡುವಲ್ಲಿ ಇಲಾಖೆಯೊಂದಿಗೆ ಕೈ ಜೋಡಿಸಿದ್ದಾರೆ. ಡಯಟ್ ವತಿಯಿಂದ ನಡೆದ ಕೇರಳ ಶೈಕ್ಷಣಿಕ ಚಟುವಟಿಕೆಗಳ ಅನುಬಾವತ್ಮಕ ಭೇಟಿ ಪ್ರವಾಸದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಸ್ತುತ ವೀರಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪಿಎಂಶ್ರೀ ಶಾಲೆಯನ್ನಾಗಿ ಪರಿವರ್ತನೆ ಮಾಡಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಅತ್ಯುತ್ತಮ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಪಿಎಂಶ್ರೀ ಚಟುವಟಿಕೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ದೇಶದಲ್ಲಿ ಅತ್ಯುತ್ತಮ ಪಿಎಂಶ್ರೀ ಶಾಲೆಯಾಗಿ ಸಮರ್ಪಣೆಯಾಗುವಲ್ಲಿ ಅವಿರತವಾಗಿ ಪ್ರಯತ್ನಿಸಿದ್ದಾರೆ. ಪ್ರದಾನಮಂತ್ರಿ ಕಾರ್ಯಾಲಯದ ಜಂಟಿ ಕಾರ್ಯದರ್ಶಿಯವರು, ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕಕರು, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಕಾಧಿಕಾರಿಯವರು, ಜಿಲ್ಲಾ ಉಪನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಯವರು ಶಾಲೆಗೆ ಭೇಟಿ ನೀಡಿ ಶಾಲೆಯ ಕುರಿತಾಗಿ ಮೆಚ್ಚುಗೆ ವ್ಯಕ್ತ ಪಡಿಸಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕ ದಿಂದ ಅತ್ಯುತ್ತಮ ಎಸ್ ಡಿ ಎಂ ಸಿ ಎಂದು ಪುಷ್ಠಿ ಪ್ರಶಸ್ತಿ ಬಂದಿರುವುದು ಎಸ್ ಡಿ ಎಂ ಸಿ ಯವರೊಂದಿಗಿನ ಉತ್ತಮ ಬಾಂಧವ್ಯಕ್ಕೆ ಕೈಗನ್ನಡಿಯಾಗಿದೆ.
ಶಾಲೆಯಲ್ಲಿ ಮಕ್ಕಳಿಗೆ ಕರಾಟೆ ತರಬೇತಿ,ಯೋಗ ತರಬೇತಿ, ಬ್ಯಾಂಡ್ ತರಬೇತಿ, ಯಕ್ಷಗಾನ ತರಬೇತಿ,ರಂಗಗೀತೆಗಳ ತರಬೇತಿ, ತಜ್ಞರೊಂದಿಗೆ ಮಾತುಕಥೆ, ಕ್ಷೇತ್ರ ಭೇಟಿ, ಅನುಭಾವತ್ಮಕ ಭೇಟಿ, ಆಟಿಡೊಂಜಿ ದಿನ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬಗಳ ಆಚರಣೆ, ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ. ವನ ಚಾರಿಟೇಬಲ್ ಟ್ರಸ್ಟ್ ಮೂಲಕ 1000 ಕ್ಕಿಂತಲೂ ಹಚ್ಚಿನ ಹಣ್ಣಿನ ಗಿಡಗಳ ತೋಪು ನಿರ್ಮಾಣ,ಸ್ಮಾರ್ಟ್ ತರಗತಿಗಳ ನಿರ್ರವಹಣೆ, ಅಂದವಾದ ಕೈ ತೋಟ, ನಿರ್ಮಾಣ, ಅಂಗಳಕ್ಕೆ ಇಂಟರ್ ಲಾಕ್, ವಿಭಿನ್ನ ಯೋಚನೆಗಳೊಂದಿಗೆ ಇಲಾಖೆಯ ಎಲ್ಲಾ ಕೆಲಸಗಳನ್ನು ಬಾಕಿ ಉಳಿಸದೆ ಮಾಡುತ್ತಿದ್ದಾರೆ.
ಸವಣೂರು ಯುವಕ ಮಂಡಲದ ಸದಸ್ಯನಾಗಿ,ಅಧ್ಯಕ್ಷನಾಗಿ ಹತ್ತಾರು ಜನಭಾಗಿಧಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಸೇವೆಯನ್ನು ಮಾಡಿದ್ದಾರೆ. ಯುವಜನ ಮೇಳಗಳಲ್ಲಿ 6 ಬಾರಿ ಯಕ್ಷಗಾನದಲ್ಲಿ ರಾಜ್ಯ ಪ್ರೆಶಸ್ತಿ ಪಡೆದಿದ್ದಾರೆ. ಜನಪದ ಕುಣಿತಗಳು,ವೀರಗಾಸೆ ಸಣ್ಣಾಟ,ದೊಡ್ಡಾಟ,ಡೊಳ್ಳು,ಹಾಲಕ್ಕಿ, ಸುಗ್ಗಿಕುಣಿತ, ಕಂಸಾಳೆ, ತುಳು ಕುಣಿತಗಳಾದ ಕರಂಗೋಲು. ಕಂಗೀಲು,ಚೆನ್ನು,ಮಾಂಕಾಳಿ, ಕನ್ಯಾಪು, ಆಟಿ ಕಳೆಂಜ, ಇತ್ಯಾದಿ ಕುಣಿತಗಳನ್ನು ಮಾಡಿ ಪ್ರಶಸ್ತ ಪಡೆದುಕೊಂಡಿದ್ದಾರೆ.ತುಳು ಸಾಹಿತ್ಯ ಅಕಾಡೆಮಿ ಸಂಪನ್ಮೂಲ ವ್ಯಕ್ತಿಯಾಗಿ ನೂರಾರು ಕಡೆ ಸಂಪನ್ಮೂ ವ್ಯಕ್ತಿಯಾಗಿ ಕಾರ್ಯ ನಿರ್ಹಿಸದ್ದಾರೆ. ರಾಜ್ಯ ಮಟ್ಟದ ತೀರ್ಪುಗಾರರ ಕಮ್ಮಟದಲ್ಲಿ ಭಾಗವಹಿಸಿದ್ದಾರೆ.
1998 ರಲ್ಲಿ ಶ್ರವಣರಂಗ ಎಂಬ ಸಾಂಸ್ಕೃತಿಕ ಪ್ರತಿಷ್ಠಾನ ವನ್ನು ಸವಣೂರು ನಲ್ಲಿ ಪ್ರಾರಂಭಿಸಿ ಯಕ್ಷಗಾನ,ಭರತನಾಟ್ಯ ಸಂಗೀತ ತರಬೇತಿಗಳನ್ನು ಆಯೋಜಿಸಿದ್ದಾರೆ. ನೂರಾರು ಯಕ್ಷಗಾನ ಕಮ್ಮಟಗಳನ್ನು ಏರ್ಪಡಿಸಿ, ನಿರ್ದೇಶನ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಎ ಗ್ರೇಡ್ ಕಲಾವಿದನಾಗಿರುವ ಇವರು ನೂರಾರು ಯಕ್ಷಗಾನ ತಾಳಮದ್ದಳೆಗಳನ್ನು ಆಯೋಜಿಸಿದ್ದಾರೆ. ಅರ್ಥಧಾರಿಯಾಗಿಯೂ ಸೈ ಎಣಿಸಿಕೊಂಡಿದ್ದಾರೆ. ಹಿಮ್ಮೇಳದಲ್ಲಿ ಚೆಂಡೆ,ಮದ್ದಳೆ ವಾದಕರಾಗಿ, ಭಜನೆ ಸಂಗೀತಕ್ಕೆ ತಬಲವಾದನ ಮತ್ತು ಡೋಲಕ್ ವಾದನದಲ್ಲೂ ಸಾಥ್ ನೀಡುತ್ತಿದ್ದಾರೆ.. ಜಿಲ್ಲೆಯ ಪ್ರಸಿದ್ಧ ತುಳು ಕವಿಗಳ ಕವನಗಳನ್ನು ಸಂಗ್ರಹಿಸಿ ಸಂಕಲನ ಮಾಡಿ ಆವರ ಎಂಬ ಪುಸ್ತಕವನ್ನು ಹೊರ ತಂದಿದ್ದಾರೆ. ಶಿಕ್ಷಕರು ರಚಿಸಿದ ಕಥೆ ಕವನಗಳನ್ನು ಸಂಗ್ರಹಿಸಿ ಚಿಂತನಾಮೃತ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಶಿಕ್ಷಕರ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದಾರೆ. ಇವರ ಸಾಧನೆಗೆ ಈಗಾಗಲೆ ಹತ್ತಾರು ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದೆ. ಇಲಾಖೆಯು ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಯನ್ನು 1999 ರಲ್ಲಿ ನೀಡಿ ಗೌರವಿಸಿದೆ.
ಶಾಲೆಯನ್ನು ಗುರುಕುಲ ಮಾದರಿಯಲ್ಲಿ ನಡೆಸುತ್ತಿರುವ ಇವರು ಮಕ್ಕಳ ಮತ್ತು ಶಿಕ್ಷಕರ ಎಲ್ಲಾ ಆಗುಹೋಗುಗಳ ಜವಾಬ್ದಾರಿ ವಹಿಸಿಕೊಂಡು ಸಮರ್ಥ ಮುಖ್ಯ ಶಿಕ್ಷಕ ಎಂದು ಇಲಾಖಾಧಿಕಾರಿಗಳ ಮನ್ನಣೆಗೆ ಪಾತ್ರವಾಗಿದ್ದಾರೆ.
ಹೆಂಡತಿ ವಸಂತಿ.ಕೆ ಇವರು ಮಣಿಕ್ಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.ಎರಡು ಹೆಣ್ಣುಮಕ್ಕಳು ಇಂಜನಿಯರಿಂಗ್ ಪದವಿ ಮಾಡುತ್ತಿದ್ದಾರೆ.