ಇತಿಹಾಸ ಎನ್ನುವುದು ಸತ್ತವರ ಮೇಲೆ ಕಟ್ಟಿದ ಗೋರಿಯಲ್ಲ ಬದಲಾಗಿ ಅದೊಂದು ತತ್ವಜ್ಞಾನ- ಡಾ.ಅರುಣ್ ಉಳ್ಳಾಲ್
ಪುತ್ತೂರು: ಇತಿಹಾಸ ಎನ್ನುವುದು ಸತ್ತವರ ಮೇಲೆ ಕಟ್ಟಿದ ಗೋರಿಯಲ್ಲ ಬದಲಾಗಿ ಅದೊಂದು ತತ್ವಜ್ಞಾನ. ನಾವು ಇತಿಹಾಸ ಕಲಿಯುವ ಮಾದರಿಯೇ ಸರಿಯಾಗಿಲ್ಲ. ಮೊದಲಿಗೆ ನಾನು, ನನ್ನ ಮನೆ, ನನ್ನ ಪರಿಸರ, ರಾಜ್ಯ, ದೇಶ ಹೀಗೆ ನಮ್ಮ ಸ್ಥಳೀಯ ಇತಿಹಾಸವನ್ನು ಕಲಿಯಬೇಕೇ ಹೊರತು ನಮಗೆ ಅಗತ್ಯವಿಲ್ಲದ ವಿಶ್ವದ ಇತಿಹಾಸವನ್ನು ಕಲಿಯುವುದಲ್ಲ ಎಂದು ಮಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕನ್ನಡ ವಿಭಾಗ ಮುಖ್ಯಸ್ಥ ಡಾ.ಅರುಣ್ ಉಳ್ಳಾಲ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಮತ್ತು ವಿದ್ಯಾಭಾರತಿ ಉಚ್ಛಶಿಕ್ಷಾ ಸಂಸ್ಥಾನ ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಣಿ ಅಬ್ಬಕ್ಕ-500 ವರ್ಷಗಳ ವೀರಸ್ಮರಣೆ ಕಾರ್ಯಕ್ರಮದಲ್ಲಿ ಮಾತಾಡಿದರು. ಅಬ್ಬಕ್ಕ ರಾಣಿ ಹೌದು, ಆದರೆ ನಾವಂದುಕೊಂಡಂತೆ ಆಕೆ ಪಟ್ಟದಲ್ಲಿ ಕುಳಿತು ರಾಜ್ಯಭಾರವನ್ನು ಮಾಡುತ್ತಾ ಅದರ ಸವಿಯುಂಡವಳಲ್ಲ ಬದಲಾಗಿ ಆಕೆ ಅತ್ಯಂತ ಸರಳ ವ್ಯಕ್ತಿತ್ವದ ಜೀವನಕ್ರಮವನ್ನು ಹೊಂದಿದ್ದಳು. ಅವಳು ದೇಶದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾತಿ. ಇವಳ ಕಾಲದಲ್ಲಿ ಹೆಚ್ಚಿನ ಕ್ರಾಂತಿಕಾರೀ ಬೆಳವಣಿಗೆಗಳಾದವು. ಇದರಿಂದಾಗಿ ಅವಳ ಹೋರಾಟವು ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಪ್ರಜ್ಞೆಯುಳ್ಳ ರೀತಿಯಲ್ಲಿ ನಮ್ಮ ಇತಿಹಾಸವನ್ನು ಓದುತ್ತಾ ದೇಶದ ಮಹಾನ್ ವ್ಯಕ್ತಿತ್ವಗಳ ಸಾಧನೆ ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿಯುವಂತಾಗಲಿ ಎಂದು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ಯಾಭಾರತಿ ಉಚ್ಛ ಶಿಕ್ಷಾ ಸಂಸ್ಥಾನ ಕರ್ನಾಟಕ ಇದರ ಕ್ಷೇತ್ರೀಯ ಸಂಯೋಜಕರಾದ ಪ್ರೊ.ಕೃಷ್ಣಪ್ರಸಾದ್.ಕೆ.ಎನ್ ನಾವು ಪ್ರತಿವರ್ಷ ಕೆಲವೊಂದು ರಾಷ್ಟ್ರ ಪುರುಷರ, ಐತಿಹಾಸಿಕ ಘಟನೆಗಳ ನೆನಪು ಮಾಡುತ್ತಲೇ ಬಂದಿದ್ದೇವೆ. ಈ ನೆನಪುಗಳು ನಮ್ಮ ಜವಾಬ್ಧಾರಿಯನ್ನು ಹೆಚ್ಚಿಸುತ್ತಾ ನಮ್ಮಲ್ಲಿ ಹೆಚ್ಚಿನ ರಾಷ್ಟ್ರ ಚಿಂತನೆಯನ್ನು ಬಡಿದೆಬ್ಬಿಸುವುದಕ್ಕೆ ಅಗತ್ಯವಾಗಿದೆ ಎಂದರು. ಸ್ವಾತಂತ್ರ್ಯ ಬಂದಾಗ ಬ್ರಿಟೀಷರು ನಮ್ಮನ್ನು ಬಿಟ್ಟು ಹೋದರೇ ಹೊರತು ನಮ್ಮ ಮಾನಸಿಕತೆಯಲ್ಲಿ ಬದಲಾವಣೆ ಆಗಲಿಲ್ಲ. ಸರಿಯಾದ ಕ್ರಮದಲ್ಲಿ ಇತಿಹಾಸವನ್ನು ಬೋಧಿಸುವ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಲ್ಲದೆ ಇದಕ್ಕೆ ಪರಿಹಾರವಿಲ್ಲ ಎಂದರು.
ವಿದ್ಯಾಭಾರತಿ ಉಚ್ಛ ಶಿಕ್ಷಾ ಸಂಸ್ಥಾನ ಕರ್ನಾಟಕ ಇದರ ರಾಷ್ಟ್ರೀಯ ಮಂತ್ರಿ ಡಾ.ಶೊಭಿತಾ ಸತೀಶ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ ಪ್ರೊ.ಮಹಾಬಲೇಶ್ವರ ಭಟ್ ಸ್ವಾಗತಿಸಿ ಸಹ ಸಂಯೋಜಕಿ ಪ್ರೊ.ನಿರುಪಮಾ.ಕೆ ವಂದಿಸಿದರು. ಶ್ರಾದ್ಧಾ.ಕೆ.ಎಸ್ ಕಾರ್ಯಕ್ರಮ ನಿರ್ವಹಿಸಿದರು.