





ಪುತ್ತೂರು: ಕೆದಂಬಾಡಿ ಗ್ರಾಮದ ಗಟ್ಟಮನೆ ಎಂಬಲ್ಲಿ ಮರದಲ್ಲಿ ಗೂಡು ಕಟ್ಟಿಕೊಂಡಿದ್ದ ಕಣಜದ ಹುಳಗಳನ್ನು ಸ್ಥಳೀಯರು ಸೇರಿಕೊಂಡು ನಾಶಪಡಿಸಿದ ಘಟನೆ ಅ.26ರಂದು ರಾತ್ರಿ ನಡೆದಿದೆ.
ಗಟ್ಟಮನೆಯಲ್ಲಿ ರಸ್ತೆ ಬದಿಯಲ್ಲಿ ಕಣಜದ ಹುಳ ಇರುವುದನ್ನು ಸ್ಥಳೀಯರೊಬ್ಬರು ನೋಡಿದ್ದು ಕೂಡಲೇ ಇತರರಿಗೆ ಮಾಹಿತಿ ನೀಡಿದ್ದರು. ಅದರಂತೆ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿದ ಸ್ಥಳೀಯರು ಕಣಜದ ಹುಳಗಳನ್ನು ನಾಶಪಡಿಸಿದ್ದು, ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ. ಇದೇ ರಸ್ತೆಯಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಿತ್ಯ ಹೋಗುತ್ತಿದ್ದು, ಯಾವುದೇ ಸಂದರ್ಭದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.



ಕಣಜದ ಹುಳಗಳನ್ನು ನಾಶಪಡಿಸುವ ಕಾರ್ಯಾಚರಣೆಯಲ್ಲಿ ಸಾರೆಪುಣಿ, ಇದ್ಯಪೆ, ಗಟ್ಟಮನೆ ಹಾಗೂ ಇದ್ಪಾಡಿ ಪರಿಸರದ ಸಾರ್ವಜನಿಕರು ಭಾಗವಹಿಸಿದ್ದರು. ಇತ್ತೀಚೆಗೆ ಹೆಜ್ಜೇನು ದಾಳಿಯಿಂದ ಸೇಡಿಯಾಪು ಎಂಬಲ್ಲಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ದಾರುಣ ಘಟನೆ ಬೆನ್ನಲ್ಲೇ ಗಟ್ಟಮನೆಯಲ್ಲಿ ಹೆಜ್ಜೇನುಗಳನ್ನು ನಾಶಪಡಿಸಿದ ಸ್ಥಳೀಯರ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.








