





ಉಪ್ಪಿನಂಗಡಿ: ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ ರವಿ ಬಿ.ಎಸ್. ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉಬಾರ್ ಸ್ಪೋರ್ಟಿಂಗ್ ಕ್ಲಬ್ ಹಾಗೂ ಉಬಾರ್ ಡೋನಾರ್ಸ್ ಸಂಸ್ಥೆಯ ಶಬೀರ್ ಕೆಂಪಿ, ಸ್ಯಾಕ್ಸೋಫೋನ್ ವಾದಕ ಕೃಷ್ಣಪ್ಪ ದೇವಾಡಿಗ, ಪತ್ರಕರ್ತ ಉದಯಕುಮಾರ್ ಯು.ಎಲ್. ಅವರಿಗೆ ಉಪ್ಪಿನಂಗಡಿ ಗ್ರಾ.ಪಂ. ವತಿಯಿಂದ ಪೌರ ಸನ್ಮಾನವನ್ನು ನೀಡಿ ಗೌರವಿಸಲಾಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ರವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾಯೋಜನೆ ತಯಾರಿ ವಿಶೇಷ ಗ್ರಾಮ ಸಭೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಿತು.






ತನ್ನ 18 ವರ್ಷಗಳ ಪೊಲೀಸ್ ಕರ್ತವ್ಯಾವಧಿಯಲ್ಲಿ 12 ವರ್ಷಗಳನ್ನು ದ.ಕ ಜಿಲ್ಲೆಯಲ್ಲಿ ಕಳೆದಿರುವ ರವಿ ಬಿ.ಎಸ್. ರವರು ಜಿಲ್ಲೆಯ ನಡೆದ ಹಲವಾರು ಪ್ರಕರಣಗಳ ನಿಗೂಢತೆಯನ್ನು ಭೇದಿಸಲು ಕಾರಣಕರ್ತರಾಗಿದ್ದರು. ವಿದ್ಯುನ್ಮಾನ ವ್ಯವಸ್ಥೆಯ ಮೂಲಕ ಪರಾರಿಯಾದವರ ಚಲನವಲನವನ್ನು ಪತ್ತೆಹಚ್ಚಿ ಅವರನ್ನು ಕಾನೂನುಕ್ರಮಕ್ಕೆ ಒಳಪಡಿಸುವಲ್ಲಿ ತೋರಿದ ಜಾಣ್ಮೆಗೆ ರಾಷ್ಟ್ರಪತಿ ಪದಕದಿಂದ ಪುರಸ್ಕೃತರಾಗಿದ್ದರು. ಇವರು ತನ್ನ ದಕ್ಷ ಕರ್ತವ್ಯದಿಂದಾಗಿ ಜಿಲ್ಲೆಗೆ ಹೆಗ್ಗಳಿಕೆ ತಂದಿದ್ದು, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಲವು ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತವಾದ ಉಬಾರ್ ಸ್ಫೋರ್ಟಿಂಗ್ ಕ್ಲಬ್ ಹಾಗೂ ಉಬಾರ್ ಡೋನಾರ್ಸ್ ಸಂಸ್ಥೆಯ ಅಧ್ಯಕ್ಷ ಶಬೀರ್ ಕೆಂಪಿ, ಸ್ಯಾಕ್ಸೋಫೋನ್ ವಾದಕ ಕೃಷ್ಣಪ್ರಸಾದ್ ದೇವಾಡಿಗ, ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಯು.ಎಲ್. ಉದಯಕುಮಾರ್ ಅವರನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ವತ್ಸಲಾ ನಾಯಕ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಕಾರ್ಯದರ್ಶಿ ಗೀತಾ ಬಿ., ಸದಸ್ಯರಾದ ಉಷಾ ಮುಳಿಯ, ಅಬ್ದುಲ್ ರಹಿಮಾನ್ , ಯು ಟಿ ಮಹಮ್ಮದ್ ತೌಷಿಫ್, ಶೋಭಾ , ಧನಂಜಯ್ ನಟ್ಟಿಬೈಲ್, ಅಬ್ದುಲ್ ರಶೀದ್, ಲೋಕೇಶ್ ಬೆತ್ತೋಡಿ, ವನಿತಾ ಉಪಸ್ಥಿತರಿದ್ದರು.








