![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
- ಡಿಸೆಂಬರ್ ತಿಂಗಳಲ್ಲಿ 25ನೇ ವರ್ಷದ ಬೆಳ್ಳಿಹಬ್ಬ ಆಚರಣೆ ಬೃಹತ್ ಕಾರ್ಯಕ್ರಮಕ್ಕೆ ನಿರ್ಣಯ
- ಎಲೆಕ್ಟ್ರಿಕ್ ರಿಕ್ಷಾಕ್ಕೆ ಆದ್ಯತೆ ನೀಡಿ – ಆರ್ಟಿಒ ಆನಂದ ಗೌಡ
- 25ನೇ ವರ್ಷದ ಕಾರ್ಯಕ್ರಮ ಇತಿಹಾಸ ನಿರ್ಮಾಣವಾಗಬೇಕು – ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ
- ಸ್ನೇಹ ಸಂಗಮ ರಾಜ್ಯಕ್ಕೆ ಮಾದರಿಯಾಗಬೇಕು- ಜೋಕಿಂ ಡಿಸೋಜ
- 25ಕ್ಕೆ 25 ಕಾರ್ಯಕ್ರಮ – ಸಿಲ್ವೆಸ್ಟರ್ ಡಿಸೋಜ
ಪುತ್ತೂರು: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ವಾರ್ಷಿಕ ಮಹಾಸಭೆಯು ಫೆ. 5ರಂದು ಪುತ್ತೂರು ನೆಲ್ಲಿಕಟ್ಟೆ ಶಾಲಾ ಆವರಣದಲ್ಲಿರುವ ಬಿ.ಆರ್.ಸಿ ಸಭಾಂಗಣದಲ್ಲಿ ನಡೆಯಿತು. ಡಿಸೆಂಬರ್ ತಿಂಗಳಲ್ಲಿ ಸಂಘದ 25ನೇ ವರ್ಷದ ಬೆಳ್ಳಿಹಬ್ಬ ಆಚರಣೆಗೆ ಬೃಹತ್ ಕಾರ್ಯಕ್ರಮ ಆಯೋಜಿಸುವ ಕುರಿತು ನಿರ್ಣಯಿಸಲಾಗಿದೆ.
ಸಂಘದ ಬೆಳವಣಿಗೆಗೆ ದುಡಿದವರನ್ನು ನೆನಪಿಸುವುದು, ಸಮಾಜ ಸೇವೆ ಮಾಡುವುದು. 25 ವರ್ಷದ ಅಂಗವಾಗಿ 25 ಸಮಾಜ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ನಿರ್ಣಯಿಸಿದಂತೆ ಈಗಾಗಲೇ 13 ಕಾರ್ಯಕ್ರಮ ಪೂರ್ಣಗೊಂಡಿದ್ದು, ಉಳಿದ ಕಾರ್ಯಕ್ರಮವನ್ನು ಸಂಘದ ಸದಸ್ಯರು ಜೊತೆಯಾಗಿ ಮಾಡುವ ಕುರಿತು ನಿರ್ಣಯಿಸಲಾಯಿತು.
ಎಲೆಕ್ಟ್ರಿಕ್ ರಿಕ್ಷಾಕ್ಕೆ ಆದ್ಯತೆ ನೀಡಿ:
ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಗೌಡ ಅವರು ಮಾತನಾಡಿ ಚಾಲಕರು ತಮ್ಮ ಜೀವನದ ಪಾಡಿಗಾಗಿ ರಿಕ್ಷಾದಲ್ಲಿ ದುಡಿಯುವುದು ಸಹಜ. ಆದರೆ ರಿಕ್ಷಾ ಚಲಾಯಿಸುವಾಗ ತಮ್ಮಲ್ಲಿ ಎಲ್ಲಾ ದಾಖಲೆ ಪತ್ರ ಸರಿಯಾಗಿ ಇಟ್ಟು ಕೊಳ್ಳಿ. ಆಗಾಗ ತಮ್ಮ ವಾಹನ ತಪಾಸಣೆ ಮಾಡಿದ ಅದರ ಜೊತೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದ ಅವರು ಇತ್ತೀಚೆಗೆ ವಾಯು ಮಾಲಿನ್ಯ ನಿಯಂತ್ರಣ ಮಾಡುವುದು ಬಹಳ ಅಗತ್ಯ. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ರಿಕ್ಷಾಕ್ಕೆ ಆದ್ಯತೆ ನೀಡಿ. ಇದು ನಿಮಗೆ ಆರ್ಥಿಕವಾಗಿಯೂ ಲಾಭವಾಗಲಿದೆ ಎಂದು ಸಲಹೆ ನೀಡಿದರು.
25ನೇ ವರ್ಷದ ಕಾರ್ಯಕ್ರಮ ಇತಿಹಾಸ ನಿರ್ಮಾಣವಾಗಬೇಕು:
ಸಭಾಧ್ಯಕ್ಷತೆ ವಹಿಸಿದ್ದ ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆಯವರು ಮಾತನಾಡಿ ನಮ್ಮ ಸಂಘದ ಕಾರ್ಯಕ್ರಮ ಮನೆಯ ಕಾರ್ಯಕ್ರಮವಾಗಿ ಮೂಡಿ ಬರಬೇಕು. ಅದಕ್ಕಾಗಿ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಭಾಗವಹಿಸಬೇಕು. ಮುಂದಿನ ದಿನ 25ನೇ ವರ್ಷದ ಕಾರ್ಯಕ್ರಮದಲ್ಲಿ ರಜೆ ಮಾಡಿಯಾದರೂ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮೂರು ದಿನದ ದೊಡ್ಡ ಮಟ್ಟ ಕಾರ್ಯಕ್ರಮ ಮಾಡುವ ಚಿಂತನೆ ಇಟ್ಟುಕೊಳ್ಳಿ. ಅದಕ್ಕೆ ಬೇಕಾದ ಎಲ್ಲಾ ಸಹಕಾರ ನಾನು ಕೊಡುತ್ತೇನೆ ಎಂದು ಭರವಸೆ ನೀಡಿದ ಅವರು ನಮ್ಮ ಕಾರ್ಯಕ್ರಮ ಇತಿಹಾಸ ನಿರ್ಮಾಣ ಆಗಬೇಕೆಂದರು.
ಸ್ನೇಹ ಸಂಗಮ ರಾಜ್ಯಕ್ಕೆ ಮಾದರಿಯಾಗಬೇಕು:
ಸಂಘದ ಗೌರವ ಸಲಹೆಗಾರ ಜೋಕಿಂ ಡಿ ಸೋಜ ಅವರು ಮಾತನಾಡಿ ಆಟೋ ರಿಕ್ಷಾದದವರ ಜೀವನ ಅತಂತ್ರಗೊಂಡಿದೆ. ಅವರಿಗೆ ಸಾಲದ ಹೊರೆ, ಮನೆಯ ಚಿಂತನೆ ಹೆಚ್ಚು. ಇಂತಹ ಸಂದರ್ಭದಲ್ಲಿ ಕೆಲವೊಂದು ಕಡೆ ತಪ್ಪಾಗಿದ್ದಾರೂ ಅದನ್ನು ತಿದ್ದಿಕೊಂಡು ಮುಂದೆ ಹೋಗುವುದು ಉತ್ತಮ. ಒಂದು ಹಂತದಲ್ಲಿ ಆಂಬುಲೆನ್ಸ್ ಚಾಲಕರಿಗಿಂತ ಎಲ್ಲಾ ವಿಚಾರದಲ್ಲೂ ನಾಜಕಾಗಿರುವುದು ರಿಕ್ಷಾ ಚಾಲಕರು. ಸ್ನೇಹ ಸಂಗಮ ಸ್ಟಿಕ್ಕರ್ ಇರುವ ರಿಕ್ಷಾದಲ್ಲಿ ಯಾವ ಘಟನೆಯೂ ನಡೆಯದಂತೆ ರಾಜ್ಯಕ್ಕೆ ಮಾದರಿಯಾಗಬೇಕೆಂದರು.
25ಕ್ಕೆ 25 ಕಾರ್ಯಕ್ರಮ:
ಸ್ನೇಹ ಸಂಗಮ ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಅವರು ಮಾತನಾಡಿ ಸಂಘದ ಬೆಳ್ಳಿ ಹಬ್ಬದ ಸಂಭ್ರಮ ಆರಂಭಗೊಂಡಿದೆ. ಈಗಾಗಲೇ ಬೆಳ್ಳಿ ಹಬ್ಬದ ಅಂಗವಾಗಿ 13 ಸೇವಾ ಕಾರ್ಯಕ್ರಮ ನಡೆದಿದೆ. ಉಳಿದಂತೆ ಇನ್ನೂ ಸೇವಾ ಕಾರ್ಯಕ್ರಮ ನಡೆಸಲಾಗುವುದು. ಡಿಸೆಂಬರ್ ತಿಂಗಳಲ್ಲಿ 25 ಕಾರ್ಯಕ್ರಮ ಪೂರ್ಣಗೊಂಡು. ದೊಡ್ಡ ಮಟ್ಟದ ಬೆಳ್ಳಿ ಹಬ್ದದ ಕಾರ್ಯಕ್ರಮ ನಡೆಯಲಿದೆ ಎಂದ ಅವರು ಎಲ್ಲಾ ಸದಸ್ಯರ ಸಹಕಾರ ಕೋರಿದರು. ವೇದಿಕೆಯಲ್ಲಿ ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ ಅರವಿಂದ್ ಗೌಡ, ಪ್ರಧಾನ ಕಾರ್ಯದರ್ಶಿ ತಾರನಾಥ ಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬೆಳ್ಳಿ ಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ವಂದಿಸಿದರು. ಕಾರ್ಯಾಧ್ಯಕ್ಷ ಚನಿಯಪ್ಪ ನಾಯ್ಕ ಎ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಉಮೇಶ್ಚಂದ್ರ, ಜೊತೆ ಕಾರ್ಯದರ್ಶಿ ರೋಹಿದಾಸ್, ಖಜಾಂಜಿ ರಫೀಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಫೆ.5ರಂದು ನಸುಕಿನ ಜಾವ ನಿಧನರಾದ ಹಿರಿಯ ಪತ್ರಕರ್ತ ರಂಜನ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಸಭಾ ಕಾರ್ಯಕ್ರಮದ ಆರಂಭಕ್ಕೂ ಮುಂದೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.