ಪುತ್ತೂರು: ಇಲ್ಲಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ `ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರ’ ಪ್ರತಿಜ್ಞೆಯನ್ನು ವಿದ್ಯಾರ್ಥಿನಿಯರು ಕೈಗೊಂಡರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸುದ್ದಿ ಜನಾಂದೋಲನ ವೇದಿಕೆ ರೂವಾರಿ ಡಾ. ಯು.ಪಿ. ಶಿವಾನಂದ್ ಮಾತನಾಡಿ, ಭ್ರಷ್ಟಾಚಾರ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಇದನ್ನು ಇಲ್ಲವಾಗಿಸಬೇಕಾದರೆ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ಈ ದೆಸೆಯಲ್ಲಿ ಶಾಲಾ – ಕಾಲೇಜುಗಳಿಗೆ ತೆರಳಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗುತ್ತದೆ ಎಂದರು.
ಕಾಲೇಜು ಪ್ರಾಂಶುಪಾಲ ಶ್ರೀಧರ್ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ. ಆದರೆ ಕಾಲೇಜು ಜೀವನ ಮುಗಿಸಿ ಸಾಮಾಜಿಕ ಜೀವನಕ್ಕೆ ಕಾಲಿಡುವಾಗ ನಮ್ಮಗೆ ಅರಿವಿಲ್ಲದಂತೆ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುವಂತಾಗುತ್ತದೆ. ಇದನ್ನು ತಡೆಯಬೇಕಾದರೆ ವಿದ್ಯಾರ್ಥಿ ದೆಸೆಯಲ್ಲಿ ಅರಿವನ್ನು ಮೂಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಸುದ್ದಿ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಅಂಕಣಕಾರರೂ, ಉಪನ್ಯಾಸಕರೂ ಆಗಿರುವ ಡಾ. ನರೇಂದ್ರ ರೈ ದೇರ್ಲ ಉಪಸ್ಥಿತರಿದ್ದರು. ಸುದ್ದಿ ಜನಾಂದೋಲನ ವೇದಿಕೆಯ ಪುತ್ತೂರು ಮುಖ್ಯಸ್ಥ ಗಣೇಶ್ ಎನ್. ಕಲ್ಲರ್ಪೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕುಶಾಲಪ್ಪ ಸಹಕರಿಸಿದರು.