ಪುತ್ತೂರು; ವಿಜಯ ಬ್ಯಾಂಕ್ ನ ನಿವೃತ್ತ ಸೀನಿಯರ್ ಮ್ಯಾನೇಜರ್, ಗುಜರಾತ್ ನ ಅಹಮದಾಬಾದ್ ಬಂಟರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಹೊಸಮನೆ ನಾರಾಯಣ ರೈ(66ವ.)ಯವರು ಅಲ್ಪ ಕಾಲದ ಅಸೌಖ್ಯದಿಂದ ಫೆ.10ರಂದು ಅಜ್ಜಿಕಲ್ಲು ಹೊಸಮನೆಯಲ್ಲಿ ನಿಧನರಾದರು.
ಬಾಲ್ಯೊಟ್ಟು ಗುತ್ತು ಅಂಗರಾಜೆ ಸೇಸಪ್ಪ ರೈ ಹಾಗೂ ಮಾಯಿಪ್ಪಾಡಿ ಗುತ್ತು ಹೊಸಮನೆ ಅಕ್ಕಮ್ಮ ಎಸ್.ರೈ ದಂಪತಿ ಪುತ್ರರಾಗಿರುವ ನಾರಾಯಣ ರೈಯವರು ಪದವಿ ವಿದ್ಯಾಭ್ಯಾಸ ಪಡೆದ ಬಳಿಕ ವಿಜಯ ಬ್ಯಾಂಕ್ ಗೆ ನೇಮಕಗೊಂಡು ಹೈದರಾಬಾದ್, ಸಕಲೇಶಪುರ, ಮೀರತ್, ದೇವರಾಯಸಂದ್ರ, ಫಿರೋಝ್ ಬಾದ್, ಸಿಕ್ಕಿಂನ ಗ್ಯಾಂಗ್ ಟಾಕ್, ಕೋಲ್ಕತ್ತಾ, ಅಹದಾಬಾದ್, ಬೆಂಗಳೂರು ಹಾಗೂ ಮುಂಬಯಿ ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು. ಸುಮಾರು28 ವರ್ಷಗಳ ಕಾಲ ವಿಜಯ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿದ ಬಳಿಕ ಅಹಮದಾಬಾದ್ ನಲ್ಲಿ ನ್ಯಾಷನಲ್ ಕಮಾಡಿಟಿಸ್ ನಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿ, ನಂತರ ಮುಂಬಯಿ ಐಸಿಇಎಕ್ಸ್ ನಲ್ಲಿ ಕನ್ಸಲ್ ಟೆಂಟ್ ಆಗಿ ಕರ್ತವ್ಯ ನಿರ್ಹಹಿಸಿದ್ದ ಅವರು ಮುಂಬಯಿಯಲ್ಲಿ ವಾಸ್ತವ್ಯವಿದ್ದರು. ಕೆಲ ಸಮಯಗಳ ಹಿಂದೆ ಹುಟ್ಟೂರಿಗೆ ಬಂದು ವಾಸ್ತವ್ಯವಿದ್ದರು.
ಮೃತರು ಬ್ಯಾಂಕ್ ನೌಕರರ ಯೂನಿಯನ್ ಪದಾಧಿಕಾರಿಯಾಗಿ ಸೇವೆ ಸಲ್ಲಿರುತ್ತಾರೆ. ಸಾಹಿತಿಯಾಗಿ, ಲೇಖಕರಾಗಿ, ಕವಿಯಾಗಿಯೂ ಗುರುತಿಸಿಕೊಂಡದ್ದರು. ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಗುಜರಾತ್ ನ ರಾಜ್ಯ ಘಟಕದಲ್ಲಿ ಸಕ್ರಿಯರಾಗಿದ್ದರು. ಆಧ್ಯಾತ್ಮಿಕ ಚಿಂತನೆಗಳನ್ನು ಹೊಂದಿದ್ದ ಅವರು ಅನೇಕ ಸತ್ಸಂಗಗಳನ್ನು ನಡೆಸುತ್ತಿದ್ದರು.
ಮೃತರು ಪತ್ನಿ ಉಷಾ ಎನ್. ರೈ, ಪುತ್ರರಾದ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಅನುಪಮ್ ರೈ, ನಿಟ್ಟೆಯ ಇಂಜಿನಿಯರಿಂಗ್ ವಿದ್ಯಾರ್ಥಿ ಶೋಭಿತ್ ರೈ, ಸೊಸೆ ಬೆಂಗಳೂರಿನ ಉದ್ಯೋಗಿ ತೀರ್ಥ ಶೆಟ್ಟಿ, ಸಹೋದರರಾದ ಡಾ.ಎ.ಕೆ ರೈ, ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಶ್ರೀಧರ ರೈ, ಸಹೋದರಿಯರಾದ ಶಾಂಭವಿ ಜಾರಪ್ಪ ಶೆಟ್ಟಿ, ಶಾರದಾ ವಿಶ್ವನಾಥ ರೈ, ಬಾವ ಸೋಮಶೇಖರ ರೈ ಇಳಂತಾಜೆ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.