![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಚಿನ್ನದ ಮೇಲೆ ಹಣ ಹೂಡಿಕೆ ಮಾಡಿ ಲಾಭಾಂಶ ನೀಡುವುದಾಗಿ ಭರವಸೆ ನೀಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಆರೋಪಿ ರಾಜಕೀಯ ಪಕ್ಷವೊಂದರ ನಗರ ಸಮಿತಿಯ ಮಾಜಿ ಅಧ್ಯಕ್ಷನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪುತ್ತೂರು ಪ್ರಧಾನ ಸಿವಿಲ್ ನ್ಯಾಯಾಲಯ ಹಿರಿಯ ವಿಭಾಗ ಮತ್ತು ಎ ಸಿ ಜೆ ಎಮ್ ನ್ಯಾಯಾಧೀಶರು ಪುತ್ತೂರು ನಗರ ಪೊಲೀಸ್ ಠಾಣೆಗೆ ಆದೇಶ ನೀಡಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ ಡಿ ಪಿ ಐ ರಾಜಕೀಯ ಪಕ್ಷದ ಪುತ್ತೂರು ನಗರದ ಮಾಜಿ ಅಧ್ಯಕ್ಷ ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಪೈಸಾರಿ ನಿವಾಸಿ ಅಬ್ದುಲ್ ಬಶೀರ್ ಇಬ್ರಾಹಿಂ ಅವರು ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿ. ಬನ್ನೂರು ನಿವಾಸಿ ಬಿ ಮಹಮ್ಮದ್ ಹನೀಫ್ ಎಂಬವರು ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನಂತೆ ಚಿನ್ನದ ಮೇಲೆ ಹಣ ಹೂಡಿಕೆ ಮಾಡಿ ಲಾಭಾಂಶ ಕೊಡುವುದಾಗಿ ಹೇಳಿ ರೂ.38,50,000 ಹಣ ಪಡೆದು ಲಾಭಾಂಶ ನೀಡದೇ, ಸಂಪರ್ಕಕ್ಕೂ ಸಿಗದೇ ಅಬ್ದುಲ್ ಬಶೀರ್ ಇಬ್ರಾಹಿಂ ಅವರು ವಂಚಿಸಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ವಂಚನೆಗೊಳಗಾದ ವ್ಯಕ್ತಿಯ ಖಾಸಗಿ ದೂರಿನ ವಾದ ಮಂಡನೆ ಆಲಿಸಿದ ನ್ಯಾಯಾಲಯ ಆರೋಪಿ ಅಬ್ದುಲ್ ಬಶೀರ್ ಇಬ್ರಾಹಿಂ ರವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಮಾಡಲು ಪುತ್ತೂರು ನಗರ ಪೊಲೀಸ್ ಠಾಣೆಗೆ ಫೆ.7ರಂದು ಆದೇಶ ನೀಡಿತ್ತು. ಇದೀಗ ನ್ಯಾಯಾಲಯದ ಆದೇಶದಂತೆ ಫೆ.17ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.