ವಿಟ್ಲ: ಪ್ರಯೋಗದ ಜತೆಗೆ ಕಲಿತಾಗ ಅನುಭವ ಲಭಿಸುತ್ತದೆ. ಯುವ ಪೀಳಿಗೆ ಶಿಬಿರದ ಸಾರವನ್ನು ಜಗತ್ತಿಗೆ ಸಾರಬೇಕು. ಆಧ್ಯಾತ್ಮ ಎಂಬುದು ಜೀವ ಚೇತನವನ್ನು ತಿಳಿಸುತ್ತದೆ. ಮಾಡುವ ಕಾರ್ಯದಲ್ಲಿ ವೈಜ್ಞಾನಿಕ ದೃಷ್ಟಿಕೋನದ ಅಗತ್ಯವಿದೆ ಎಂದು ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ. ಎಸ್. ಕೃಷ್ಣ ಭಟ್ ಹೇಳಿದರು.
ಅವರು ಅಳಿಕೆ ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪುತ್ತೂರು ವಿವೇಕಾನಂದ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತಾನಾಡಿ ತ್ಯಾಗ, ಸೇವೆ ಮತ್ತು ಸಮರ್ಪಣೆಗಾಗಿ ಭಾರತವನ್ನು ಜಗತ್ತು ಗುರುತಿಸಿದೆ. ಸ್ವಾರ್ಥತೆಯಿಂದ ಇಂದು ಸೇವೆಗೆ ಬೆಲೆ ಇಲ್ಲದಂತಾಗಿದೆ. ಅಪೇಕ್ಷೆಯಿಲ್ಲದೆ ಮಾಡುವ ಕಾರ್ಯಕ್ಕೆ ಬೆಲೆ ಸಿಗುತ್ತದೆ. ಗ್ರಾಮದ ಜತೆಗೆ ಬೆಸುಗೆ ಹಾಕುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು. ಗ್ರಾಮದ ಸಮಗ್ರ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ತಿಳಿಸಿದರು.
ವಿವೇಕಾನಂದ ಕಾಲೇಜು ಪ್ರಾಂಶುಪಾಲ ವಿಷ್ಣುಗಣಪತಿ ಭಟ್ ಮಾತನಾಡಿ ಶಿಬಿರದಲ್ಲಿ ವಿದ್ಯಾರ್ಥಿಗಳು ಕೆಲಸವನ್ನು ಕಲಿಯಬೇಕು. ಕಲಿಕೆಯ ವಿಚಾರ ಜೀವನದ ವಿವಿಧ ಹಂತದಲ್ಲಿ ಸಹಾಯವಾಗುತ್ತದೆ. ಪರಿವರ್ತನೆಗಾಗಿ ಶಿಬಿರವಿದ್ದು, ಶಿಬಿರದಲ್ಲಿ ಭಾಗವಹಿಸಿದವರಲ್ಲಿ ಭಿನ್ನತೆ ಕಾಣಬೇಕು. ರಾಷ್ಟ್ರೀಯ ಚಿಂತನೆಯಲ್ಲಿ ನಡೆದಾಗ ಸಮಾಜಕ್ಕೆ ಮಾದರಿಯಾಗುತ್ತದೆ. ಆರೋಗ್ಯವನ್ನು ಕಾಪಾಡುವ ಜವಾಬ್ದಾರಿಯು ವಿದ್ಯಾರ್ಥಿಗಳ ಮೇಲಿದೆ ಎಂದು ತಿಳಿಸಿದರು.
ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್, ಅಳಿಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ ಮಡಿಯಾಲ, ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಕಾರ್ಯದರ್ಶಿ ಸುರೇಶ್ ಮಡಿಯಾಲ, ಘಟಕ ಮುಖ್ಯಸ್ಥರಾದ ಸ್ವಸ್ತಿಕ್, ಭಾರತಿ, ಅರ್ಚನಾ, ನಾಗೇಂದ್ರ ಶರ್ಮ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀನಾಥ್ ಬಿ. ಸ್ವಾಗತಿಸಿದರು. ಉಪನ್ಯಾಸಕರಾದ ಉಮಾ ದಾನಿಗಳ ಪಟ್ಟಿ ಓದಿದರು. ಭವ್ಯ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವಿದ್ಯಾ ಎಸ್. ಕಾರ್ಯಕ್ರಮ ನಿರೂಪಿಸಿದರು.