ಪುತ್ತೂರು; ಬನ್ನೂರು ಸ್ಫೂರ್ತಿ ಮೈದಾನದಲ್ಲಿರುವ ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ 17ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ, ಸ್ಫೂರ್ತಿ ಯುವಕ ಮಂಡಲ, ಸ್ಫೂರ್ತಿ ಮಹಿಳಾ ಮಂಡಲ ಹಾಗೂ ಸ್ಫೂರ್ತಿ ಬಾಲಸಭಾ ಇದರ 32ನೇ ವಾರ್ಷಿಕೋತ್ಸವವು ಫೆ.26ರಂದು ನಡೆಯಿತು.
ಕೆಮ್ಮಿಂಜೆ ವೇ.ಮೂ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶ್ರೀ ಶನೀಶ್ವರ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆಯ ಬಳಿಕ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಸಹಾಯಕಿ ಮೀನಾಕ್ಷಿಯವರನ್ನು ಸನ್ಮಾನಿಸಲಾಯಿತು. ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಸ್ಫೂರ್ತಿ ಯುವ ಸಂಸ್ಥೆಗಳ ಸಂಚಾಲಕ ದಿನೇಶ್ ಸಾಲಿಯಾನ್ ಉಪಸ್ಥಿತರಿದ್ದರು.
ಹಾಗೂ ಅನ್ನಸಂತರ್ಪಣೆ, ಸಂಜೆ ಉಳ್ಳಾಲ್ತಿ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು.
ಯುವ ಸಂಸ್ಥೆಗಳ ವಾರ್ಷಿಕೋತ್ಸವ;
ಸಂಜೆ ನಡೆದ ಸ್ಫೂರ್ತಿ ಯುವ ಸಂಸ್ಥೆಗಳ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮಿಜಿಯವರು ಮಾತನಾಡಿ, ಬನ್ನೂರಿಗಿಂತ ಶ್ರೇಷ್ಠ ಊರು ಇನ್ನೊಂದು ಊರಿಲ್ಲ. ಮಕ್ಕಳಿಂದ ವೃದ್ಧರ ತನಕ ಪ್ರತಿಯೊಬ್ಬರು ಸ್ಫೂರ್ತಿಯಿಂದ ಸೇರಿಕೊಂಡು, ಕಾರ್ಯಕ್ರಮಗಳು ಬಹಳಷ್ಟು ಸ್ಫೂರ್ತಿ ಯಿಂದ ನಡೆಯುತ್ತಿದೆ. ಯುವ ಸಂಸ್ಥೆಗಳ ಮುಖಾಂತರ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಸಂಗಮವಾಗಿದೆ ಎಂದರು. ಮಕ್ಕಳಿಗೆ ವಿದ್ಯೆಯ ಜೊತೆಗೆ ಧಾರ್ಮಿಕ ಸಂಸ್ಕಾರವನ್ನು ಬೆಳೆಸಬೇಕು. ಸ್ಫೂರ್ತಿ ಯುವ ಸಂಸ್ಥೆಯಲ್ಲಿ ಮಕ್ಕಳು, ಮಹಿಳೆಯರು ಸಂಸ್ಕಾರದಿಂದ ಭಾಗವಹಿಸುತ್ತಿದ್ದು ಇದೇ ರೀತಿ ಎಲ್ಲಾ ಕಡೆಗಳಲ್ಲಿಯೂ ನಡೆದರೆ ದೇಶದ ಸಂಸ್ಕೃತಿ ಬೆಳೆಯಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ನಿರೂಪಕಿ, ಬರಹಗಾರ್ತಿ ರೇಣುಕಾ ಕಾಣಿಯೂರು ಮಾತನಾಡಿ, ಯುವ ಶಕ್ತಿ ಅಣುಶಕ್ತಿಗಿಂತಲೂ ಬಲಾಢ್ಯವಾದುದು. ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಶಕ್ತಿ ಯುವಶಕ್ತಿಯಲ್ಲಿದೆ. ಯುವಶಕ್ತಿಯಿರುವಲ್ಲಿ ಸೇವೆಯಿರುತ್ತದೆ. ಸಂಘಟನೆಯಿಂದ ಸಮಾಜಕ್ಕೆ ಶಕ್ತಿ ಬರಲಿದೆ ಎಂದರು.
ನಗರ ಸಭಾ ಸದಸ್ಯೆ ಗೌರಿ ಬನ್ನೂರು, ಸಂಚಾರಿ ಠಾಣಾ ನಿರೀಕ್ಷಕ ರಾಮ ನಾಯ್ಕ ಮಾತನಾಡಿ ಶುಭಹಾರೈಸಿದರು. ಸ್ಫೂರ್ತಿ ಯುವಕ ಮಂಡಲದ ಅಧ್ಯಕ್ಷ ಸೂರ್ಯ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಸಂಚಾಲಕ ದಿನೇಶ್ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆ, ಸೇವೆ, ಸಂಸ್ಕೃತಿಯ ನೆಲೆಯಲ್ಲಿ ಯುವ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಜನಪರ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸೇವೆಯ ಮೂಲಕ ಯುವ ಸಂಸ್ಥೆ ತಾಲೂಕು, ಜಿಲ್ಲೆಗಳಲ್ಲಿ ಗುರುತಿಸಿಕೊಂಡಿದೆ ಎಂದರು.
ಸ್ಫೂರ್ತಿ ಮಹಿಳಾ ಮಂಡಲದ ಅಧ್ಯಕ್ಷೆ ಲಾವಣ್ಯ, ಕಾರ್ಯದರ್ಶಿಜ್ಯೋತಿ ನಾರಾಯಣ್, ಬಾಲಸಭಾದ ಅಧ್ಯಕ್ಷ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಫೂರ್ತಿಶ್ರೀ ಪ್ರಶಸ್ತಿ, ಸನ್ಮಾನ;
ನಿವೃತ್ತ ಮುಖ್ಯಗುರು ಮುದರ ಎಸ್., ನಿವೃತ್ತ ಆರೋಗ್ಯ ಇಲಾಖೆ ಸಹಾಯಕಿ ಚಂಚಲಾಕ್ಷಿ, ಪೂವಪ್ಪ ಮೇಸ್ತ್ರಿ ಗುರುಂಪುನಾರ್ ರವರನ್ನು ಸ್ಫೂರ್ತಿ ನೀಡಿ ಸನ್ಮಾನಿಸಲಾಯಿತು. ಆರೋಗ್ಯ ಸಹಾಯಕಿ ಮೀನಾಕ್ಷಿ, ನೆಲ್ಲಿಕಟ್ಟೆ ನಗರ ಪ್ರಾಥಮಿಕ ಕೇಂದ್ರದ ಶುಶ್ರೂಷಕಿ ಜಾಜಿಶ್ರೀ ಪ್ರೀತಾ, ಆಶಾ ಕಾರ್ಯಕರ್ತೆಯರಾದ ಶಶಿಕಲಾ, ಸುಜಾತ ಡಿ.ಎಸ್., ಸರಸ್ವತಿ, ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಯಜ್ಞಶ್ರೀ, ಯವರನ್ನು ಗೌರವಿಸಲಾಯಿತು.
ಶ್ರಾವ್ಯ ಹಾಗೂ ಹಿತಾಶ್ರೀ ಪ್ರಾರ್ಥಿಸಿದರು.
ಜನಾರ್ದನ ಪ್ರಮೀಳಾ ದಂಪತಿ ಸ್ವಾಮಿಜಿಯರನ್ನು ಫಲಪುಷ್ಪ ನೀಡಿ ಗೌರವಿಸಿದರು. ಸ್ಫೂರ್ತಿ ಯುವಕ ಮಂಡಲದ ಉಪಾಧ್ಯಕ್ಷ ನವೀನ್ ಸ್ವಾಗತಿಸಿದರು. ವನಿತಾ ವಿಶ್ವನಾಥ ವರದಿ ವಾಚಿಸಿದರು. ನಾಗೇಶ್ ಕುಮಾರ್, ರೋಹಿಣಿ, ವನಿತಾ ವಿಶ್ವನಾಥ, ಉದಯ ಕುಮಾರ್, ಗುರುಪ್ರಸಾದ್, ಭಕ್ತಿ ಡಿ.ಎಸ್, ಪ್ರಮೋದ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಸಂಜೆ ಅಂಗನವಾಡಿ ಪುಟಾಣಿಗಳು, ಶಾಲಾ ಮಕ್ಕಳು ಹಾಗೂ ಸಂಘ-ಸಂಸ್ಥೆಗಳ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ರಾತ್ರಿ ಶಿವಗಾಮಿ ನಾಟ್ಯಾಲಯ,ನೆಕ್ಕಿಲ ಬನ್ನೂರು ಇದರ ವಿದ್ಯಾರ್ಥಿಗಳಿಂದ ನಾಟ್ಯ ವೈಭವ ನಡೆಯಿತು