![](https://puttur.suddinews.com/wp-content/uploads/2022/04/4d34ea0046714893b2293edb4c2fa34c.jpg)
ನಿಡ್ಪಳ್ಳಿ; ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಮೂಲಸ್ಥಾನ ಜಾಂಬ್ರಿ ಗುಹೆ ಮತ್ತು ಅದರ ಪರಿಸರದ ಪಾವಿತ್ರ್ಯತೆ ಮತ್ತು ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಅದ್ಯ ಕರ್ತವ್ಯ ಎಂದು ಮನಗಂಡು ಆ ಪರಿಸರದಲ್ಲಿ ದಾನಿಗಳ ಮುಖಾಂತರ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.
ಜಾಂಬ್ರಿ ಗುಹೆ ಪರಿಸರದಲ್ಲಿ ಪ್ಲಾಸ್ಟಿಕ್, ಬಾಟ್ಲಿ , ಕೋಳಿ ತ್ಯಾಜ್ಯ ಸೇರಿದಂತೆ ತ್ಯಾಜ್ಯ ಹಾಕಿ ಮಲೀನ ಗೊಂಡಿದ್ದ ಸಂದರ್ಭದಲ್ಲಿ ಪಾಣಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕಳೆದ ವರ್ಷ ಆಗಸ್ಟ್.8 ರಂದು ಎರಡೂ ರಾಜ್ಯಗಳ ಸಂಘ ಸಂಸ್ಥೆಗಳ ಮತ್ತು ಪರಿಸರ ಪ್ರೇಮಿಗಳ ಸಹಯೋಗದಲ್ಲಿ ಅತ್ಯದ್ಭುತ ರೀತಿಯಲ್ಲಿ ಸ್ವಚ್ಚತಾ ಅಭಿಯಾನವನ್ನು ಜರುಗಿಸಿ ಇಡೀ ಪರಿಸರವನ್ನು ಸ್ವಚ್ಛಗೊಳಿಸಲಾಗಿತ್ತು.ನಂತರ ಪಾಣಾಜೆ ಗ್ರಾಮ ಪಂಚಾಯತ್ ವತಿಯಿಂದ 3 ಕಸದ ತೊಟ್ಟಿಗಳನ್ನು ಇರಿಸಿ ಪರಿಸರದ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಲಾಗಿತ್ತು.
ಅಂದು ನಿಶ್ಚಯಿಸಿದಂತೆ ಈಗ ಜಾಂಬ್ರಿ ಗುಹಾ ಪರಿಸರದ 5 ಕಡೆಗಳಲ್ಲಿ 5 ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ. ನಮ್ಮ ರಸ್ತೆ ನಮ್ಮ ಹಕ್ಕು ಸಮಿತಿ.ಆರ್ಲಪದವು, ದ.ಕ ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು,ಪಂಚಾಯತ್ ಮಾಜಿ ಸದಸ್ಯ ಕೇಶವ ಮುರಳಿ ಗಿಳಿಯಾಲು, ಜತ್ತಪ್ಪ ರೈ ಗಿಳಿಯಾಲು ಮತ್ತು ಮನೆಯವರು, ಗಿಳಿಯಾಲು ಮಹಾಬಲೇಶ್ವರ ಭಟ್ ಮತ್ತು ಮನೆಯವರು ಎಚ್ಚರಿಕೆ ಫಲಕಗಳನ್ನು ಕೊಡುಗೆಯಾಗಿ ನೀಡಿದ ದಾನಿಗಳು ಎಂದು ಹಿರಿಯರಾದ ಮಹಾಬಲೇಶ್ವರ ಭಟ್ ಗಿಳಿಯಾಲು ತಿಳಿಸಿದ್ದಾರೆ.