ಪುತ್ತೂರು: ದೇಶದಲ್ಲಿ ನಡೆಯುತ್ತಿರುವ ಮುಸ್ಲಿಮರ ಮೇಲಿನ ಹಿಂಸಾಚಾರ, ದಾಳಿಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಪುತ್ತೂರು ವತಿಯಿಂದ ಎ.ಸಿ ಕಛೇರಿ ಮುಂಭಾಗದಲ್ಲಿ ಎ.16ರಂದು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಪಿಎಫ್ಐ ಸದಸ್ಯ ರಿಯಾಝ್ ಮಾತನಾಡಿ ದೇಶದಲ್ಲಿ ಅಂಬೇಡ್ಕರ್ರವರ ಸಂವಿಧಾನವನ್ನು ಬುಡಮೇಲು ಮಾಡಿಕೊಂಡು ಮನುವಾದಿಗಳು ಮುಸಲ್ಮಾನರ ವಿರುದ್ಧ ಹಿಂಸಾಚಾರ ಕೃತ್ಯಗಳು ನಡೆಸುತ್ತಿದ್ದಾರೆ, ನೈಜ ಹಿಂದೂಗಳು ರಾಮನವಮಿ ಹಬ್ಬವನ್ನು ಭಕ್ತಿಯಿಂದ ಆಚರಿಸಿದರೆ ಹಿಂದುತ್ವವಾದಿಗಳು ಮುಸಲ್ಮಾನರ ವಿರುದ್ಧ ದೌರ್ಜನ್ಯ, ಹಿಂಸಾಚಾರ ನಡೆಸಿ, ಮುಸಲ್ಮಾನರ ವಿರುದ್ಧ ಪ್ರಚೋದನಕಾರಿ ಘೋಷಣೆ ಕೂಗಿ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಹೇಳಿದರು. ಪುತ್ತೂರಿನಲ್ಲೂ ಹಿಂದುತ್ವವಾದಿಗಳು ಮುಸಲ್ಮಾನರ ವ್ಯಾಪಾರಕ್ಕೆ ಬಹಿಷ್ಕಾರಕ್ಕೆ ಕರೆ ನೀಡಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ. ಸೌಹಾರ್ದ ಭಾರತ ಕಟ್ಟುವ ನಿಟ್ಟಿನಲ್ಲಿ ದೇಶದ ಪ್ರಜ್ಞಾವಂತ ನಾಗರಿಕರು, ನೈಜ ಹಿಂದೂಗಳು ಸೇರಿ ನಕಲಿ ಹಿಂದುತ್ವವಾದಿಗಳ ಆಕ್ರಮಣಕಾರಿ ಕೃತ್ಯಗಳನ್ನು ಎದುರಿಸಬೇಕು, ಸೌಹಾರ್ದ ಭಾರತ ನಿರ್ಮಾಣ ಮಾಡಲು ಎಲ್ಲರೂ ಜೊತೆಯಾಗಬೇಕು ಎಂದು ಅವರು ಹೇಳಿದರು. ಉಸ್ಮಾನ್ ಎ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಿಎಫ್ಐ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಕೆಮ್ಮಾಯಿ, ಜಿಲ್ಲಾ ಸಮಿತಿ ಸದಸ್ಯರಫೀಕ್ ಎಂ.ಎಸ್, ಸಿಟಿ ಡಿವಿಝನ್ ಅಧ್ಯಕ್ಷ ಉಮ್ಮರ್ ಕೂರ್ನಡ್ಕ, ಕುಂಬ್ರ ಡಿವಿಝನ್ ಅಧ್ಯಕ್ಷ ಶಾಕಿರ್ ಕಟ್ಟತ್ತಾರ್, ಸವಣೂರು ಡಿವಿಝನ್ ಅಧ್ಯಕ್ಷ ಬಾತಿಷ ಬಡಕ್ಕೋಡಿ, ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಹಮೀದ್ ಸಾಲ್ಮರ ಉಪಸ್ಥಿತರಿದ್ದರು. ಇಕ್ಬಾಲ್ ಮುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.